ಡಂಬಳ: ಗ್ರಾಮೀಣ ಗೀಗಿಪದ, ಜಾನಪದ, ಒಡಪು, ಸೋಬಾನೆ ಪದ, ಬೀಸುವ ಕಲ್ಲಿನ ಪದಗಳು ಉಳಿಸಿ ಬೆಳೆಸಬೇಕು. ಕಲೆ ಉಳಿದರೆ ಸಂಸ್ಕೃತಿ ಉಳಿಸಿ, ಬೆಳೆಸಲು ಸಾಧ್ಯ ಎಂದು ಸ್ಪಂದನಾ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ ಸಂಗನಗೌಡ ಪಾಟೀಲ ತಿಳಿಸಿದರು.
ಮಹಿಳೆಯರು ಎಂದರೆ ಕೇವಲ ಒಂದು ಪದವಲ್ಲ. ಅವಳು ತಾಯಿ, ಸಹೋದರಿ, ಶಿಕ್ಷಕಿ, ನಾಯಕಿ ಮತ್ತು ಸಮಾಜದ ಶಕ್ತಿ. ಒಂದು ಕುಟುಂಬದ ಬೆನ್ನೆಲುಬು ಮಹಿಳೆ. ಒಂದು ರಾಷ್ಟ್ರದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವಾಗಿದೆ. ದೇಶದಲ್ಲಿ ಅನೇಕ ಮಹಾನ್ ಮಹಿಳೆಯರು ಸಮಾಜಕ್ಕೆ ಪ್ರೇರಣೆ ನೀಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಸಾವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ ಮುಂತಾದವರು ತಮ್ಮ ಧೈರ್ಯ, ಜ್ಞಾನ ಮತ್ತು ಪರಿಶ್ರಮದಿಂದ ಇತಿಹಾಸ ನಿರ್ಮಿಸಿದ್ದಾರೆ ಎಂದರು.
ಮಹಿಳೆಯರು ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ, ಸೇನೆ ಹಾಗೂ ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದಾರೆ. ಒಬ್ಬ ಮಹಿಳೆಗೆ ಶಿಕ್ಷಣ ಕೊಡಿಸಿದರೆ ಒಂದು ಕುಟುಂಬ ಶಿಕ್ಷಣ ಪಡೆಯುತ್ತದೆ ಎಂಬ ಮಾತು ಸತ್ಯ. ಮಹಿಳೆಯರ ಶಕ್ತಿ ದೇಶದ ಶಕ್ತಿ ಎಂದರು.ಹಿರಿಯರಾದ ಜಯಮ್ಮ ಯಲಭೋವಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲರು ಹುಲಿಗುಡ್ಡ ಏತ ನೀರಾವರಿ ಮೂಲಕ ಕೆರೆಗಳನ್ನು ಭರ್ತಿಗೊಳಿಸಿದ್ದರಿಂದ ಮಹಿಳೆಯರು ಹೈನುಗಾರಿಕೆ, ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕ ಸ್ಥಿತಿವಂತರಾಗಿದ್ದಾರೆ. ಮತ್ತೆ ಈ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಥಿನಿಯರ ಹಿತಕ್ಕಾಗಿ ₹150 ಕೋಟಿ ಮೂಲಕ ತೋಟಗಾರಿಕೆ ಕಾಲೇಜು ನಿರ್ಮಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಪ್ರಾಸ್ತಾವಿಕವಾಗಿ ಲಕ್ಷ್ಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಈರವ್ವ ಅಂಕದ, ಸತ್ಯವ್ವ ಉದಂಡಿ, ಕಮಲಮ್ಮ ಅಣ್ಣಿಗೇರಿ, ನಿರ್ಮಲಾ ಹೊಸಕೇರಿ, ಬಾಳವ್ವ ಜೊಂಡಿ, ಯಮನಮ್ಮ ನದಾಫ, ಮಾದೇವಮ್ಮ ಕೊಳ್ಳಾರ, ಶ್ರೀದೇವಿ ಹಿರೇಮಠ, ನಿರ್ಮಲಾ ಗಡಗಿ, ಲಲಿತಾ ಜೋಂಡಿ, ಶೇಖಮ್ಮ ಪ್ಯಾಟಿ, ಶಕುಂತಲಾ ನರೇಗಲ್ಲ, ವಿಶಾಲಾಕ್ಷಿ ಕೊಂತಿಕಲ್ಲ, ಸ್ಪಂದನಾ ಮಹಿಳಾ ಮಂಡಳ ಸದಸ್ಯರು, ವಿವಿಧ ಗ್ರಾಮಗಳಿಂದ ನೂರಾರು ಮಹಿಳೆಯರು ಇದ್ದರು.