ಕೂಸಿನ ಮನೆಯಲ್ಲಿ ಖಾತ್ರಿ ಮಹಿಳೆಯರ ಜೋಗುಳ!

KannadaprabhaNewsNetwork |  
Published : Jan 30, 2024, 02:06 AM IST
ಪೋಟೋ ಇವೆ. | Kannada Prabha

ಸಾರಾಂಶ

ಖಾತ್ರಿ ಯೋಜನೆಯಡಿ ಹೆಚ್ಚಿನ ಮಹಿಳೆಯರು ಕೆಲಸಕ್ಕೆ ತೆರಳಿದರೆ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಇದನ್ನು ತಡೆದು ಮಹಿಳೆಯರ ಉದ್ಯೋಗಕ್ಕೆ ಒತ್ತು ನೀಡಲು ಕೂಸಿನ ಮನೆಗಳನ್ನು ತೆರೆಯಲಾಗಿದೆ.

ಶಿ‍ವಾನಂದ ಅಂಗಡಿ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ತೆರಳುವ ಮಹಿಳೆಯರ ಶಿಶುಗಳ ಆರೈಕೆಗಾಗಿಯೇ ಗ್ರಾಪಂ ಮಟ್ಟದಲ್ಲಿ ಕೂಸಿನ ಮನೆ (ಶಿಶುಪಾಲನಾ ಕೇಂದ್ರಗಳು) ಶುರುವಾಗಿದ್ದು, ತರಬೇತಿ ಪಡೆದ ಖಾತ್ರಿ ಕೆಲಸದ ಮಹಿಳೆಯರು ಶಿಶುಗಳನ್ನು ತೊಟ್ಟಿಲಲ್ಲಿ ತೂಗಿ ಜೋಗುಳ ಹಾಡುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕೂಸಿನ ಮನೆ ಕೇಂದ್ರಗಳನ್ನು ಆರಂಭಿಸಿದೆ. ಹಳ್ಳಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಮಹಿಳೆಯರು ಕೆಲಸಕ್ಕೆ ತೆರಳಿದರೆ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಇದರಿಂದ ಮಹಿಳೆಯರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಇನ್ನೂ ಕೆಲ ತಾಯಂದಿರು ಮಕ್ಕಳನ್ನು ಕರೆದುಕೊಂಡು ಕಾಮಗಾರಿ ಸ್ಥಳಕ್ಕೆ ಹೋಗುತ್ತಿದ್ದರು. ಇದನ್ನು ತಡೆದು ಮಹಿಳೆಯರ ಉದ್ಯೋಗಕ್ಕೆ ಒತ್ತು ನೀಡಲು ಕೂಸಿನ ಮನೆಗಳನ್ನು ತೆರೆಯಲಾಗಿದೆ. ಆರು ತಿಂಗಳಿಂದ 3 ವರ್ಷದ ಶಿಶುಗಳಿಗೆ ಕೇಂದ್ರದಲ್ಲಿ ಆರೈಕೆ ದೊರೆಯಲಿದೆ.

ಕಳೆದ ಆ. 15ರಂದೇ ಶಿಶುಪಾಲನಾ ಕೇಂದ್ರ ಆರಂಭಿಸಿ ಪೂಜೆ ಸಲ್ಲಿಸಲಾಗಿತ್ತು. ಗ್ರಾಮ ಪಂಚಾಯಿತಿಗಳಿಗೆ ಕೂಸಿನ ಮನೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದ್ದು, ಜನವರಿಯಲ್ಲಿ ಪ್ರತಿ ಪಂಚಾಯಿತಿಗೆ 1 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ.

ಆಯಾ ಗ್ರಾಪಂ ವ್ಯಾಪ್ತಿಯ ಪ್ರಾಥಮಿಕ ಶಾಲೆಯಲ್ಲಿ ಲಭ್ಯವಿರುವ ಕೊಠಡಿ, ಗ್ರಾಪಂ ಕಚೇರಿ ಕಟ್ಟಡ, ದೇವಾಲಯ ಹೀಗೆ ಬೇರೇ ಬೇರೆ ಕಡೆ ಕೂಸಿ ಮನೆ ಕೇಂದ್ರಗಳು ಆರಂಭವಾಗಿದೆ.

ಧಾರವಾಡ ಜಿಲ್ಲೆಯಲ್ಲಿ 102 ಕೇಂದ್ರ

ಧಾರವಾಡ ಜಿಲ್ಲೆಯಲ್ಲಿ 144 ಗ್ರಾಪಂಗಳಿವೆ. ಸದ್ಯ ನೀಡಲಾದ ಗುರಿಯಂತೆ 102 ಕೇಂದ್ರಗಳನ್ನು ಆರಂಭಿಸಲಾಗಿದೆ. 1138 ಶಿಶುಗಳು ಕೇಂದ್ರದಲ್ಲಿ ಆರೈಕೆ ಪಡೆಯುತ್ತಿವೆ. ಶಿಶುಗಳನ್ನು ನೋಡಿಕೊಳ್ಳುವ ಮಹಿಳೆಯರಿಗೆ ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ತರಬೇತಿ ನೀಡಲಾಯಿತು. ಪ್ರತಿ ಗ್ರಾಪಂಗೆ 8ರಿಂದ 10 ಮಹಿಳೆಯರಿಗೆ ತಾಲೂಕು ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳುವ ಎಸ್ಸೆಸ್ಸೆಲ್ಸಿವರೆಗೆ ಮುಗಿಸಿದ, ಜಾಬ್‌ ಕಾರ್ಡ್‌ ಹೊಂದಿದ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, ನೂರು ದಿನಗಳ ಕಾಲ ಕೇಂದ್ರವೊಂದರಲ್ಲಿ ಇಬ್ಬರು ಮಹಿಳೆಯರು ಶಿಶುಗಳ ಆರೈಕೆ ಮಾಡಲಿದ್ದಾರೆ. ಬಳಿಕ ತರಬೇತಿ ಪಡೆದ ಬೇರೆಯವರು ಆರೈಕೆ ಮಾಡಲಿದ್ದಾರೆ. ಖಾತ್ರಿ ಕೂಲಿ ದಿನಕ್ಕೆ ರು. 319ರಂತೆಯೇ ಶಿಶು ಆರೈಕೆದಾರರಿಗೆ ವೇತನ ಸಂದಾಯವಾಗಲಿದೆ ಎಂದು ನವಲಗುಂದ ತಾಪ ಇಒ ಭಾಗ್ಯಶ್ರೀ ಜಹಗೀರದಾರ ಮಾಹಿತಿ ನೀಡುತ್ತಾರೆ.

ಕೇಂದ್ರದಲ್ಲಿ ಏನೇನಿರಲಿದೆ?

ಗ್ರಾಮದಲ್ಲಿ ಲಭ್ಯವಿರುವ ಸುಸಜ್ಜಿತ ಸರ್ಕಾರಿ ಕಟ್ಟಡದಲ್ಲಿ ಕೇಂದ್ರ ತೆರೆಯಲಾಗಿದೆ. ನೀರು, ಗಾಳಿ, ಬೆಳಕು, ಶೌಚಾಲಯ ವ್ಯವಸ್ಥೆ ಇರಲಿದೆ. ಮಕ್ಕಳಿಗೆ ಆಟದ ಸಾಮಗ್ರಿಗಳು, ಕಲಿಕಾ ಸಾಮಗ್ರಿಗಳು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಬಿಡಿಸಿ ಗೋಡೆಗಳ ಆಕರ್ಷಣೆ ಹೆಚ್ಚಿಸಲಾಗಿದೆ. ಕನ್ನಡ, ಇಂಗ್ಲಿಷ್ ವರ್ಣಮಾಲೆಗಳು, ಅಂಕಿ ಸಂಖ್ಯೆಗಳನ್ನು ಬರೆಯಿಸಲಾಗಿದೆ. ಪ್ರತಿ ಮಗುವಿಗೂ ಮಧ್ಯಾಹ್ನ ಪೌಷ್ಟಿಕಾಂಶಯುಕ್ತ ಲಘು ಉಪಾಹಾರ ಸಿಗಲಿದೆ. ಆರೈಕೆದಾರರೇ ಆಟದ ಸಾಮಗ್ರಿಗಳ ಮೂಲಕ ಶಿಶುಗಳನ್ನು ಆಟಕ್ಕೆ ಪ್ರೋತ್ಸಾಹಿಸಲಿದ್ದಾರೆ.

ಉದ್ಯೋಗ ಖಾತ್ರಿ ಕೆಲಸದ ಮಹಿಳೆಯರೇ ಕೇಂದ್ರದಲ್ಲಿ ಶಿಶುಗಳ ಆರೈಕೆ ಮಾಡಲಿದ್ದಾರೆ. 100 ದಿನ ಕೂಲಿ ಕೆಲಸ ಅವಧಿ ಮುಗಿದ ಮೇಲೆ ತರಬೇತಿ ಪಡೆದ ಮತ್ತಿಬ್ಬರು ಮಹಿಳೆಯರು ಆರೈಕೆ ಮುಂದುವರಿಸುವರು. ಮೊದಲ ಹಂತದಲ್ಲಿ ಧಾರವಾಡ ಜಿಪಂ ವತಿಯಿಂದ ಒಬ್ಬರಿಗೆ ತರಬೇತಿ ನೀಡಲಾಗಿದೆ. ಆಮೇಲೆ 9 ಮಹಿಳೆಯರಿಗೆ ತಾಪಂನಲ್ಲಿ ತರಬೇತಿ ಕೊಟ್ಟಿದ್ದಾರೆ ಎಂದು ತಿರ್ಲಾಪುರ ಪಿಡಿಒ ವೀರನಗೌಡ ಪಾಟೀಲ ತಿಳಿಸಿದ್ದಾರೆ.

ಸರ್ಕಾರ ಶಿಶುಪಾಲನಾ ಕೇಂದ್ರ ಆರಂಭಿಸಿರುವುದರಿಂದ ನರೇಗಾ ಮಹಿಳಾ ಕೂಲಿ ಕಾರ್ಮಿಕ ಮಹಿಳೆಯರು ಶಿಶುಗಳನ್ನು ಕೂಸಿನ ಮನೆ ಕೇಂದ್ರಕ್ಕೆ ಸೇರಿಸಿದ್ದು, ನಿರಾಳರಾಗಿ ಖಾತ್ರಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರದಲ್ಲಿ ತಿರ್ಲಾಪುರ ಗ್ರಾಪಂದಿಂದ ಸಕಲ ಸೌಕರ್ಯ ಒದಗಿಸಿದ್ದೇವೆ ಎಂದು ತಿರ್ಲಾಪುರ ಗ್ರಾಪಂ ಅಧ್ಯಕ್ಷ ಬಸವರಾಜ ಆಕಳದ ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ 145 ಪಂಚಾಯಿತಿ ಪೈಕಿ, 102 ಗುರಿ ನೀಡಲಾಗಿತ್ತು. ಆ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈಗಾಗಲೇ ₹1ಲಕ್ಷ ಅನುದಾನ ನೀಡಿದ್ದು, ಸುಣ್ಣ, ಬಣ್ಣ ಬಳಿದು ಚಿತ್ರಗಳನ್ನು ಬಿಡಸಿದ್ದಾರೆ. ಅಡಿಗೆ ಸಾಮಾನು ಸಹ ಖರೀದಿಸಿದ್ದಾರೆ. ಕೇಂದ್ರದ ಹೆಚ್ಚುವರಿ ವೆಚ್ಚಗಳನ್ನು ಮಾಡಿಕೊಳ್ಳಲು ಗ್ರಾಪಂ ಅನಿರ್ಬಂಧಿತ ಅನುದಾನದಲ್ಲಿ ಖರ್ಚು ಮಾಡಿಕೊಳ್ಳಲು ಅವಕಾಶವಿದೆ ಎಂದು ಜಿಪಂ ಎಡಿಪಿಸಿ ಪ್ರಶಾಂತ ಧಾರವಾಡ ತಿಳಿಸಿದ್ದಾರೆ.,

ತಾಲೂಕುಗ್ರಾಪಂ ಶಿಶುಗಳು

ಹುಬ್ಬಳ್ಳಿ 2230

ನವಲಗುಂದ1244

ಧಾರವಾಡ 2243

ಕಲಘಟಗಿ 20152

ಅಳ್ನಾವರ0220ಅಣ್ಣಿಗೇರಿ7105

ಕುಂದಗೋಳ1144

ಒಟ್ಟು1021138

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಕ್ಕೇರ ತಂಡಕ್ಕೆಕೊಡವ ಮುಸ್ಲಿಂ ಜಮ್ಮ ಕಪ್
ಕಾರ್ಕಳ-ಹೆಬ್ರಿ ಭಾಗದಲ್ಲಿ ಸುಂಟರಗಾಳಿ ಸಹಿತ ಮಳೆ