ಕನ್ನಡಪ್ರಭ ವಾರ್ತೆ ಬೀಳಗಿ
ಜಿಲ್ಲೆಯಲ್ಲಿನ ಸಾಹಿತಿಗಳು ತಮ್ಮದೆಯಾದ ರೀತಿಯಲ್ಲಿ ಕಾವ್ಯ, ಸಂಕಲನ, ಕತೆಗಳು, ಪುಸ್ತಕ ರಚನೆ ಮಾಡಿ ಓದುಗರಿಗೆ ಹೊಸ ಹೊಸ ವಿಚಾರ ತಿಳಿಸುತ್ತಿದ್ದಾರೆ. ಅಂತಹ ಸಾಹಿತಿಗಳಿಗೆ ಶಕ್ತಿ ತುಂಬುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ತಿಳಿಸಿದರು.ಪಟ್ಟಣದಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ರಜತ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ರಜತ ಮಹೋತ್ಸವ ನಿಮಿತ್ತ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ಸಹಕಾರಿ, ವೈದ್ಯಕೀಯ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಸ್.ಆರ್. ಪಾಟೀಲರು ಸಚಿವರಾಗಿದ್ದಾಗ ನಾಡು ನುಡಿಗಾಗಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. ಎಲ್ಲ ರಂಗದಲ್ಲೂ ಯಶಸ್ಸು ಸಾಧಿಸಿರುವ ಅವರು ಸಾವಿರಾರು ಕುಟುಂಬಗಳಿಗೆ ಉದ್ಯೋಗ ನೀಡಿ ಬೀಳಗಿ ತಾಲೂಕನ್ನು ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ದೇವರು ಕರುಣಿಸಲಿ ಎಂದರು.
ಬ್ಯಾಂಕ್ ಅಧ್ಯಕ್ಷರಾದ ಎಸ್.ಆರ್. ಪಾಟೀಲ್ ಅವರು ಮಾತನಾಡಿ, ರಾಜಕಾರಣ ಕಲುಷಿತವಾಗುತ್ತಿದ್ದು, ಹಿಂದೆ ರಾಜಕಾರಣ ಮಾಡುವವರು ಯಾವುದೇ ಆಸೆ ಇಲ್ಲದೆ ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬರುತ್ತಿದ್ದರು. ಆದರೆ ಇಂದು ಸಮಾಜದ ಹಿತ ಬಯಸದೇ ಲಾಭಕ್ಕಾಗಿ ರಾಜಕಾರಣ ಮಾಡುವವರೇ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಮಾಜದಲ್ಲಿ ದಿನ ನಿತ್ಯ ನಡೆಯುತ್ತಿರುವ ಅನೀತಿ, ಅನಾಚಾರ, ಅತ್ಯಾಚಾರ, ಭಯೋತ್ಪಾದನೆ, ಭ್ರಷ್ಟಾಚಾರದಲ್ಲಿ ತೊಡಗುವ ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ಶಕ್ತಿ ಸಾಹಿತಿಗಳಲ್ಲಿ ಇದ್ದು, ಅದನ್ನು ಸಾಹಿತಿಗಳು ಸಮಾಜದ ಸ್ವಾಸ್ಥ ಕಾಪಾಡಬೇಕೆಂದು ವಿನಂತಿಸಿಕೊಂಡರು.ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಲೇಖಕಿ ಡಾ.ಶಾರದಾ ಮುಳ್ಳೂರ ಮಾತನಾಡಿದರು. ಈ ಸಂದರ್ಭದಲ್ಲಿ ಪಟ್ಟಣ ಸಹಕಾರಿ ಬ್ಯಾಂಕ ಪ್ರಧಾನ ವ್ಯವಸ್ಥಾಪಕ ಎಲ್ ಬಿ ಕುರ್ತುಕೋಟಿ, ಉಪ ವ್ಯವಸ್ಥಾಪಕ ಜಿ.ಎಸ್.ಬನ್ನಟ್ಡಿ, ಹಿರಿಯರಾದ ರಾಜೇಂದ್ರ ಬಾರಕೇರ, ಬೀಳಗಿ ಕಸಾಪ ತಾಲೂಕಾ ಅಧ್ಯಕ್ಷ ಗುರುರಾಜ ಲೂತಿ,ಶಿಕ್ಷಕ ಸಂಗಮೇಶ ಪಾನಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.