ಹ್ಯಾರಂಬಿ ಪುರದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿ

KannadaprabhaNewsNetwork |  
Published : Feb 17, 2026, 01:15 AM IST
೧೬ಬಿಹೆಚ್‌ಆರ್ ೧: ಯಲ್ಲಪ್ಪ (ಮೃತ ಕಾರ್ಮಿಕ) | Kannada Prabha

ಸಾರಾಂಶ

ಬಾಳೆಹೊನ್ನೂರುಕೂಲಿ ಕೆಲಸಕ್ಕಾಗಿ ಬಂದಿದ್ದ ಕಾರ್ಮಿಕ ಕಾಡಾನೆ ತುಳಿತಕ್ಕೆ ಬಲಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಹುಣಸೇಹಳ್ಳಿ ಸಮೀಪದ ಹ್ಯಾರಂಬಿ ಪುರ ಗ್ರಾಮದಲ್ಲಿ ನಡೆದಿದೆ.

ಹಾವೇರಿಯ ಯಲ್ಲಪ್ಪ ಮೃತ ವ್ಯಕ್ತಿ| ರೈತ ಹಿತರಕ್ಷಣಾ ವೇದಿಕೆಯಿಂದ ಪ್ರತಿಭಟನೆಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಕೂಲಿ ಕೆಲಸಕ್ಕಾಗಿ ಬಂದಿದ್ದ ಕಾರ್ಮಿಕ ಕಾಡಾನೆ ತುಳಿತಕ್ಕೆ ಬಲಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಹುಣಸೇಹಳ್ಳಿ ಸಮೀಪದ ಹ್ಯಾರಂಬಿ ಪುರ ಗ್ರಾಮದಲ್ಲಿ ನಡೆದಿದೆ.ಹಾವೇರಿ ಜಿಲ್ಲೆ ತಿಳುವಳ್ಳಿ ಗ್ರಾಮದ ಯಲ್ಲಪ್ಪ (45) ಮೃತ ಕಾರ್ಮಿಕ. ಭಾನುವಾರ ರಾತ್ರಿಯಷ್ಟೇ ಸ್ವಗ್ರಾಮದಿಂದ ಹ್ಯಾರಂಬಿ ಪುರದ ನಾಗೇಶ್‌ಗೌಡ ಎಂಬುವರ ಕಾಫಿ ತೋಟದಲ್ಲಿ ಕೆಲಸಮಾಡಲು ಬಂದು ಬಸ್ಸಿನಿಂದ ಇಳಿದು ತೋಟಕ್ಕೆ ತೆರಳುವ ವೇಳೆ ಕಾಡಾನೆ ದಾಳಿಗೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.10 ವರ್ಷಗಳ ಹಿಂದೆ ನಾಗೇಶ್‌ಗೌಡರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ ಕೆಲಸ ಬಿಟ್ಟು ಸ್ವಗ್ರಾಮಕ್ಕೆ ತೆರಳಿದ್ದ. ಕಳೆದ 4-5 ದಿನಗಳ ಹಿಂದೆ ಪುನಃ ಇಲ್ಲಿ ಕೆಲಸಕ್ಕೆ ಬರುತ್ತೇನೆ ಎಂದು ಹೇಳಿದ್ದ ಈತ ಭಾನುವಾರ ರಾತ್ರಿ ಬಸ್ಸಿನಲ್ಲಿ ಬಂದು ಹುಣಸೇಹಳ್ಳಿಯಲ್ಲಿ ಇಳಿದು ಅಲ್ಲಿಂದ ನಡೆದುಕೊಂಡೇ ಕಾಫಿ ತೋಟಕ್ಕೆ ಬರುವಾಗ ದುರ್ಘಟನೆ ನಡೆದಿದೆ. ಸೋಮವಾರ ಬೆಳಿಗ್ಗೆ ಕಾರ್ಮಿಕರು ಕೂಲಿ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಾಲೀಕರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಅಧಿಕಾರಿಗಳು ಮೃತನ ಶವವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಾಳೆಹೊನ್ನೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ಜುಲೈನಲ್ಲಿ ಹೊನ್ನಾಳಿ ಮೂಲದ ಮಹಿಳೆ ಅನಿತಾ ಹಾಗೂ ಅಂಡವಾನೆ ಸಮೀಪದ ಸುಬ್ಬೇಗೌಡ ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಡಿಸೆಂಬರ್‌ನಲ್ಲಿ ಆನವಟ್ಟಿಯ ಗಣಪತಿ ಎಂಬ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿ ಆತ ಶಾಶ್ವತ ಅಂಗವೈಕ್ಯಲ್ಯಕ್ಕೆ ಒಳಗಾಗಿದ್ದಾನೆ. ವಾಮಮಾರ್ಗದ ಮೂಲಕ ಶವ ಸಾಗಣೆ: ಆರೋಪ

ಶೃಂಗೇರಿ ಕ್ಷೇತ್ರ ರೈತ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆ ಹಾಗೂ ಜನಪ್ರತಿ ನಿಧಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ರೈತ ಮತ್ತು ನಾಗರಿಕ ಹಿತರಕ್ಷಣಾ ವೇದಿಕೆ ಮಾಜಿ ಕ್ಷೇತ್ರಾಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ರಾತ್ರಿ ವೇಳೆ ಕಾಡಾನೆ ದಾಳಿ ನಡೆದು ಕಾರ್ಮಿಕ ಮೃತಪಟ್ಟಾಗ ಯಾವುದೇ ಮಾಹಿತಿ ಇಲ್ಲದಿದ್ದರೂ ಸ್ಥಳಕ್ಕೆ ದೌಡಾಯಿಸಿ ಆತುರವಾಗಿ ವಾಮಾ ಮಾರ್ಗದಲ್ಲಿ ಶವವನ್ನು ಬೇರೆಡೆಗೆ ಖಾಸಗಿ ಆ್ಯಂಬುಲೆನ್ಸ್ ಮೂಲಕ ರವಾನಿಸಿದ್ದಾರೆ. ಸ್ಥಳಕ್ಕೆ ವೈದ್ಯರು ಬಂದು ಸಾವು ಖಚಿತಪಡಿಸಿದ್ದರೆ ಅಥವಾ ಆನೆ ದಾಳಿಯಿಂದಲೇ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳಿಗೆ ಖಚಿತವಾಯಿತೇ ಎಂದು ಪ್ರಶ್ನಿಸಿದರು.ಆನೆ ದಾಳಿಗೆ ಹತ್ತಾರು ಸಾವುಗಳಾಗಿದ್ದರೂ ಜನಪ್ರತಿನಿಧಿಗಳು, ಅರಣ್ಯ ಸಚಿವರು ಚಕಾರವೆತ್ತುತ್ತಿಲ್ಲ. ಕೇವಲ ಸಾವಿಗೀಡಾ ದವರಿಗೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು. ಆನೆಗಳು, ಕಾಡು ಕೋಣ ಗಳು ನಾಡಿಗೆ ಬಾರದಂತೆ ಶಾಶ್ವತ ರೈಲ್ವೇ ಬ್ಯಾರಿಕೇಡ್ ನಿರ್ಮಿಸಿ. ಕೂಡಲೇ ಈ ಭಾಗಕ್ಕೆ ಆನೆ ಕಾರ್ಯಪಡೆ ನಿಯೋಜಿಸ ಬೇಕು ಎಂದು ಒತ್ತಾಯಿಸಿದರು.ಸಮಿತಿ ಸದಸ್ಯ ಅಭಿಷೇಕ್ ಹೊಸಳ್ಳಿ ಮಾತನಾಡಿ, ನಮಗೆ ಯಾವುದೇ ಭರವಸೆಗಳು ಬೇಡ. ಕಾರ್ಮಿಕನ ಸಾವಿನ ಘಟನೆ ಹಿನ್ನೆಲೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸ ಬೇಕು. ಈ ಸಾವುಗಳಿಗೆ ನ್ಯಾಯಕ್ಕಾಗಿ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೋರಾಟ ಸಮಿತಿ ಪ್ರಮುಖರಾದ ರಂಜಿತ್ ಶೃಂಗೇರಿ, ರತ್ನಾಕರ ಗಡಿಗೇಶ್ವರ, ಪ್ರಸನ್ನಕುಮಾರ್ ಕಿಬ್ಳಿ, ಎಸ್.ವಿ.ಶಂಕರ್, ಎಂ.ಜೆ.ಚಂದ್ರಶೇಖರ್, ಗೋಕುಲ್ ಸಾರಗೋಡು, ಪ್ರೇಮೇಶ್, ಸಂಪತ್, ಟಿ.ಎಂ.ಉಮೇಶ್, ಕೆ.ಆರ್.ದೀಪಕ್, ಭಾಸ್ಕರ್ ವೆನಿಲ್ಲಾ ಮತ್ತಿತರರು ಹಾಜರಿದ್ದರು.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಎಸ್ಪಿ ಸಿ.ಟಿ.ಜಯಕುಮಾರ್, ಡಿವೈಎಸ್ಪಿ ಬಾಲಾಜಿ ಸಿಂಗ್, ಸಿಪಿಐ ಗುರು ಕಾಮತ್, ಕೊಪ್ಪ ಡಿಎಫ್‌ಒ ಶಿವಶಂಕರ್, ಎಸಿಎಫ್ ಮೋಹನ್ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದರು.(ಬಾಕ್ಸ್)

೨೪ ಗಂಟೆಯಲ್ಲಿ ಆನೆ ಹಿಡಿಯಿರಿ: ಇಲ್ಲದಿದ್ದರೆ ಗುಂಡು ಹೊಡೆದು ಸಾಯಿಸ್ತೀವಿ ದಾಳಿ ಮಾಡಿದ ಆನೆಯನ್ನು ೨೪ ಗಂಟೆಯಲ್ಲಿ ಹಿಡಿದು ಸ್ಥಳಾಂತರಿಸಿ. ಇಲ್ಲದಿದ್ದರೆ ರೈತರೇ ಕಾಡಿಗೆ ನುಗ್ಗಿ ಗುಂಡು ಹೊಡೆದು ಸಾಯಿಸ್ತೀವಿ ಎಂದು ಗೋರಿಗಂಡಿ ಕಾಫಿ ಬೆಳೆಗಾರ ಎಂ.ಜೆ.ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಕಾನೂನು ಇರುವುದು ಜನರಿಗಾಗಿಯೇ ಹೊರತು ಪ್ರಾಣಿಗಳಿಗಾಗಿ ಅಲ್ಲ.

ಅರಣ್ಯ ಇಲಾಖೆ ಇರುವುದು ಅರಣ್ಯ ಮತ್ತು ಪ್ರಾಣಿಗಳನ್ನು ಕಾಯಲು ಹೊರತು ನಿಮ್ಮನ್ನು ಕಾಯಲು ಪೊಲೀಸರ ಅವಶ್ಯಕತೆ ಯಿದೆಯೇ? ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ನಿಯಂತ್ರಣಕ್ಕೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕೇಳಿ ಪಡೆದುಕೊಳ್ಳಿ. ಸೌಲಭ್ಯ ಕೊಟ್ಟಿಲ್ಲವೆಂದರೆ ಕೆಲಸ ಮಾಡಲು ಆಗಲ್ಲ ಎಂದು ಹೇಳಿ ಹೊರಬನ್ನಿ. ನಿಮ್ಮ ಜೊತೆ ನಾವು ಕೈಜೋಡಿಸುತ್ತೇವೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.(ಬಾಕ್ಸ್)

ತಾತ್ಕಾಲಿಕ ಪರಿಹಾರಕ್ಕೆ ಕೂಡಲೇ ಕ್ರಮ: ಶಿವಶಂಕರ್

ಕಾಡಾನೆ ದಾಳಿಗೆ ಇಲಾಖೆಯಿಂದ ತಾತ್ಕಾಲಿಕವಾಗಿ ಶೀಘ್ರ ಯಾವ ಕ್ರಮಕೈಗೊಳ್ಳಬಹುದು ಅದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಕೊಪ್ಪ ಡಿಎಫ್‌ಓ ಶಿವಶಂಕರ್ ಹೇಳಿದರು.ಪದೇ ಪದೇ ಕಾಡಾನೆ ದಾಳಿ ಹಿನ್ನೆಲೆ ಈ ಭಾಗಕ್ಕೂ ಇಟಿಎಫ್ ನಿಯೋಜನೆಗೆ ಕ್ರಮಕೈಗೊಳ್ಳಲಾಗುವುದು. ಶೀಘ್ರವಾಗುವ ಸೋಲಾರ್ ಬೇಲಿ, ಟೆಂಟಿಕಲ್ ಫೆನ್ಸಿಂಗ್, ಟ್ರೆಂಚ್ ನಿರ್ಮಾಣಕ್ಕೆ ಆದ್ಯತೆ ನೀಡಿ. ಬಳಿಕ ಶಾಶ್ವತ ಪರಿಹಾರಕ್ಕೆ ರೇಲ್ವೇ ಬ್ಯಾರಿ ಕೇಡ್ ನಿರ್ಮಾಣಕ್ಕೆ ಒಂದು ಕಿಮೀಗೆ ₹1.50 ಕೋಟಿ ವೆಚ್ಚವಾಗಲಿದ್ದು, ಈಗಾಗಲೇ ಡಿಪಿಆರ್ ತಯಾರಿಸಲಾಗಿದೆ.(ಬಾಕ್ಸ್)

ಕಾಡಾನೆ ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆ ನಿರಂತರ ಕಾಡಾನೆ ದಾಳಿಯ ಪರಿಹಾರಕ್ಕೆ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಶೀಘ್ರ ಸಭೆ ನಡೆಸಲು ಡಿಸಿಗೆ ತಿಳಿಸಲಾಗುವುದು. ಜಿಲ್ಲಾಧಿಕಾರಿಗಳು ಈ ದಿನ ತುರ್ತು ಸಭೆಯಲ್ಲಿದ್ದ ಕಾರಣ ಸ್ಥಳಕ್ಕೆ ಬರಲಾಗಿಲ್ಲ. ರೈತ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕಾರ್ಮಿಕನ ಶವವನ್ನು ತರಾತುರಿಯಲ್ಲಿ ಬೇರೆಡೆಗೆ ಕಳುಹಿಸಿಲ್ಲ. ಮೃತನ ಪತ್ನಿ ಶಿವಮೊಗ್ಗಕ್ಕೆ ಕಳುಹಿಸಿ ಎಂದ ಹಿನ್ನೆಲೆಯಲ್ಲಿ ರವಾನಿಸಲಾಯಿತು. ಇದರಲ್ಲಿ ಯಾವುದೇ ಒತ್ತಡವಿರಲಿಲ್ಲ. - ಜಿತೇಂದ್ರ ಕುಮಾರ್ ದಯಾಮ, ಎಸ್ಪಿ.

೧೬ಬಿಹೆಚ್‌ಆರ್ ೧: ಯಲ್ಲಪ್ಪ (ಮೃತ ಕಾರ್ಮಿಕ)೧೬ಬಿಹೆಚ್‌ಆರ್ ೨:

ಬಾಳೆಹೊನ್ನೂರು ಸಮೀಪದ ಹ್ಯಾರಂಬಿ ಪುರದಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುಂಭಾಗದಲ್ಲಿ ಮಲೆನಾಡು ರೈತ ಮತ್ತು ನಾಗರೀಕ ಹಿತರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೋಗನಂದೀಶ್ವರಸ್ವಾಮಿ ಜೋಡಿ ರಥೋತ್ಸವಕ್ಕೆ ಚಾಲನೆ
ಇಟಲಿ ಮೇಡಂ ಮೆಚ್ಚಿಸಲು ಆರ್‌ಎಸ್‌ಎಸ್ ಟೀಕೆ: ಮಾಜಿ ಸಂಸದ ಎಸ್. ಮುನಿಸ್ವಾಮಿ