ಗಡಿಗಳ ಮೀರಿ ಕೆಲಸ ಮಾಡುವುದೇ ನೈಜ ಸಮಾಜ ಸೇವೆ: ಸಾಮಾಜಿಕ ಕಾರ್ಯಕರ್ತೆ ಐಶ್ವರ್ಯ

KannadaprabhaNewsNetwork |  
Published : Mar 21, 2024, 01:00 AM IST
ಸೈ | Kannada Prabha

ಸಾರಾಂಶ

ಸಮಾಜದಲ್ಲಿ ಎಲ್ಲ ಜಾತಿ, ಧರ್ಮಗಳಲ್ಲಿಯೂ ನೊಂದವರು, ಶೋಷಿತರು ಇರುತ್ತಾರೆ. ಸಾಮಾಜಿಕ ಕಾರ್ಯಕರ್ತರು ಯಾವುದೇ ಒಂದು ಧರ್ಮ ಅಥವಾ ಜಾತಿಯನ್ನು ಕೇಂದ್ರೀಕರಿಸಿ ಕೆಲಸ ಮಾಡಬಾರದು. ಎಲ್ಲರನ್ನೂ ಒಗ್ಗೂಡಿಸಿಕೊಂಡು, ಎಲ್ಲರೊಂದಿಗೆ ಬೆರೆತು ಕೆಲಸ ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಜಾತಿ, ಧರ್ಮ, ಲಿಂಗ, ಪ್ರಾಂತ್ಯದ ಗಡಿಗಳನ್ನು ಮೀರಿ ಸಮಾಜದಲ್ಲಿ ನ್ಯಾಯದ ಪರವಾಗಿ, ನೊಂದವರ, ಶೋಷಿತರ, ದುರ್ಬಲ ವರ್ಗದ ಜನರ ಪರವಾಗಿ ಸಾಮಾಜಿಕ ಕಾರ್ಯಕರ್ತರು ಕೆಲಸ ಮಾಡಬೇಕಿದೆಯೆಂದು ಬೆಂಗಳೂರು ಉತ್ತರ ವಿವಿಯ ಸಾಮಾಜಿಕ ಕಾರ್ಯಕರ್ತೆ ಐಶ್ವರ್ಯ ಅಭಿಪ್ರಾಯಪಟ್ಟರು.

ನಗರದ ಜನಪರ ಫೌಂಡೇಷನ್ ಕಚೇರಿಯಲ್ಲಿ ಯುವಯಾನ ಬಳಗದ ವತಿಯಿಂದ ಆಯೋಜಿಸಿದ್ದ ವಿಶ್ವ ಸಮಾಜ ಕಾರ್ಯದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಕರ್ತರು ಜನರೊಂದಿಗೆ ಬೆರೆತು, ಬೆಸೆದುಕೊಂಡು ಕೆಲಸ ಮಾಡುವಂತಹ ಮನಸ್ಥಿತಿ ಅಗತ್ಯವಾಗಿದೆಯೆಂದರು.

ಸಮಾಜದಲ್ಲಿ ಎಲ್ಲ ಜಾತಿ, ಧರ್ಮಗಳಲ್ಲಿಯೂ ನೊಂದವರು, ಶೋಷಿತರು ಇರುತ್ತಾರೆ. ಸಾಮಾಜಿಕ ಕಾರ್ಯಕರ್ತರು ಯಾವುದೇ ಒಂದು ಧರ್ಮ ಅಥವಾ ಜಾತಿಯನ್ನು ಕೇಂದ್ರೀಕರಿಸಿ ಕೆಲಸ ಮಾಡಬಾರದು. ಎಲ್ಲರನ್ನೂ ಒಗ್ಗೂಡಿಸಿಕೊಂಡು, ಎಲ್ಲರೊಂದಿಗೆ ಬೆರೆತು ಕೆಲಸ ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬದಲಾವಣೆಯ ಕಡೆಗೆ ನಾವು ಒಟ್ಟಿಗೆ ಕೆಲಸ ಮಾಡೋಣವೆಂದರು.

ಪ್ರಸ್ತುತ ವರ್ಷವು ‘ಪರಿವರ್ತನೆಯ ಬದಲಾವಣೆಗಾಗಿ ಹಂಚಿಕೆಯ ಭವಿಷ್ಯ’ ಎಂಬ ಘೋಷವಾಕ್ಯದಡಿಯಲ್ಲಿ ಸಮಾಜ ಕಾರ್ಯ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ಸಮಾಜದಲ್ಲಿ ಬದಲಾವಣೆಯ ಆಯಾಮಗಳನ್ನು ವಿವಿಧ ಸ್ಥರಗಳಲ್ಲಿ ನೋಡಲಾಗುತ್ತದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಬದಲಾವಣೆಯ ಹಾದಿಯಲ್ಲಿ ಸಾಗಬೇಕಾದರೆ ಈ ಘೋಷ್ಯವಾಕ್ಯವು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಸಾಂವಿಧಾನಿಕ ಮೌಲ್ಯಗಳು, ಜಾತ್ಯಾತೀತ ತತ್ವಗಳು ಉಳಿಸುವ ಕಡೆಗೆ ಹಾಗೂ ಪರಸ್ಪರ ಪ್ರೀತಿ, ಸ್ನೇಹ ಮತ್ತು ಸೌಹಾರ್ದ ಸಮಾಜವನ್ನು ನಿರ್ಮಾಣ ಮಾಡುವ ಕಡೆಗೆ ಸಾಮಾಜಿಕ ಕಾರ್ಯಕರ್ತರಾದವರು ಕೆಲಸ ಮಾಡಬೇಕು. ಅಂಬೇಡ್ಕರ್, ಬುದ್ದ, ಬಸವಣ್ಣ, ಮಾರ್ಕ್ಸ್, ಅವರು ಚಿಂತಿಸಿದಂತಹ ಸಮಾಜ ಕಟ್ಟಬೇಕಿದೆ. ಆ ದಿಕ್ಕಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕಿದೆ ಎಂದರು.

ಯುವಯಾನ ಬಳಗದ ಬಾಬುರೆಡ್ಡಿ ಮಾತನಾಡಿ, ಸಮಾಜದಲ್ಲಿನ ಅನ್ಯಾಯದ ವಿರುದ್ಧ ಧ್ವನಿಯಾಗಲು ಸಾಮಾಜಿಕ ಕಾರ್ಯಕರ್ತರ ಪಾತ್ರ ಮುಖ್ಯವಾದುದಾಗಿದೆ. ಜನರು ತಮಗೆ ಬೇಕಾದುದ್ದನ್ನು ತಾವೇ ಪಡೆದುಕೊಳ್ಳುವ ಹಾಗೆ ಮಾಡಬೇಕು. ಆಗ ಸಮಾಜದಲ್ಲಿ ಬದಲಾವಣೆಯ ಪರ್ವವು ಆರಂಭವಾಗುತ್ತದೆ. ಸಾಮಾಜಿಕ ಕಾರ್ಯಕರ್ತರು ಜನರು ಸ್ವಯಂ ನಿರ್ಧಾರ ಕೈಗೊಳ್ಳುವ ಹಾಗೆ ಮಾಡುವ ರೀತಿಯಲ್ಲಿ ಕೆಲಸ ಮಾಡಬೇಕಿದೆ ಎಂದರು.

ಬೆಂಗಳೂರು ಉತ್ತರ ವಿವಿ ಸಾಮಾಜಿಕ ಕಾರ್ಯಕರ್ತೆ ಗಂಗೋತ್ರಿ, ಬೆಂಗಳೂರು ಉತ್ತರ ವಿವಿ ವ್ಯಾಪ್ತಿಯ ಕೊಂಗಾಡಿಯಪ್ಪ ಕಾಲೇಜಿನ ಸಾಮಾಜಿಕ ಕಾರ್ಯಕರ್ತೆರಾದ ವೇದವತಿ, ಶೋಭಾ, ವಿದ್ಯಾರ್ಥಿ ಮನೋಹರ ಎಂ.ಎಸ್., ಯುವಯಾನ ಬಳಗದ ಟಿ.ಸಿರಿಕುಮಾರ್, ಮನೋಹರ, ಅಕ್ಷಯ್, ಶಿವದರ್ಶಿನಿ, ನವೀನ್, ಅಕ್ಷಯ, ಲೀಲಾವತಿ, ಜನಪರ ಫೌಂಡೇಷನ್‌ನ ಗಾಯತ್ರಿ, ಚೌಡಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌