ಕುಶಾಲನಗರ: ವಿಶ್ವ ಆನೆ ದಿನ ಅಂಗವಾಗಿ ನಡೆದ ಕಾರ್ಯಕ್ರಮ ಕುಶಾಲನಗರದಲ್ಲಿ ಈ ಬಾರಿ ಆನೆಗಳ ಅನುಪಸ್ಥಿತಿಯಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಜಿಲ್ಲಾ ಪೊಲೀಸ್ ಅಧಿಕಾರಿ ಬಿಂದು ಮಣಿ ಮಾತನಾಡಿ, ಆನೆ ಮಾನವ ಸಹಬಾಳ್ವೆ ಬಗ್ಗೆ ಪ್ರತಿಯೊಬ್ಬರೂ ಅರಿವು, ಮಾಹಿತಿ ಹೊಂದುವ ಮೂಲಕ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಪೊಲೀಸ್ ಅರಣ್ಯ ಇಲಾಖೆಗೆ ಸಾರ್ವಜನಿಕರ ಮೂಲಕ ಸಹಕಾರ ದೊರೆತರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಾಧ್ಯ.ಆನೆ ಮತ್ತು ಇತರ ವನ್ಯಜೀವಿಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಜಾಗೃತಿ ಮೂಡಿಸುವುದು ಶಿಕ್ಷಕರು ಪೋಷಕರ ಕರ್ತವ್ಯವಾಗಿದೆ ಎಂದರು.ಇದೇ ಸಂದರ್ಭ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ವನ್ಯಜೀವಿ ತಜ್ಞ ವೈದ್ಯರಾದ ಡಾ. ಚಿಟ್ಟಿಯಪ್ಪ, ಡಾ. ಮುಜೀಬ್. ಡಾ ಸಿ.ಕೆ. ತಮ್ಮಯ್ಯ, ಕೆ. ಭುವನೇಶ್ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಆನೆ ಸಂರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಇಲಾಖೆಯ ಸಾಧಕ ಅಧಿಕಾರಿ ಸಿಬ್ಬಂದಿಗಳಿಗೆ, ದಕ್ಷಿಣ ಕೊಡಗಿನಲ್ಲಿ ಅರಣ್ಯ ಇಲಾಖೆಯೊಂದಿಗೆ ವನ್ಯಜೀವಿ ಸಂಘರ್ಷದ ಸಂದರ್ಭ ನಿರಂತರ ಕೈಜೋಡಿಸುತ್ತಿರುವ ಬಿ. ಶೆಟ್ಟಿಗೇರಿಯ ಅನಿಲ್ ಕಾಡೆಮಾಡ, ಜಗ ಚೇರಂಡ ಮತ್ತು ತಂಡದ ಸದಸ್ಯರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.ಆನೆ ದಿನ ಅಂಗವಾಗಿ ನಡೆದ ಚಿತ್ರಕಲೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಅರಣ್ಯ ಇಲಾಖೆ ಅಧಿಕಾರಿಗಳಾದ ಅಭಯ ಶಂಕರ್, ಸೆಂದಿಲ್ ಕುಮಾರ್ ನವೀನ್ ಕುಮಾರ್, ಶ್ರೀನಿವಾಸ್ ನಾಯಕ್, ಅನನ್ಯ ಕುಮಾರ್, ಪರಿಸರ ಜಾಗೃತಿ ಸಮಿತಿಯ ಸಂಚಾಲಕ ಟಿ.ಜಿ. ಪ್ರೇಮ್ ಕುಮಾರ್, ಜ್ಞಾನಗಂಗಾ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ನಿಂಗಪ್ಪ, ವಲಯ ಅರಣ್ಯ ಅಧಿಕಾರಿ ರಕ್ಷಿತ್ ಮತ್ತಿತರರು ಇದ್ದರು.
ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.