ಕನ್ನಡಪ್ರಭ ವಾರ್ತೆ ಮಡಿಕೇರಿ
ಮೇಲ್ವಿಚಾರಕರು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಐಸಿಡಿಎಸ್ ಸುವರ್ಣ ಮಹೋತ್ಸವದ ಅಂಗವಾಗಿ ಸರ್ಕಾರವು ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ ಯುಕೆಜಿಯನ್ನು ಪ್ರಾರಂಭಿಸುತ್ತಿದ್ದು, ತಾಲೂಕಿನ 10 ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ ಯುಕೆಜಿ ಪ್ರಾರಂಭವಾಗುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದರು.
ಅದರಂತೆ ಕಡಗದಾಳು ಗ್ರಾಮ ಪಂಚಾಯಿತಿಯಿಂದ 18 ಮಕ್ಕಳಿಗೆ ಸಮವಸ್ತ್ರ ಮತ್ತು ಐಡಿ ಕಾರ್ಡ್ಗಳನ್ನು, ಪುಸ್ತಕ, ಪೆನ್ಸಿಲ್, ಬ್ಲಾಕ್ಸ್, ಚಾರ್ಟ್, ಫಜಲ್ಸ್, ಪ್ಲೇ ಮ್ಯಾಟ್ ಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ನೀಡಲಾಯಿತು.ಗೋಪಾಲ್ ಪೂಜಾರಿ ಬೆಟ್ಟಗೇರಿ, ಲಾವಣ್ಯರವರು ಆಟಿಕೆಗಳನ್ನು ನೀಡಿದರು. ಎಲ್ ಕೆ ಜಿ ಯು ಕೆ ಜಿ ಯನ್ನು ಉತ್ತಮವಾಗಿ ನಡೆಸುವ ನಿಟ್ಟಿನಲ್ಲಿ ಶ್ರಮವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಅನಿಲ ಕೆ ಆರ್, ಸಹಾಯಕಿ ಹೇಮಲತಾ ಬಿ.ಎಂ ಅಭಿನಂದಿಸಲಾಯಿತು.
ಗ್ರಾಮ ಪಂಚಾಯಿತಿ ಸದಸ್ಯರಾದ ಶಂಭಯ್ಯ ಮಾತನಾಡಿ ಇದೊಂದು ಉತ್ತಮವಾದ ಯೋಜನೆಯಾಗಿದ್ದು ಸರ್ಕಾರಿ ಶಾಲೆಗಳು ಈಗಾಗಲೇ ಮುಚ್ಚುತ್ತಿದ್ದು ಇಂತಹ ಯೋಜನೆಯಿಂದ ಮಕ್ಕಳ ಮತ್ತು ಶಾಲೆಯ ಅಭಿವೃದ್ಧಿ ಆಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಕಾರ್ಯಕ್ರಮಕ್ಕೆ ಶುಭ ಕೋರುತ್ತಾ ಗ್ರಾಮ ಪಂಚಾಯಿತಿಯ ಸರ್ವ ಸಹಕಾರ ನೀಡುವುದಾಗಿ ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲ ಅಂಗನವಾಡಿ ಕೇಂದ್ರಕ್ಕೆ ಮತ್ತಷ್ಟು ಕೊಡುಗೆಗಳನ್ನು ಸಮುದಾಯದಿಂದ ಮತ್ತು ಗ್ರಾಮ ಪಂಚಾಯಿತಿಯಿಂದ ಕೊಡಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಅಂಗನವಾಡಿ ಸಹಾಯಕಿ ಕಮಲ ಅವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಯೋಗೀಶ್, ಸದಸ್ಯರಾದ ಆನಂದ, ಭಾರತಿ, ಗೀತಾ, ಇನ್ನರ್ ವೀಲ್ ಸಂಸ್ಥೆಯ ಸದಸ್ಯರು ಶಮ್ಮಿ ಪ್ರಭು, ಪಿ ಎಚ್ ಸಿ ಓ ಕೀರ್ತನ, ಆಶಾ ಕಾರ್ಯಕರ್ತೆ ನೀಲಾವತಿ, ಶೋಭಾ, ಬಾಲ ವಿಕಾಸ ಸಮಿತಿಯ ಅಧ್ಯಕ್ಷರು ಪ್ರತಿಮಾ ಮತ್ತು ಸರ್ವ ಸದಸ್ಯರು ಅಂಗನವಾಡಿ ಕಾರ್ಯಕರ್ತೆ ಅಶ್ವಿತ, ಗ್ರಾಮಸ್ಥರು, ಪೋಷಕರು ಸ್ತ್ರೀ ಶಕ್ತಿ ಸದಸ್ಯರು ಹಾಜರಿದ್ದರು.