ಹೆಬ್ರಿ: ಕಳೆದ ಒಂದೂವರೆ ಶತಮಾನಗಳಿಂದ ವಿಶ್ವದಲ್ಲಿ ವಿಶ್ವ ಶಾಂತಿಗಾಗಿ ಏಕತೆ ಮಾನವೀಯ ಸೇವೆಗೈಯುತ್ತಿರುವ ಮಹತ್ತರ ಸಂಸ್ಥೆ ರೆಡ್ ಕ್ರಾಸ್. ರೆಡ್ ಕ್ರಾಸ್ನ ತತ್ವಗಳಾದ ಮಾನವೀಯತೆ, ಸ್ವಾತಂತ್ರ್ಯ, ಏಕತೆ, ಸ್ವಯಂಸೇವೆಗಳು ವಿಶ್ವವ್ಯಾಪಕವಾಗಿವೆ ಎಂದು ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ. ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ರೆಡ್ ಕ್ರಾಸ್ ಸಭಾಪತಿ ವೀಣಾ ಆರ್. ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಬ್ರಿ ಠಾಣೆಯ ಉಪನಿರೀಕ್ಷಕ ಚಂದ್ರ ಎ.ಕೆ. ಅವರು ನಾಗರಿಕ ಪ್ರಜ್ಞೆ ಎಲ್ಲರಲ್ಲೂ ಮೂಡಿಸುವ ಜವಾಬ್ದಾರಿ ರೆಡ್ ಕ್ರಾಸ್ಗಿದೆ ಎಂದರು. ಉದ್ಯಮಿ ಯೋಗೀಶ್ ಭಟ್ ಹೆಬ್ರಿ, ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ಕೊಡುಗೈದಾನಿ ವಿದ್ವಾನ್ ರಾಘವೇಂದ್ರ ಭಟ್, ಹೆಬ್ರಿ ರೆಡ್ ಕ್ರಾಸ್ ಶಾಖೆ ಉಪಸಭಾಪತಿ ಡಾ. ವಿದ್ಯಾಧರ ಹೆಗ್ಡೆ ಉಪಸ್ಥಿತರಿದ್ದರು.
ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ಸ್ವಯಂಸೇವಕಿಯರು ನಾಡಗೀತೆ ಮತ್ತು ರೆಡ್ ಕ್ರಾಸ್ ಗೀತೆ ಹಾಡಿದರು. ತಾಲೂಕು ಕಾರ್ಯದರ್ಶಿ ಪ್ರಶಾಂತ್ ಪೈ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಪ್ರಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಪ್ರಸಾದ್ ಶೆಟ್ಟಿ ನಿರೂಪಿಸಿ, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ವತಿಯಿಂದ ಹೆಬ್ರಿ ತಾಲೂಕಿನ ಆಯ್ದ ಬಡ ಕುಟುಂಬಗಳಿಗೆ ಗೃಹಪಯೋಗಿ ವಸ್ತುಗಳನ್ನು ಮತ್ತು ಕಾಡುಹೊಳೆ ರಾಘವೇಂದ್ರ ಭಟ್ ಕೊಡುಗೆಯಾಗಿ ನೀಡಿದ ವೀಲ್ ಚೇರ್ ಅನ್ನು ಫಲಾನುಭವಿಗೆ ವಿತರಿಸಲಾಯಿತು.