ಉರಗ ಸಂತತಿಯ ಉಳಿವು ಮುಖ್ಯ: ಸ್ನೇಕ್ ಶ್ಯಾಮ್

KannadaprabhaNewsNetwork | Published : Jul 17, 2024 12:57 AM

ಸಾರಾಂಶ

ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವೂ ಮುಖ್ಯ ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ತಿಳಿಸಿದರು.

ನಗರದ ಲಕ್ಷ್ಮೀಪುರಂನಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರವು ಮಂಗಳವಾರ ಆಯೋಜಿಸಿದ್ದ ವಿಶ್ವ ಹಾವುಗಳ ದಿನಾಚರಣೆಯಲ್ಲಿ ಸನ್ಮಾನಿ ಸ್ವೀಕರಿಸಿ ಮಾತನಾಡಿದ ಅವರು, ಉರಗ ಪ್ರಭೇದಗಳು, ಅವುಗಳ ಸಂತತಿ, ಹಾವಿನ ಕಡಿತದ ಬಳಿಕ ನಡೆಸುವ ಪ್ರಥಮ ಚಿಕಿತ್ಸೆಗಳ ಕುರಿತು ವಿವರಿಸಿದರು.

ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಪರಿಸರವನ್ನು ಶುದ್ಧವಾಗಿಸುವ ಅಲ್ಪ ಸೇವೆಯನ್ನು ಮಾಡಿದಂತಾಗುತ್ತದೆ. ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಯೇ ಬದುಕುವ ಕಾರಣ ಪ್ರತಿಯೊಂದಕ್ಕೂ ಪ್ರಾಮುಖ್ಯತೆಯಿದೆ. ಎಲ್ಲವನ್ನೂ ಗೌರವಿಸಿ ಎಂದು ಅವರು ಕರೆ ನೀಡಿದರು.

ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಕೋವಿಡ್ ನಂತಹ ಕಷ್ಡಕಾಲದಲ್ಲೂ ಮನೆಗಳಿಗೆ ಹಾವು ಬಂದಾಗ ಸ್ನೇಕ್ ಶ್ಯಾಮ್ ಅವರು ಹಾವನ್ನ ಸಂರಕ್ಷಿಸಿದ್ದಾರೆ. 85 ಸಾವಿರಕ್ಕೂ ಹೆಚ್ಚು ಹಾವನ್ನ ಸಂರಕ್ಷಿಸಿರುವ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ ಎಂದರು.

ಸ್ನೇಕ್ ಶ್ಯಾಮ್ ಅವರು ಪರಿಸರ ಸಂರಕ್ಷಣೆ ಜೊತೆಯಲ್ಲೆ ಧಾರ್ಮಿಕ ಕೇಂದ್ರವನ್ನ ಸ್ಥಾಪಿಸಿರುವುದು ಶ್ಲಾಘನಿಯ. ಪರಿಸರ ಸಂರಕ್ಷಣೆ ವಿಚಾರವಾಗಿ ಪಠ್ಯಪುಸ್ತಕಗಳಲ್ಲಿ ಸ್ನೇಕ್ ಶ್ಯಾಮ್ ಅವರ ಸೇವೆ ಮತ್ತು ಪರಿಸರ ಕಾಳಜಿಯ ವಿಷಯದ ಬಗ್ಗೆ ರಾಜ್ಯ ಸರ್ಕಾರ ಅಳವಡಿಸಿ, ಸಣ್ಣ ಮಕ್ಕಳಲ್ಲಿ ಉರಗ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು

ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ನಜರ್ ಬಾದ್ ನಟರಾಜ್, ಜಿ. ರಾಘವೇಂದ್ರ, ಪ್ರಕಾಶ್ ಪ್ರಿಯದರ್ಶನ್, ಪರಮೇಶ್ ಗೌಡ, ಅಜಯ್ ಶಾಸ್ತ್ರಿ, ಕೆ.ಎಂ. ನಿಶಾಂತ್, ಸುರೇಶ್, ಬೈರತಿ ಲಿಂಗರಾಜು, ಸುಚಿಂದ್ರ, ಚಕ್ರಪಾಣಿ, ಎಸ್.ಎನ್. ರಾಜೇಶ್, ಸದಾಶಿವ, ಸಚಿನ್ ನಾಯಕ್, ಶಫಿ, ರಾಕೇಶ್ ಮೊದಲಾದವರು ಇದ್ದರು.

Share this article