ಶಿರಸಿ: ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಎಚ್.ಎನ್. ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದ್ದು, ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಉಪ ಜಾತಿಯಲ್ಲಿ ಚನ್ನಯ್ಯ ಹೆಸರು, ಬಲಗೈ ಗುಂಪು ಎಂದು ಬರೆಸಬೇಕು ಎಂದು ಅಖಿಲ ಕರ್ನಾಟಕ ಚನ್ನಯ್ಯ ಅಭಿವೃದ್ಧಿ (ಬಲಗೈ) ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ದೊಡ್ಮನಿ ಹೇಳಿದರು.
ಚನ್ನಯ್ಯ ಜಾತಿಯವರು ಜಾತಿ ಪ್ರಮಾಣಪತ್ರ ಪಡೆಯುವಾಗ ಶಾಲಾ ದಾಖಲಾತಿ ತಪ್ಪಿನಿಂದಾಗಿ ಹರಿಜನ, ಹೊಲೆಯ, ಮಾದಿಗ, ಆದಿ ಕರ್ನಾಟಕ, ಆದಿದ್ರಾವಿಡ, ಆದಿಜಾಂಬವ, ಆದಿ ಆಂಧ್ರ ಜಾತಿ ಪ್ರಮಾಣಪತ್ರಗಳನ್ನು ಪಡೆಯಲಾಗಿದೆ. ಹೀಗಾಗಿ ಸಮೀಕ್ಷೆಗಾಗಿ ಗಣತಿದಾರರು ತಮ್ಮ ಮನೆಗಳಿಗೆ ಬಂದಾಗ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ಸರಿಯಾಗಿ ನಮೂದಿಸಿ ಜಾತಿ ಕಾಲಂನ ಉಪಜಾತಿ ಕಾಲಂನಲ್ಲಿ ಚನ್ನಯ್ಯ ಜಾತಿ ಹಾಗೂ ಬಲಗೈ ಗುಂಪು ಎಂದು ಹೇಳಿ ಬರೆಯಿಸಿ ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ನಾವು ಗಣತಿದಾರರಿಗೆ ಸರಿಯಾದ ಮಾಹಿತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಚನ್ನಯ್ಯ ಜಾತಿಯವರು ಶಿಕ್ಷಣ, ಉದ್ಯೋಗ, ಇನ್ನಿತರೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಬಸವಂತಪ್ಪ ಕೋಟೆ ಸೊರಬ, ಉಪಾಧ್ಯಕ್ಷ ರಂಗಪ್ಪ, ಪ್ರಮುಖರಾದ ಎಚ್.ಕೆ. ಶಿವಾನಂದ, ಹೊಳೆಲಿಂಗ ಬಿ.ಎಚ್., ಈರಪ್ಪ ಭಾಶಿ, ಮಂಜಪ್ಪ ಚನ್ನಯ್ಯ, ಷಣ್ಮುಖಪ್ಪ ತಳವಾರ, ಸದಾನಂದ ತಿಗಣಿ, ಶಿವರಾಮ ಬೆಳ್ಳಟ್ಟೆ, ಆನಂದಪ್ಪ ಚನ್ನಯ್ಯ ಇದ್ದರು.