ರಾಮನಗರ: ಜಾತಿ ಸಮೀಕ್ಷೆಯಲ್ಲಿ ಒಕ್ಕಲಿಗ ಸಮುದಾಯದವರು ಜಾತಿ ಹಾಗೂ ಉಪ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಬೇಕೆಂದು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಮನವಿ ಮಾಡಿದರು.
ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಒಕ್ಕಲಿಗ ಜನಾಂಗದವರಿಗೆ ಜಾತಿ ಗಣತಿ ಬಗ್ಗೆ ಸೂಕ್ತ ಮಾಹಿತಿ ಕೊಡುವುದು ನಮ್ಮ ಕರ್ತವ್ಯವಾಗಿದೆ. ಜಾತಿ ಗಣತಿ ಬಗ್ಗೆ ಕೆಲವರು ಗೊಂದಲ ಮೂಡಿಸುತ್ತಿದ್ದು, ಅದಕ್ಕೆ ಯಾರು ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಹೇಳಿದರು.
ಸಮೀಕ್ಷೆ ವಿಷಯವಾಗಿ ನಮ್ಮ ಸಮುದಾಯದ ಡಾ.ನಿರ್ಮಲಾನಂದ ಸ್ವಾಮೀಜಿ, ರಾಜಕೀಯ ನಾಯಕರು, ಚಿಂತಕರು ಸಾಮಾಜಿಕ ಮತ್ತು ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಬಗ್ಗೆ ಹಲವು ಸಭೆಗಳನ್ನು ನಡೆಸಿ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಮಾರ್ಗದರ್ಶನದಂತೆ ಎಚ್ಚರಿಕೆ ಯಿಂದ ಗಣತಿದಾರರಿಗೆ ಮಾಹಿತಿ ನೀಡಿ, ಸ್ಥಳದಲ್ಲಿ ನೀಡಿದ ಮಾಹಿತಿಯನ್ನು ದೃಢೀಕರಿಸಿ ಕೊಳ್ಳುವಂತೆ ಚೇತನ್ ಕುಮಾರ್ ಕೋರಿದರು.ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ರಾಜು ಮಾತನಾಡಿ, ಅವಿದ್ಯಾವಂತರಿಗೆ ಮಾಹಿತಿ ಕೊರತೆಯಿಂದ ತಪ್ಪಾಗಿ ನಮೂದಿಸಿದರೆ ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಆದ್ದರಿಂದ ಜಾತಿ ಹಾಗೂ ಉಪ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸುವಂತೆ ತಿಳಿಸಿದರು.
ಚಿನ್ನಸ್ವಾಮಿ, ಕಾಂತರಾಜು ಆಯೋಗ ವರದಿಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಣ್ಣಪುಟ್ಟ ಲೋಪದೋಷಗಳಾಗಿದೆ. ಹೀಗಾಗಿ ಸಮೀಕ್ಷೆ ವಿಷಯವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಜವಬ್ದಾರಿ ನೀಡಲಾಗಿದೆ. ಮೀಸಲಾತಿ ವಿಷಯವಾಗಿ ಯುವ ಪೀಳಿಗೆಗೆ ಅನ್ಯಾಯವಾಗಬಾರದು. ಆ ದೃಷ್ಟಿಯಿಂದ ಒಕ್ಕಲಿಗ ಎಂದೇ ನಮೂದಿಸಿ ಎಂದು ಸಮುದಾಯದವರಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ಕೆಂಪೇಗೌಡ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಕೆ.ಚಂದ್ರಯ್ಯ ಮಾತನಾಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಒಕ್ಕಲಿಗರ ಸಂಘದ ಪ್ರಧಾನ ಉಪಾಧ್ಯಕ್ಷ ಹೆಚ್.ಪಿ.ನಂಜೇಗೌಡ, ನಿರ್ದೇಶಕರಾದ ಬೈರೆಗೌಡ, ಸಿದ್ದೇಗೌಡ, ಕುಮಾರ್, ರಾಜಣ್ಣ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಕಸಾಪ ಅಧ್ಯಕ್ಷ ದಿನೇಶ್ ಮುಖಂಡರಾದ ಜಯ ಕರ್ನಾಟಕ ರವಿ, ಷಡಕ್ಷರಿ, ಶಂಕರಾನಂದ, ರಾಜು, ಶ್ರೀಧರ್, ವಕೀಲ ರವಿ, ವಸಂತ, ಮಲ್ಲೇಶ್, ಶಿವರಾಜು ಇತರರಿದ್ದರು.
ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ ನಗರಾಭಿ ವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.