ಕನ್ನಡಪ್ರಭ ವಾರ್ತೆ ಕುಣಿಗಲ್
ಶ್ರೀ ಸಿದ್ದಲಿಂಗೇಶ್ವರರ ಜೀವಂತ ಗದ್ದಿಗೆ ಇರುವ ಯಡಿಯೂರಿನ ಕ್ಷೇತ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯ ಮಹಾ ರಥೋತ್ಸವವು ನಡೆಯಿತು,ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಾಲಯದ ಮುಂದೆ ಜಮಾಯಿಸಿ ಬೃಹದಾಕಾರದ ರಥಕ್ಕೆ ಹಣ್ಣು, ದವನ ಎಸೆಯುವ ಮುಖಾಂತರ ಸಿದ್ದಲಿಂಗೇಶ್ವರರಿಗೆ ಭಕ್ತಿಯ ಪರಕಾಷ್ಠತೆಯನ್ನು ಮೆರೆದರು.
ಇನ್ನೂ ಕೆಲವು ಭಕ್ತರು ಮೆಣಸು, ಉಪ್ಪು ಸೇರಿ ವಿವಿಧ ವಸ್ತುಗಳನ್ನು ರಥಕ್ಕೆ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು, ರಥೋತ್ಸವದ ಹಿನ್ನೆಲೆಯಲ್ಲಿ ಸಿದ್ದಲಿಂಗೇಶ್ವರರ ದೇವಾಲಯ ಮತ್ತು ಗದ್ದುಗೆಗೆ ಹಲವಾರು ವಿವಿಧ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.ಸಾಂಪ್ರದಾಯಿಕವಾಗಿ ಮಧ್ಯಾಹ್ನ ಅಭಿಜನ್ ಮುಹೂರ್ತದಲ್ಲಿ ಸಿದ್ದಲಿಂಗೇಶ್ವರರ ವಿಗ್ರಹವನ್ನು ಶ್ರೀ ಸಿದ್ದಲಿಂಗೇಶ್ವರರ ಗದ್ದುಗೆಯಿಂದ ಮೆರವಣಿಗೆಯಲ್ಲಿ ವಿಧಿ ವಿಧಾನದಂತೆ ಶಾಸ್ತ್ರೋಕ್ತವಾಗಿ ಕರೆತಂದು ಶೃಂಗಾರಗೊಂಡ ಆರು ಚಕ್ರಗಳ ತೇರಿನ ಮೇಲೆ ಪ್ರತಿಷ್ಠಾಪಿಸಲಾಯಿತು.
ಮಹಾರಥೋತ್ಸವದ ಚಾಲನೆಗೆ ಮುನ್ನ ಸಿದ್ದಲಿಂಗೇಶ್ವರರಿಗೆ ಎಡೆ ಸೇವೆ, ರಥದ ಗಾಲಿಗಳಿಗೆ ಬಲಿ ಸೇವೆ, ನಡೆದ ನಂತರ ಷಟ್ ಧ್ವಜ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿನಲ್ಲಿ ಅನೇಕ ಭಕ್ತರು ಭಾಗವಹಿಸಿದ್ದರು. ಭಕ್ತರಿಗೆ ಹರಾಜು ನಿಂತ ಹಿನ್ನೆಲೆಯಲ್ಲಿ ಅವರನ್ನು ಈ ವರ್ಷದ ಮಹಾಭಕ್ತರೆಂದು ರಥೋತ್ಸವದ ಮೇಲೆ ಕೂರಿಸಲಾಯಿತು,ರಥದ ಗಾಲಿಗಳಿಗೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಬಾಳೆಹೊನ್ನೂರು ಕಾಸಾ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಪೂಜೆ ಸಲ್ಲಿಸುವ ಮುಖಾಂತರ ರಥೋತ್ಸವಕ್ಕೆ ಚಾಲನೆ ನೀಡಿದರು,
ನಂದಿಧ್ವಜದ ಪೂಜೆಯ ನಂತರ ರಥದ ಗಾಲಿಗಳಿಗೆ ಅಳವಡಿಸಲಾಗಿದ್ದ 4 ಪಥದ ಕಬ್ಬಿಣದ ಸರಪಳಿಗಳ ಮೂಲಕ ಆರು ಗಾಲಿಗಳ ಬೃಹತ್ ರಥವನ್ನು ನೂರಾರು ಭಕ್ತರು ಸಿದ್ದಲಿಂಗೇಶ್ವರರ ಜಯ ಘೋಷದೊಂದಿಗೆ ಎಳೆಯುವ ಮುಖಾಂತರ ಸಿದ್ದಲಿಂಗೇಶ್ವರರ ಸೇವೆ ಅರ್ಪಿಸಿದರು,ಅಂಕನಹಳ್ಳಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿ ಹಲವಾರು ಹರ, ಗುರು, ಚರಮೂರ್ತಿಗಳು ಮತ್ತು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ತಹಸೀಲ್ದಾರ್ ರಮೇಶ್ ಸೇರಿ ಸಾವಿರಾರು ಭಕ್ತರು ಭಾಗವಹಿಸಿದ್ದರು,
ಜಾತ್ರೆಗೆ ಬಂದಿದ್ದ ಭಕ್ತರಿಗೆ ದೇವಾಲಯದ ಆವರಣದಲ್ಲಿ ಹಲವಾರು ಭಕ್ತರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ಕೆಲವು ಭಕ್ತರು ಪಲಾವು, ಕೇಸರಿಬಾತು, ಅನ್ನ - ಸಾಂಬಾರು ಸೇರಿ ಹಲವಾರು ಉಪಹಾರ ಮತ್ತು ಊಟದ ದಾಸೋಹ ಸೇವೆ ನಡೆಸುವ ಮುಖಾಂತರ ಸ್ವಾಮಿಯ ಕೃಪೆಗೆ ಪಾತ್ರರಾದರು,ಎಡೆಯೂರು ದಾಸೋಹ ಕೈಂಕರ್ಯಾ ಸೇವಾ ಸಮಿತಿಯಿಂದ ಜಾತ್ರೆಗೆ ಬಂದಿದ್ದ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು.