ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ
ಕೊಪ್ಪಳ ಜಿಲ್ಲೆಯ ಗಂಗಾವತಿ, ಕನಕಗಿರಿ ಹಾಗೂ ಯಲಬುರ್ಗಾ ವಿಧಾನಸಭಾ ವ್ಯಾಪ್ತಿಯ ಕುಕನೂರು ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸತತ ಮಳೆ ಕೊರತೆಯಿಂದ ಒಣಗಿರುವ ಬೆಳೆ, ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಮೇಯಲು ಹಸಿ ಮೇವಿನ ಕೊರತೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಬೀರಿದ ಪ್ರಭಾವದಿಂದ ರೈತ ಸಮೂಹ ಸಂಕಷ್ಟ ಎದುರಿಸುವಂತಾಗಿದೆ. ಬರದ ಛಾಯೆ ಆವರಿಸಿ ಇಷ್ಟೊಂದು ತೊಂದರೆ ಎದುರಿಸುತ್ತಿರುವ ಯಲಬುರ್ಗಾ ತಾಲೂಕು ಬರಪೀಡಿತ ಪ್ರದೇಶಗಳ ಪಟ್ಟಯಿಂದ ಹೊರಗುಳಿದಿದೆ. ವಿಪರ್ಯಾಸವೆಂದರೆ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದ ಕುಕನೂರನ್ನು ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸಿ, ಯಲಬುರ್ಗಾ ಕೈಬಿಡಲಾಗಿದೆ. ಹೀಗಾಗಿ ಒಂದೇ ವಿಧಾನ ಸಭಾ ಕ್ಷೇತ್ರದ ಕುಕನೂರಲ್ಲಿ ಬರ! ಯಲಬುರ್ಗಾ ತಾಲೂಕಿನಲ್ಲಿ ಬರ ಇಲ್ಲವೇನು? ಎಂಬ ಪ್ರಶ್ನೆ ರೈತರು, ಸಾರ್ವಜನಿಕರದ್ದಾಗಿದೆ.
ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಿತ್ತನೆಗೊಂಡ ನಾನಾ ಬೆಳೆಗಳು ಬೆಳೆಯುವ ಹಂತದಲ್ಲಿಯೇ ಒಣಗಿ ಹೋಗಿವೆ. ಇನ್ನೂ ಕೆಲ ಕಡೆ ರೈತರು ಬೆಳೆಗಳನ್ನು ಜಾನುವಾರು ಮತ್ತು ಕುರಿ ಮೇಯಿಸಿದ್ದಾರೆ. ಇಂತಹ ವಾಸ್ತವ ಪರಿಸ್ಥಿತಿಯ ನಡುವೆಯೂ ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಯಲಬುರ್ಗಾ ಹೊರಗಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನಲ್ಲಿ ಮಳೆ ಪ್ರಮಾಣ, ಬೆಳೆ ಹಾನಿ ಹಾಗೂ ಕೃಷಿ ಪರಿಸ್ಥಿತಿಯ ಸಮಗ್ರ ವಾಸ್ತವಾಂಶ ಪರಿಗಣಿಸಿ ಯಲಬುರ್ಗಾವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎನ್ನುವ ಒತ್ತಾಯ ರೈತರಿಂದ ಕೇಳಿ ಬಂದಿದೆ.
ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಕೇವಲ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೆ ಯಲಬುರ್ಗಾ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡದೇ ಇರುವುದನ್ನು ಕರವೇ ತಾಲೂಕಾಧ್ಯಕ್ಷ ರಾಜಶೇಖರ ಶ್ಯಾಗೋಟಿ ಖಂಡಿಸಿದ್ದಾರೆ. ಬರಪೀಡಿತ ಪ್ರದೇಶಗಳ ಪಟ್ಟಿಯಿಂದ ಯಲಬುರ್ಗಾ ಹೊರಗುಳಿದಿರುವ ಬಗ್ಗೆ ತಹಸೀಲ್ದಾರ್ ಸ್ಪಷ್ಟೀಕರಣ ನೀಡಬೇಕು. ಕೂಡಲೇ ರಾಜ್ಯ ಸರ್ಕಾರ ತಾಲೂಕನ್ನು ಬರಪೀಡಿದ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ೧೫ ದಿನಗಳ ಒಳಗಾಗಿ ಯಲಬುರ್ಗಾ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗುವುದು. ಶೀಘ್ರದಲ್ಲೇ ಬರಪೀಡಿತ ಪ್ರದೇಶಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.