ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಹೊಳಲ್ಕೆರೆ ಶಾಸಕ ಚಂದ್ರಪ್ಪ ಹಾಗೂ ಅವರ ಮಗನ ಬಗ್ಗೆ ಮಾಜಿ ಶಾಸಕ ತಿಪ್ಪಾರೆಡ್ಡಿಬಳಸಿದ ಪೋತಪ್ಪನಾಯಕ ಶಬ್ದ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಸಂಬಂಧ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಶಾಸಕ ಎಂ.ಚಂದ್ರಪ್ಪ, ನನ್ ಮಗ ಪೋತಪ್ಪ ನಾಯಕನೇ. ಗಡ್ಡ ಮೀಸೆ ಬಿಟ್ಕಂಡಿದ್ದಾನೆ. ಮೀಸೆ ತಕ್ಕಂಡು ಹೆಂಗೆಂಗೋ ಕಾಣಿಸುತ್ತಿಲ್ಲವೆಂದು ತಿರುಗೇಟು ನೀಡಿದರು.ಸುದ್ದಿ ಗೋಷ್ಠಿಯುದ್ದಕ್ಕೂ ತಿಪ್ಪಾರೆಡ್ಡಿಯವರ ಏಕವಚನದಲ್ಲಿ ಸಂಬೋಧಿಸಿದ ಎಂ.ಚಂದ್ರಪ್ಪ, ನಾನು ಅಕ್ಕಿ, ಸೀಮೆಎಣ್ಣೆ ಮಾರಿ ಕಷ್ಟದಲ್ಲಿ ಬದುಕಿದ್ದೇನೆ. ನಿನ್ನ ಹಾಗೆ ಕರೆಂಟ್ ಕಳ್ಳತನ ಮಾಡಿಲ್ಲ. ನಾನು ಕಷ್ಟದಿಂದ ಬಂದ ವ್ಯಕ್ತಿ. ನನಗೆ ಬಡತನ ಏನೆಂದು ಗೊತ್ತಿದೆ. ನಿನ್ನಂತೆ ಬಂಗಾರದ ಚಮಚ ಇಟ್ಟುಕೊಂಡು ಬಂದವನಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದ ಮತದಾರರು ಐದು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಎಷ್ಟೋ ಜನ ಬಡತನದಲ್ಲಿದ್ದವರು, ರಾಜಕೀಯಕ್ಕೆ ಬಂದು ದೊಡ್ಡವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ನಿನಗೆ ಟಿಕೆಟ್ ಕೊಡದಿದ್ದರಿಂದ ಪಕ್ಷೇತರನಾಗಿ ನಿಂತು ಗೆದ್ದಿದ್ದಿಯಾ. ಅಲ್ಲಿಯೂ ಸಹ ನಿನ್ನ ಯೋಗ್ಯತೆ ಗೊತ್ತಾಗಿದೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ಕೊಡಲಿಲ್ಲ ಅನ್ನೋ ಕಾರಣಕ್ಕೆತಮ್ಮ ಹಿಂಬಾಲಕರಿಂದ ಟೈರ್ ಗೆ ಬೆಂಕಿ ಹಚ್ಚಿಸಿದ್ದನ್ನು ಮರೆತೆಯಾ? ಜಿಲ್ಲೆಯಲ್ಲಿ ನಾನು ಎಲ್ಲೆ ಹೋದರೂ ಇತರೆ ರಾಜಕೀಯ ಪಕ್ಷದವರು ಕರೆದು ಟಿಕೆಟ್ ನೀಡುತ್ತಾರೆ. ನಿನಗೆ ಆ ಯೋಗ್ಯತೆ ಇಲ್ಲ. ಕಳೆದ ಚುನಾವಣೆಯಲ್ಲಿ 90 ಸಾವಿರ ಮತದಾರರು ನಿನ್ನನ್ನು ತಿರಸ್ಕರಿಸಿದ್ದಾರೆ ಎಂದು ಏಕವಚನದಲ್ಲಿ ತಿಪ್ಪಾರೆಡ್ಡಿ ಮೇಲೆ ವಾಗ್ದಾಳಿ ಮಾಡಿದರು.ಶೌಚಾಲಯದಲ್ಲಿಯೂ ನನಗೊಂದು ರುಪಾಯಿ, ನಿನಗೊಂದು ರುಪಾಯಿ ಅಂತ ಗುತ್ತಿಗೆದಾರನಿಂದ ತಿಂದಿದ್ದೀಯ. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರೋಪ ಮಾಡಿದ್ದು ಯಾರ ಮೇಲೆ ಅಂತ ನಿಂಗೆ ಗೊತ್ತಿರಬೇಕಲ್ಲವಾ? ಚಿತ್ರದುರ್ಗದಲ್ಲಿ ಡಿವೈಡರ್ ಕಟ್ಟಿ ಕಮಿಷನ್ ತಿಂದಿದ್ದೀಯ. ಕ್ಷೇತ್ರದ ಮತದಾರರಿಗೆ ಮೋಸ ಮಾಡಿದ್ದಿ ಯಾ, ಈಗ ಆ ಡಿವೈಡರ್ಗಳನ್ನು ಅಧಿಕಾರಿಗಳೇ ಒಡೆಯುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಎಂದಿಗೂ ಇಂತಹ ಕಳಪೆ ಕಾಮಗಾರಿ ಮಾಡಿಲ್ಲೆವೆಂದರು.
ಐದು ಬಾರಿ ಶಾಸಕನಾಗಿದ್ದು ನಿನ್ನಷ್ಟೆ ಅರ್ಹತೆ ನನಗೂ ಇದೆ. ನಾನು ನಿನಗೆ ಅಣ್ಣನ ಸ್ಥಾನ ನೀಡಿದ್ದೆ. ಅದನ್ನು ಉಳಿಸಿಕೊಳ್ಳಲು ಆಗಲಿಲ್ಲ. ನನ್ನ ಬಗ್ಗೆ ಅವಹೇಳನ ಕಾರಿಯಾಗಿ ಮಾತಾಡಿದ್ದಿಯಾ. ಇದಕ್ಕೆ ತಕ್ಕ ಪ್ರತಿಫಲ ಮುಂದಿನ ದಿನಗಳಲ್ಲಿ ದೊರೆಯಲಿದೆ. ರೆಡ್ಡಿ ಸಮುದಾಯದಲ್ಲಿ ಜನಿಸಿದ ನೀನು ಸಮುದಾಯ ಸಂಘಟಿಸುವ ಬದಲಿಗೆ ಒಡೆವ ಕೆಲಸ ಮಾಡುತ್ತಿದ್ದಿಯಾ. ಇದೇ ರೀತಿ ಬಿಜೆಪಿ ಪಕ್ಷ ಒಡೆವ ಸಂಚು ರೂಪಿಸಿದ್ದೀಯ. ಮುಂದಿನ ದಿನಗಳಲ್ಲಿ ನೀನು ನನ್ನ ತಂಟೆಗೆ ಬರಬೇಡ, ನಾನೂ ಬರುವುದಿಲ್ಲ. ಹಾಗೇನಾದರು ಬಂದರೆ ನಿನ್ನ ಜಾತಕ ಬಿಚ್ಚಿಡುತ್ತೇನೆ ಎಂದು ಚಂದ್ರಪ್ಪ ಎಚ್ಚರಿಸಿದರು.ಪ್ರಜಾಪ್ರಭುತ್ವದಲ್ಲಿ ಯಾವುದೂ ದೊಡ್ಡದಿಲ್ಲ. ಯಾರು ಬೇಕಾದರೂ ಸ್ಪರ್ಧಿಬಹುದು, ಮತದಾರರು ನಿನ್ನ ಆಳುಗಳಲ್ಲ, ನಿನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸೋಲಿಸಿದ್ದಾರೆ. ನನ್ನ ನೋವನ್ನು ನನ್ನ ಅಭಿಮಾನಿಗಳ ಮುಂದೆ ತೋಡಿಕೊಂಡಿದ್ದೇನೆ. ಇದನ್ನು ಕೇಳುವ ಹಕ್ಕು ನಿನಗಿಲ್ಲವೆಂದರು.
ತಿಪ್ಪಾರೆಡ್ಡಿ ತರುವಾಯ ವಿ.ಪ. ಸದಸ್ಯ ನವೀನ್ ಕಡೆ ಹೊರಳಿದ ಚಂದ್ರಪ್ಪ, ಹೊಸದುರ್ಗ ವಿಧಾನಸಭಾ ಚುನಾವಣೆಯಲ್ಲಿ ಲಿಂಗಮೂರ್ತಿಗೆ ಟಿಕೆಟ್ ಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರೆ ನೀನು ಆತನ ಹತ್ತಿರ ಹಣವಿಲ್ಲ ಜನ ಬೆಂಬಲವಿಲ್ಲ ಟಿಕೆಟ್ ಕೊಡಬೇಡಿ ಎಂದು ನೇರವಾಗಿ ಹೇಳುವ ಮೂಲಕ ಟಿಕೆಟ್ ತಪ್ಪಿಸಿದ್ದಿಯಾ. ನಿನ್ನ ತಾಯಿ ತಾಲೂಕು ಪಂಚಾಯಿತಿ ಸದಸ್ಯರಾಗಿದ್ದುದಕ್ಕೆ ಮಾಜಿ ಶಾಸಕ ಉಮಾಪತಿ ಕಾರಣ. ಇದಲ್ಲದೆ ರಾಜಕೀಯವಾಗಿ ಶಕ್ತಿ ತುಂಬಿದ್ದು ಉಮಾಪತಿಯೇ. ನಾನು ಹಾಗೂ ನನ್ನ ಮಗನ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಸಿದರು.ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮನೆಗೆ ಭೇಟಿ ಮಾಡಿದ್ದು, ಸಂಧಾನಕ್ಕೆ ಪ್ರಯತ್ನ ನಡೆಸಿದ್ದಾರೆ. ಆದರೆ ನಾವು ಯಾವುದಕ್ಕೂ ಬಗ್ಗಿಲ್ಲ. ನಮ್ಮ ಪಾಲಿನ ಹಕ್ಕನ್ನು ಕೇಳಿದ್ದೇವೆ. ಏಪ್ರಿಲ್ 3 ರಂದು ಪಕ್ಷೇತರರಾಗಿ ನನ್ನ ಪುತ್ರ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲಿದ್ದಾನೆ. ಕ್ಷೇತ್ರವನ್ನು ಸುತ್ತಾಡಿರುವ ರಘುಚಂದನ್ಗೆ ಎಲ್ಲಾ ಸಮಾಜದವರು ಬೆಂಬಲವನ್ನು ಸೂಚಿಸಿದ್ದಾರೆ ಎಂದು ಚಂದ್ರಪ್ಪ ಹೇಳಿದರು.
ನಗರಸಭಾ ಸದಸ್ಯರಾದ ಬಾಸ್ಕರ್, ಇಪ್ಕೋದ ಸಂಜೀವ್ ಕುಮಾರ್, ಅಡಿಕೆ ಉದ್ಯಮಿ ಲವ ಕುಮಾರ್, ಬೋವಿ ಸಮಾಜದ ಮುಖಂಡ ಮೋಹನ್ , ಬಿಜೆಪಿಯ ರತ್ಮಮ್ಮ, ಮಂಡಲ ಅಧ್ಯಕ್ಷ ಸಿದ್ದೇಶ, ಜಿಪಂ ಮಾಜಿ ಸದಸ್ಯರಾದ ಮಹೇಶ್, ತಿಪ್ಪೇಸ್ವಾಮಿ, ಮುಖಂಡರಾದ ಬಸವರಾಜ್, ಮುರುಗೇಶ್, ಈಶಣ್ಣ,ಮಹಂತೇಶ್, ಬಸವಯ್ಯ, ಸಿದ್ದರಾಮಣ್ಣ ಸೇರಿದಂತೆ ಇತರರಿದ್ದರು.