ಸಿಎಂ ಸ್ಥಾನಕ್ಕಾಗಿ ಸಿಎಂ, ಡಿಸಿಎಂ ಬಣದವರಿಂದ ಭ್ರಷ್ಟಾಚಾರ: ಜೋಶಿ

KannadaprabhaNewsNetwork | Updated : Jun 22 2025, 11:21 AM IST

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣದವರು ಆಂತರಿಕ ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕಾಗಿ ಶಾಸಕರನ್ನು ಖರೀದಿ ಮಾಡಲು ಎರಡೂ ಬಣದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ-  ಪ್ರಹ್ಲಾದ್ ಜೋಶಿ  

  ಬಾಗಲಕೋಟೆ :  ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಣದವರು ಆಂತರಿಕ ಪೈಪೋಟಿ ನಡೆಸುತ್ತಿದ್ದಾರೆ. ಇದಕ್ಕಾಗಿ ಶಾಸಕರನ್ನು ಖರೀದಿ ಮಾಡಲು ಎರಡೂ ಬಣದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

 ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಗುಂಪಿನವರು ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಖಚಿತ ಎನ್ನುತ್ತಾರೆ. ಸಿದ್ದರಾಮಯ್ಯ ಬಣದವರು ಯಾವುದೇ ಬದಲಾವಣೆ ಇಲ್ಲ ಎನ್ನುತ್ತಾರೆ. ಇದು ಆಡಳಿತದ ಮೇಲೂ ಪರಿಣಾಮ ಬೀರಿದೆ, ಶಾಸಕರನ್ನು ಖರೀದಿ ಮಾಡಲು ಈ ಎರಡೂ ಬಣದವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ತಮ್ಮ ಪರ ಶಾಸಕರ ಖರೀದಿ ವ್ಯಾಪಾರಕ್ಕೆ ನಿಂತಿದ್ದಾರೆ, ಶಾಸಕರೂ ಸಹ ವೈಯಕ್ತಿಕ ಲಾಭಕ್ಕೆ ನಿಂತಿದ್ದಾರೆ. ಅವರಿಗೂ ಇದೊಂದು ಚಿನ್ನದಂತಹ ಅವಕಾಶ, ಬಾಚಿಕೊಳ್ಳೋದೆ ಎಂದು ಗೇಲಿ ಮಾಡಿದರು. ಭ್ರಷ್ಟಾಚಾರದ ಮೊಟ್ಟೆ ಇಟ್ಟು ಮರಿಗಳನ್ನು ಬೆಳೆಸಿದವರು ಕಾಂಗ್ರೆಸ್ಸಿನವರು ಎಂದು ಕಿಡಿಕಾರಿದರು.

ಅವರದೇ ಪಕ್ಷದ ರಾಯರೆಡ್ಡಿ ಅವರು ನಮ್ಮ ಸರ್ಕಾರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೀತಿದೆ ಎಂದು ಈ ಮೊದಲು ಹೇಳಿದ್ದರು. ಈಗ ಆಡಿಯೋ ಬಿಡುಗಡೆ ಆಗಿದೆ. ಅಭಿವೃದ್ಧಿಗೆ ದುಡ್ಡಿಲ್ಲ, ಭ್ರಷ್ಟಾಚಾರ ಹೆಚ್ಚು ನಡೆದಿದೆ ಎಂದು ಉತ್ತರ ಕರ್ನಾಟಕದ ಶಾಸಕರು ಹೇಳಿದರು. ಈಗ ಆಡಿಯೋ ಬಿಡುಗಡೆ ಆಗಿದೆ, ನಾವೇನಾದರೂ ಹೇಳಿದರೆ ಬಿಜೆಪಿಗರಿಗೆ ಕೆಲಸ ಇಲ್ಲ ಎನ್ನುತ್ತಾರೆ. ಈಗ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು.

ಯೋಗ ಸಾಮರಸ್ಯ ಸಾಧಿಸುವ ವಿಶಿಷ್ಟ ಶಕ್ತಿ ಸಹ ಹೊಂದಿದೆ

ಯೋಗ ನಮ್ಮ ದೇಹ, ಮನಸ್ಸು ಮತ್ತು ಆತ್ಮಬಲ ಹೆಚ್ಚಿಸುವುದು ಮಾತ್ರವಲ್ಲದೆ, ಜಗತ್ತಿನಲ್ಲಿ ಸಾಮರಸ್ಯ ಸಾಧಿಸುವ ವಿಶಿಷ್ಟ ಶಕ್ತಿ ಸಹ ಹೊಂದಿದೆ ಎಂದು ಕೇಂದ್ರ ಆಹಾರ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲಿನ ವಿರೂಪಾಕ್ಷ ದೇವಸ್ಥಾನ ಆವರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಮ್ಮಿಕೊಂಡ 11ನೇ ಅಂತಾರಾಷ್ಟ್ರೀಯ ಯೋಗದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಗ ನಮ್ಮ ಪ್ರಾಚೀನ ಆಧ್ಯಾತ್ಮಿಕ, ಶಾರೀರಿಕ ಮತ್ತು ಮಾನಸಿಕ ಸದೃಢತೆಗೆ ಉತ್ತಮ ಅಭ್ಯಾಸವಾಗಿದೆ. ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯವಾಗಿದೆ ಎಂದು ಹೇಳಿದರು.

ಭಾರತೀಯ ನೆಲದಲ್ಲಿ ಅರಳಿದ ಯೋಗವು ಪ್ರಧಾನಿ ಮಂತ್ರಿಗಳ ಆಶಯದಂತೆ ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಉತ್ತೇಜಿಸುವ ಸಾಧನವಾಗಿದೆ. ಪ್ರಸ್ತುತದ ಪ್ರತಿಕೂಲಕ ಪರಿಸ್ಥಿತಿಯಲ್ಲಿ ಯೋಗ ಅನುಸರಣೆ ವಿಶ್ವಕ್ಕೆ ಅತ್ಯಗತ್ಯವಾಗಿದೆ ಎಂಬುವುದನ್ನು ಪ್ರಧಾನ ಮಂತ್ರಿಗಳು ಪ್ರತಿಪಾದಿಸಿದ್ದಾರೆ. ಅದರ ಪ್ರತಿಫಲವಾಗಿ ಇಂದು ವಿಶ್ವವೇ ಯೋಗಭ್ಯಾಸದಲ್ಲಿ ನಿರತವಾಗಿದೆ. 21ನೇ ಶತಮಾನ ಭಾರತದ ಶತಮಾನ ಆಗುವಲ್ಲಿ ಯೋಗ ಅನನ್ಯ ಕೊಡುಗೆ ನೀಡುತ್ತಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಶಾಸಕ ಹಣಮಂತ ನಿರಾಣಿ, ಜಿಲ್ಲಾಧಿಕಾರಿ ಸಂಗಪ್ಪ ಎಂ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಭಾರತೀಯ ಪುರಾತತ್ವ ಸಮೀಕ್ಷೆಯ ಹಿರಿಯ ಅಧಿಕಾರಿ ನವರತ್ನಿ ಕುಮಾರ್ ಪಾಟಕ್ ಹಾಗೂ ಅಧಿಕಾರಿ ವರ್ಗ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

ಪಾರಂಪರಿಕ ತಾಣಗಳಿಗೆ ಭೇಟಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆ ಬಳಿಕ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಚಾಲುಕ್ಯರ ಆಳ್ವಿಕೆಯಲ್ಲಿ ಪಟ್ಟಾಭಿಷೇಕ ಸಮಾರಂಭಗಳಿಗೆ ಸಾಕ್ಷಿಯಾಗಿದ್ದ ಪಟ್ಟದಕಲ್ಲಿನಲ್ಲಿ ದಕ್ಷಿಣ ಭಾರತದ ದ್ರಾವಿಡ ಶೈಲಿ ಮತ್ತು ಉತ್ತರ ಭಾರತದ ನಾಗರ ಶೈಲಿಯ ವಾಸ್ತುಶಿಲ್ಪ ಅತ್ಯದ್ಭುತವಾಗಿದೆ. ಶಿಲ್ಪಕಲೆಯ ವಿಶಿಷ್ಟತೆಯಿಂದಾಗಿ ವಿಶ್ವ ಪರಂಪರೆಯು ತಾಣವಾಗಿರುವ ಪಟ್ಟದಕಲ್ ಅತ್ಯಂತ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ ವಿಶ್ವದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

Read more Articles on