ರಾಮನಗರ: ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣ ಮನಸ್ಸೇ ಆಗಿರುತ್ತದೆ. ಆದ್ದರಿಂದ ಎಲ್ಲರೂ ಮನಸ್ಸನ್ನು ಸ್ವಾಸ್ಥ್ಯವಾಗಿಟ್ಟುಕೊಳ್ಳಬೇಕು. ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುವುದೇ ಯಶಸ್ಸಿನ ಗುಟ್ಟು ಎಂದು ಸಾಹಿತಿ ಡಾ.ಎಚ್.ಎಲ್. ಪುಷ್ಪಾ ಹೇಳಿದರು.
ಮನೋವಿಜ್ಞಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಮನೋರೋಗಗಳಿಂದ ದೂರವಿರಬೇಕು. ವಚನಕಾರರು ಸಹ ಮನಸ್ಸಿನ ನಿಯಂತ್ರಣ ಕುರಿತು ಹಲವು ವಚನಗಳನ್ನು ರಚಿಸಿದ್ದಾರೆ. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದರ ಕುರಿತು ಜನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಪುಸ್ತಕಗಳನ್ನು ಕುರಿತು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತೆ ಎಸ್.ಪದ್ಮರೇಖಾ ಮಾತನಾಡಿ, ನಾವು ದೇಹದ ಆರೋಗ್ಯಕ್ಕೆ ಒತ್ತು ನೀಡುತ್ತಿದ್ದೇವೆಯೆ ಹೊರೆತು ಮಾನಸಿಕ ಆರೋಗ್ಯಕ್ಕೆ ಮಹತ್ವ ನೀಡುತ್ತಿಲ್ಲ. 2015ರ ವರದಿಯೊಂದರ ಪ್ರಕಾರ 100ರಲ್ಲಿ 10 ಮಂದಿ ಮಾನಸಿಕ ಕಾಯಿಲೆಗೆ ಒಳಗಾಗಿರುತ್ತಾರೆ. ನಕಾರಾತ್ಮಕ ಆಲೋಚನೆ ಮಾಡುವುದನ್ನು ಬಿಟ್ಟು ಸಕಾರಾತ್ಮಕ ಆಲೋಚನೆಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.ಯೋಗೇಶ್ ಮಾಸ್ಟರ್ ಅವರು ತಮ್ಮ ಎರಡು ಕೃತಿಗಳಲ್ಲಿ ಹೊಸ ಪದಗಳನ್ನು ಬಳಸಿದ್ದಾರೆ. ಇಂದು ಬಿಡುಗಡೆಯಾದ ಪುಸ್ತಕಗಳು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ತಿಳಿಸಿಕೊಡುತ್ತವೆ ಎಂದರು.
ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ಭಾರದಲ್ಲಿ ಇಂದು ಶೇ.40ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಒತ್ತಡ ಹೆಚ್ಚಾಗುತ್ತಿದ್ದು, ಯುವ ಸಮುದಾಯ ನಾನಾ ರೀತಿಯ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಜನರು ಒತ್ತಡ ರಹಿತ ಜೀವನ ನಡೆಸಿದರೆ ರೋಗಗಳಿಂದ ದೂರವಿರಬಹುದು. ಪ್ರಸ್ತುತ ಸಂದರ್ಭದಲ್ಲಿ ಮೊಬೈಲ್ ಅಪಾಯಕಾರಿ ಸಾಧನವಾಗಿ ಮಾರ್ಪಟ್ಟಿದೆ. ಜನ ಸಮರ್ಪಕ ಜೀವನಶೈಲಿ ಅಳವಡಿಸಿಕೊಳ್ಳದಿದ್ದರೆ ವಿವಿಧ ರೀತಿಯ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಹೇಳಿದರು.
ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ ಕ್ರಿಸ್ಟಿ, ಪ್ರಕಾಶಕಿ ಕೈವಲ್ಯ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ರಾಮನಗರದ ಜಾನಪದ ಲೋಕದಲ್ಲಿ ಲೇಖಕ ಯೋಗೇಶ್ ಮಾಸ್ಟರ್ ಅವರ ‘ಮುಕುತವಾಗಲಿ ಮನವು’ ಹಾಗೂ ‘ಒಣಮರಗಳ ಕಾಡು’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.