ಹೊಸಪೇಟೆ: ಇನ್ನು ಮುಂದೆ ಬೊಜ್ಜು ಇರುವ ಪೊಲೀಸ್ ಸಿಬ್ಬಂದಿ ಯೋಗ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಹೇಳಿದರು.
ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಹಾಗೂ ದಕ್ಷಿಣ ಭಾರತದ ಪ್ರಮುಖ ಯೋಗ ಶಿಕ್ಷಕ ಭವರ್ಲಾಲ್ ಆರ್ಯ ಮಾತನಾಡಿ, ಮನುಷ್ಯನಿಗೆ ಯೋಗದ ಜತೆಗೆ ಸಾತ್ವಿಕ ಆಹಾರವೂ ಮುಖ್ಯ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದನ್ನು ಕರ್ತವ್ಯದಲ್ಲಿ ಇರುವ ಸಿಬ್ಬಂದಿ ಸಹ ರೂಢಿಸಿಕೊಳ್ಳಬೇಕು ಎಂದರು.
ಯೋಗದಿಂದ ಹಲವು ರೋಗಗಳು ನಿವಾರಣೆಯಾಗುವುದು. ಇದು ಕೇವಲ ಕಾಲ್ಪನಿಕ ಸಂಗತಿಯಲ್ಲ, ದೆಹಲಿ ‘ಏಮ್ಸ್’ನಿಂದಲೇ ಯೋಗದ ಬಗ್ಗೆ ಸಂಶೋಧನೆ ನಡೆದು ಸಾಬೀತಾಗಿದೆ. ಪತಂಜಲಿ ಯೋಗ ಸಮಿತಿಯ ವತಿಯಿಂದಲೂ ಹಲವು ಸಂಶೋಧನಾ ವರದಿಗಳು, ಪ್ರಬಂಧಗಳು ಮಂಡನೆಯಾಗಿವೆ. ಯೋಗವನ್ನು ನಿತ್ಯ ಜೀವನದ ಭಾಗವಾಗಿ ಮಾಡಿಕೊಂಡರೆ ವಿವಿಧ ಕಾಯಿಲೆಗಳನ್ನು ದೂರ ಇಡಬಹುದು ಎಂದರು.ಸಮಾಜಘಾತುಕರು, ಕ್ರಿಮಿನಲ್ಗಳಿಗೂ ಯೋಗದ ಬಗ್ಗೆ ಪೊಲೀಸರು ತಿಳಿವಳಿಕೆ ನೀಡಿ ಮತ್ತು ನಿತ್ಯ ಯೋಗ ಮಾಡಲು ಪ್ರೇರೇಪಿಸಬೇಕು. ಇದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗಲು ಸಾಧ್ಯ ಎಂದು ಹೇಳಿದರು.
ಎಎಸ್ಪಿ ಜಿ. ಮಂಜುನಾಥ್ ಮಾತನಾಡಿದರು. ಪತಂಜಲಿ ಯೋಗ ಸಮಿತಿಯ ರಾಜ್ಯ ಸದಸ್ಯ ಬಾಲಚಂದ್ರ ಶರ್ಮಾ, ಜಿಲ್ಲಾ ಪ್ರಭಾರಿ ಪ್ರೊ. ಎಫ್.ಟಿ. ಹಳ್ಳಿಕೇರಿ, ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್ ಕರ್ವಾ, ಯೋಗ ಸಾಧಕರಾದ ಕೃಷ್ಣ ನಾಯ್ಕ್, ಪೂಜಾ ಐಲಿ, ಅಶೋಕ್ ಚಿತ್ರಗಾರ್, ರಾಜಭಕ್ಷಿ, ಕವಿತಾ ಭಾಸ್ಕರ್, ಶ್ರೀರಾಮ್, ಚಂದ್ರಿಕಾ ಶ್ರೀರಾಮ್, ವಿಠೋಬಣ್ಣ, ಚಂದ್ರಿಕಾ ಶ್ರೀರಾಮ, ಕವಿತಾ ಭಾಸ್ಕರ, ಸುಜಾತಾ ಕರ್ಣಂ, ರಾಮು, ಯರಿಯಪ್ಪ, ಕರಿಬಸವರಾಜ, ರಾಮಚಂದ್ರ ಕಂಬದ, ಗೋವಿಂದಪ್ಪ ಭಾಗವಹಿಸಿದ್ದರು.