ಯುವತಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ನೆಲಜಿ ಗ್ರಾಮದಲ್ಲಿ ನಡೆದಿದೆ. ನಿಲಿಕಾ ಪೊನ್ನಪ್ಪ ಮೃತ ಯುವತಿ.
ಮಡಿಕೇರಿ : ಯುವತಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದಲ್ಲಿ ನಡೆದಿದೆ.ನೆಲಜಿ ಗ್ರಾಮದ ಕಾಫಿ ಬೆಳೆಗಾರ ಮಣವಟ್ಟಿರ ಪೊನ್ನಪ್ಪ ಅವರ ಮಗಳು ನಿಲಿಕಾ ಪೊನ್ನಪ್ಪ (24) ಮೃತ ಯುವತಿ. ನಿಲಿಕಾ ಮಡಿಕೇರಿಯ ಕೊಡಗು ವೈದ್ಯಕೀಯ ಕಾಲೇಜು ಮತ್ತು ಬೋಧಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಕರ್ತವ್ಯಕ್ಕೆ ಹೊರಟಿದ್ದಳು. ಈ ಸಂದರ್ಭ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಹಿಂತಿರುಗಿ ತನ್ನ ಕೋಣೆಗೆ ಹೋಗಿ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾಳೆ. ಪೋಷಕರು ಮಗಳತ್ತ ತೆರಳುವ ವೇಳೆಗೆ ನಿಲಿಕಾ ಉಸಿರಾಟ ಸ್ಥಗಿತಗೊಳಿಸಿದ್ದಳು. ಕಣ್ಣೆದುರೇ ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದ್ದರೆ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ನಿಲಿಕಾಳ ನೆನೆದು ಕಣ್ಣೀರಿಟ್ಟ ಸಹೋದ್ಯೋಗಿಗಳು: ನಿಲಿಕಾಳ ಆಸ್ಪತ್ರೆಯಲ್ಲಿ ಸದಾ ಚಟುವಟಿಕೆಯಿಂದ ಇರುತ್ತಿದ್ದಳು, ಎಲ್ಲರೊಂದಿಗೂ ಸದಾ ಖುಷಿ ಖುಷಿಯಾಗಿ ಇರುತ್ತಿದ್ದಳು, ನಾವು ನೋಡದಿದ್ದರೆ ಅವಳೇ ನೋಡಿ ಕರೆದು ಮಾತನಾಡಿಸುತ್ತಿದ್ದ ಹುಡುಗಿ ನಾಲ್ಕು ವರ್ಷದಿಂದ ನಮ್ಮೆಲ್ಲರ ಮನೆ ಮಗಳಂತೆ ಇದ್ದ ನಿಲಿಕಾ ಹಾಡು, ನೃತ್ಯ ಎಲ್ಲದರಲ್ಲೂ ಮುಂದೆ ಇದ್ದಳು. ನಿನ್ನೆಯೂ ಅವಳು ಕರ್ತವ್ಯಕ್ಕೆ ಬಂದಿದ್ದಳು ಇಂದು ಕರ್ತವ್ಯಕ್ಕೆ ಬರುವವಳಿದ್ದಳು ಅಷ್ಟರಲ್ಲಿ ದೇವರು ವಿಧಿಯಾಟ ಮೆರೆದಿದ್ದಾನೆ ಎಂದು ನಿಲಿಕಾಳ ನೆನೆದು ಸಹೋದ್ಯೋಗಿಗಳು ಕಣ್ಣೀರಿಟ್ಟರು.ನಿಲಿಕಾಳ ನೋಡಲು ಕೊಡಗಿನ ವಿವಿಧೆಡೆಯಿಂದ ಜನರ ದಂಡೇ ಹರಿದು ಬಂದಿತ್ತು. ಮಳೆಯ ನಡುವೆಯೂ ಜನ ದೊಡ್ಡ ಸರದಿಯಲ್ಲಿ ನಿಂತು ನಿಲಿಕಾಳ ಅಂತಿಮ ದರ್ಶನ ಪಡೆದರು. ಮಗಳನ್ನು ಕಳೆದುಕೊಂಡ ಪೋಷಕರು, ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.