ಯುವಕನಿಗೆ ಥಳಿತ, ಪಿಎಸೈ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Oct 21, 2023 12:30 AM

ಸಾರಾಂಶ

ಕುಷ್ಟಗಿ ಠಾಣೆಯ ಪಿಎಸೈ ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು, ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟಿಸಿ ಧಿಕ್ಕಾರ ಕೂಗಿದರು.

ಕುಷ್ಟಗಿ: ಠಾಣೆಯ ಪಿಎಸೈ ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು, ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರತಿಭಟಿಸಿ ಧಿಕ್ಕಾರ ಕೂಗಿದರು.ಪಟ್ಟಣದ ವಿಜಯಕುಮಾರ ಮದ್ದಾನಿ ಹಿರೇಮಠ ಅವರ ಪುತ್ರ ನಂದಿಶಗೆ ಪಿಎಸೈ ಮುದ್ದುರಂಗಸ್ವಾಮಿ ಬೂಟುಗಾಲಿನಿಂದ ಒದ್ದು ಠಾಣೆಗೆ ಕರೆದೊಯ್ದು ಬೆಲ್ಟಿನಿಂದ ಹಲ್ಲೆಗೈದಿದ್ದಾರೆ. ಪಿಎಸೈ ಕಾಂಗ್ರೆಸ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮಾನಪ್ಪ ವಾಲ್ಮೀಕಿ ಭೇಟಿ ನೀಡಿ, ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ಯಾವುದಕ್ಕೂ ಜಗ್ಗಲಿಲ್ಲ. ಪ್ರತಿಭಟನೆ ಮುಂದುವರೆಸಿದರು. ಪಿಎಸೈ ಅಮಾನತುಗೊಳಿಸಲು ಒತ್ತಾಯಿಸಿ ಶನಿವಾರ ಕುಷ್ಟಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದರು.

ಈ ಕುರಿತು ಪಿಎಸೈ ಮುದ್ದುರಂಗಸ್ವಾಮಿ ಮಾತನಾಡಿ, ಯುವಕರು ಬೈಕ್ ಸೈಲೆನ್ಸರ್ ಪೈಪ್ ಕಿತ್ತು ಎರ್ರಾಬಿರ್ರಿ ಗಾಡಿ ಓಡಿಸುತ್ತಿರುವ ಬಗ್ಗೆ ದೂರು ಬಂದಿತ್ತು. ನನಗೆ ರವಿಕುಮಾರ ಹಿರೇಮಠ ಎನ್ನುವುದು ಗೊತ್ತಿಲ್ಲ. ಕಾಲೇಜು ಅಕ್ಕ-ಪಕ್ಕ ಯುವಕ ಬೈಕ್ ಸೈಲೆನ್ಸರ್ ಕಿತ್ತು ಕರ್ಕಶ ಸೌಂಡ್ ಮಾಡಿಕೊಂಡು ವಾಹನ ಸಂಚರಿಸಿರುವುದನ್ನು ಗಮನಿಸಿದ್ದೇನೆ. ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಕಾಂಗ್ರೆಸ್, ಬಿಜೆಪಿ ಕಡೆಯವರು ಎನ್ನುವುದು ಯಾವೂದು ನನಗೆ ಗೊತ್ತಿಲ್ಲ. ನಮಗೂ ರವಿ ಅಜ್ಜನವರಿಗೂ ಯಾವುದೇ ವೈರತ್ವ ಇಲ್ಲ ಸ್ಪಷ್ಟಪಡಿಸಿದರು.

ಬಂದ್‌ಗೆ ಅನುಮತಿ ನೀಡಲ್ಲ: ದಿಢೀರ್ ಪ್ರತಿಭಟನೆ ಮಾಡಿದ್ದು ಕಾನೂನು ಉಲ್ಲಂಘನೆಯಾಗಿದೆ. ಶನಿವಾರ ಕುಷ್ಟಗಿ ಬಂದ್‌ಗೆ ಕರೆ ಕೊಟ್ಟರೆ ಯಾವುದೇ ರೀತಿಯಿಂದ ಅನುಮತಿ ನೀಡುವುದಿಲ್ಲ ಎಂದು ಸಿಪಿಐ ಯಶವಂತ್ ಬಿಸನಳ್ಳಿ ತಿಳಿಸಿದರು. ಬಿಜೆಪಿ ಕಾರ್ಯಕರ್ತರು, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share this article