ಯುವನಿಧಿ: ಕೊಡಗು ಜಿಲ್ಲೆಯಲ್ಲಿ 1130 ಮಂದಿ ಹೆಸರು ನೋಂದಣಿ

KannadaprabhaNewsNetwork | Published : Jul 3, 2024 12:18 AM

ಸಾರಾಂಶ

ಯುವನಿಧಿ ಯೋಜನೆಯು ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಚಾಲನೆಗೊಂಡಿದ್ದು, ಜಿಲ್ಲೆಯಲ್ಲಿ ಈ ತನಕ 1130 ಮಂದಿ ಹೆಸರು ನೋಂದಣಿ ಮಾಡಿದ್ದಾರೆ. ಪ್ರತಿ ತಿಂಗಳು 3,000 ಮತ್ತು 1500 ರು. ನಿರುದ್ಯೋಗ ಭತ್ಯೆ ನೀಡುವ ಯೋಜನೆ ಆಗಿದೆ. ಜನವರಿ 12 ರಿಂದ ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಆರಂಭವಾಗಿದ್ದು, ಜಿಲ್ಲೆಯಲ್ಲಿ 562 ಮಂದಿಗೆ ಯುವನಿಧಿ ಯೋಜನೆ ತಲುಪುತ್ತಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ಡಿಸೆಂಬರ್ 26 ರಿಂದ ನೋಂದಣಿ ಪ್ರಕ್ರಿಯೆ ಚಾಲನೆಗೊಂಡಿದ್ದು, ಜಿಲ್ಲೆಯಲ್ಲಿ ಈ ತನಕ 1130 ಮಂದಿ ಹೆಸರು ನೋಂದಣಿ ಮಾಡಿದ್ದಾರೆ.

ಪ್ರತಿ ತಿಂಗಳು 3,000 ಮತ್ತು 1500 ರು. ನಿರುದ್ಯೋಗ ಭತ್ಯೆ ನೀಡುವ ಯೋಜನೆ ಆಗಿದೆ. ಜನವರಿ 12 ರಿಂದ ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ಆರಂಭವಾಗಿದ್ದು, ಜಿಲ್ಲೆಯಲ್ಲಿ 562 ಮಂದಿಗೆ ಯುವನಿಧಿ ಯೋಜನೆ ತಲುಪುತ್ತಿದೆ. ಯುವನಿಧಿ ಯೋಜನೆ ಪಡೆಯುತ್ತಿರುವವರು ಪ್ರತಿ ತಿಂಗಳು ಸ್ವಯಂ ದೃಢೀಕರಣವನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಿದೆ ಎಂದು ಜಿಲ್ಲಾ ಉದ್ಯೋಗ ವಿನಿಯಮಾಯಾಧಿಕಾರಿ ರೇಖಾ ಗಣಪತಿ ತಿಳಿಸಿದ್ದಾರೆ.

ಕುಶಾಲನಗರ ತಾಲೂಕಿನಲ್ಲಿ 177, ಮಡಿಕೇರಿ ತಾಲೂಕಿನಲ್ಲಿ 304, ಪೊನ್ನಂಪೇಟೆ ತಾಲೂಕಿನಲ್ಲಿ 133, ಸೋಮವಾರಪೇಟೆ ತಾಲೂಕಿನಲ್ಲಿ 317, ವಿರಾಜಪೇಟೆ ತಾಲೂಕಿನಲ್ಲಿ 203 ಮಂದಿ ಹೆಸರು ನೋಂದಾಯಿಸಿದ್ದಾರೆ.

ಫಲಾನುಭವಿಗಳ ಗಮನಕ್ಕೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮುಖಾಂತರ ಸರ್ಕಾರದ ಮಹತ್ತರ ಯೋಜನೆಯಾದ ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರದ ಗ್ಯಾರಂಟಿ ಯೋಜನೆಗೆ ಚಾಲನೆ ನೀಡಲಾಗಿದೆ.

ಯುವನಿಧಿ ಯೋಜನೆಯಡಿ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿರುವ ಕೊಡಗು ಜಿಲ್ಲೆಗೆ ಸಂಬಂಧಿಸಿದ ಅರ್ಹ ಫಲಾನುಭವಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕಪತ್ರಗಳು, ಆಧಾರ್ ಕಾರ್ಡ್ ಹಾಗೂ ಇತರ ದಾಖಲಾತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ, (ರೂಂ ನಂ-22, ಎರಡನೇ ಮಹಡಿ, ಜಿಲ್ಲಾಡಳಿತ ಭವನ ಕಟ್ಟಡ ಕೊಡಗು ಜಿಲ್ಲೆ, ಮಡಿಕೇರಿ) ಇಲ್ಲಿಗೆ ಪರಿಶೀಲನೆಗೆ ಹಾಜರಾಗಬೇಕು.

ಹಾಗೆಯೇ ಯುವನಿಧಿ ಯೋಜನೆಗೆ ಅರ್ಹರಾದ ಎಲ್ಲಾ ಫಲಾನುಭವಿಗಳು ಪ್ರತಿ ತಿಂಗಳ 25 ನೇ ತಾರೀಕಿನ ಒಳಗಾಗಿ ‘ಉನ್ನತ ವ್ಯಾಸಂಗ ಮುಂದುವರಿಸದಿರುವ ಕುರಿತು ಹಾಗೂ ಯಾವುದೇ ಉದ್ಯೋಗ ಹೊಂದಿಲ್ಲದಿರುವ ಕುರಿತು ಸ್ವಯಂ ಘೋಷಣೆ ನೀಡಬೇಕಾಗಿರುತ್ತದೆ’ ಎಂದು ಜಿಲ್ಲಾ ಉದ್ಯೋಗಾಧಿಕಾರಿ ರೇಖಾ ಗಣಪತಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1800 599 9918 ಗೆ ಕರೆ ಮಾಡುವ ಮೂಲಕ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

Share this article