ಕನ್ನಡಪ್ರಭ ವಾರ್ತೆ ಮೈಸೂರು
ಸದೃಢವಾದ ಭಾರತವನ್ನು ಕಟ್ಟಲು ಯುವಜನರ ಅವಶ್ಯಕತೆಯಿದೆ. ಅದು ಎನ್ಎಸ್ಎಸ್ ಯಿಂದ ಸಾಧ್ಯವಾಗುತ್ತದೆ ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಕೆ. ಕಾಳಚನ್ನೇಗೌಡ ತಿಳಿಸಿದರು.ನಗರದ ಎಂಎಂಕೆ ಮತ್ತು ಎಸ್ ಡಿಎಂ ಮಹಿಳಾ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕವು ಆಯೋಜಿಸಿದ್ದ ಎನ್ಎಸ್ಎಸ್ ದೈನಂದಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಪಂಚದ ಬೇರೆಲ್ಲಾ ರಾಷ್ಟ್ರಗಳಿಗಿಂತಲೂ ಭಾರತದಲ್ಲಿ ಯುವಜನರು ಅಧಿಕ ಸಂಖ್ಯೆಯಲ್ಲಿದ್ದು, ಅದನ್ನು ಸಂಪತ್ತಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಎನ್ಎಸ್ಎಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಅದರ ಜೊತೆಗೆ ಎನ್ಎಸ್ಎಸ್ ಪ್ರಯೋಜನಗಳನ್ನು ತಿಳಿಸಿಕೊಡಬೇಕು. ಎನ್ಎಸ್ಎಸ್ ಅಂದರೆ ಬರೀ ಕಸ ತೊಡೆಯುವುದಲ್ಲ, ಮಕ್ಕಳ ಪ್ರತಿಭೆಯನ್ನು ಹುಡುಕಿ ಹೊರ ತೆಗೆಯುವುದು ಮತ್ತು ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದು ಎಂದರು.ಎನ್ಎಸ್ಎಸ್ ತಂಡದಲ್ಲಿ ಗುಂಪುಗಳಾಗಿ ಮಾಡಿ ತಂಡಗಳಿಗೆ ಅವರದೇ ಆದ ಜವಾಬ್ದಾರಿಯನ್ನು ವಹಿಸಬೇಕು. ವರ್ಷದ ಮುಖ್ಯ ದಿನಗಳನ್ನು ಕುರಿತು ಅದರ ಬಗ್ಗೆ ವಿಷಯ ವಸ್ತುಗಳನ್ನು ಸಂಗ್ರಹಿಸಿ ಎಲ್ಲರಿಗೂ ತಲುಪಿಸಬೇಕು. ಇರುವಂತ ಕಡಿಮೆ ಸೌಕರ್ಯವನ್ನು ಉಪಯೋಗಿಸಿಕೊಂಡು ಕ್ಯಾಂಪ್ ಅಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್. ಭಾರತಿ ಮಾತನಾಡಿ, ಎನ್ಎಸ್ಎಸ್ ವ್ಯಕ್ತಿತ್ವ ವಿಕಾಸನದ ಜೊತೆಗೆ ಸರ್ವೋತ್ತಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆಂತರೀಕ ಶಕ್ತಿ ಹೆಚ್ಚಾಗುವುದರ ಮೂಲಕ ಕ್ಲಾಸ್ ರೂಂ ಹೊರಗಡೆ ಶಿಕ್ಷಣ ಕಲಿಸುತ್ತದೆ. ಆತ್ಮವಿಶ್ವಾಸ, ನಾಯಕತ್ವದ ಗುಣ ಬರುತ್ತದೆ. ಶ್ರಮದ ಬಗ್ಗೆ ಗೌರವ ಬರುವಂತೆ ಮಾಡುತ್ತದೆ ಎಂದರು.ಮಕ್ಕಳಲ್ಲಿ ಇರುವ ಅಹಂ ಭಾವನೆ ಹೋಗುತ್ತದೆ. ಜೀವನ ಪಾಠ ಕಲಿಸುತ್ತದೆ. ನಮ್ಮ ಪರಿಸರವನ್ನು ಶುಚಿಯಾಗಿಡುವಂತೆ ಮಾಡುತ್ತದೆ. ಸಮಾಜವನ್ನು ಬಹಳ ಹತ್ತಿರದಿಂದ ನೋಡಿ ತಿಳಿಯುವ ಅವಕಾಶ ಕ್ಯಾಂಪ್ ಅಲ್ಲಿ ಭಾಗವಹಿಸಿ ಗುಂಪಾಗಿ ಇದ್ದು ಎಲ್ಲವನ್ನು ತಿಳಿಯಬಹುದು ಎಂದು ಅವರು ಹೇಳಿದರು.
ಐಕ್ಯೂಎಸಿ ಸಂಯೋಜಕಿ ಕೆ.ಎಸ್. ಸುಕೃತಾ, ಎನ್ಎಸ್ಎಸ್ ಘಟಕದ ಸಂಚಾಲಕಿ ಅನಿತಾ ಪಿ. ಜಯರಾಮ್, ಎನ್ಎಸ್ಎಸ್ ಸಮಿತಿ ಸದಸ್ಯರಾದ ಡಾ.ಕೆ.ಎನ್. ಅರುಣ್ ಕುಮಾರ್, ಸೈಯದ್ ಸಾದತ್, ಎಂ. ಪ್ರತಿಮಾ, ವಾಣಿ, ಎಚ್.ಆರ್. ಶ್ರುತಿ ಇದ್ದರು.