ಹಲವಾರು ಗ್ರಾಮೀಣ ಕ್ರೀಡೆಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಅವಶ್ಯಕತೆ ಇದೆ. ಇಂತಹ ಹಲವಾರು ಕ್ರೀಡೆಗಳನ್ನು ಸಮಿತಿಯವರು ಆಯೋಜಿಸಬೇಕು.
ಸವಣೂರು: ಇಂದಿನ ಯುವಕರು ಕೃಷಿ ಚಟುವಟಿಯಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದು ವರ್ತಕ ಮಹಾಂತೇಶ ಮೆಣಸಿನಕಾಯಿ ಹೇಳಿದರು.
ಹುರಳೀಕುಪ್ಪಿ ರಸ್ತೆಗೆ ಹೊಂದಿಕೊಂಡಿರುವ ಆಶೋಕ ದೇಸಾಯಿ ಹಾಗೂ ರಾಜು ಗರಗದ ಕುಟುಂಬಸ್ಥರ ಜಮೀನಿನಲ್ಲಿ ಶ್ರೀ ಮೂಕ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಗೆಳೆಯರ ಬಳಗದ ವತಿಯಿಂದ ಇತ್ತೀಚೆಗೆ ರಾಜ್ಯ ಮಟ್ಟದ ಗಾಡಾ ಓಡಿಸುವ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಹಲವಾರು ಗ್ರಾಮೀಣ ಕ್ರೀಡೆಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಅವಶ್ಯಕತೆ ಇದೆ. ಇಂತಹ ಹಲವಾರು ಕ್ರೀಡೆಗಳನ್ನು ಸಮಿತಿಯವರು ಆಯೋಜಿಸಬೇಕು ಎಂದು ಕರೆ ನೀಡಿದರು.
ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಸಂಗಮೇಶ ಯರೇಸಿಮಿ ಗಾಡಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ವರ್ಷವಿಡಿ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತ ಸಮೂಹ ತಮ್ಮ ಬವಣೆ ಮರೆತು ಕ್ರೀಡೆಯಲ್ಲಿ ಪಾಲ್ಗೊಂಡು ಸಂಭ್ರಮಿಸುವ ಸದುದ್ದೇಶದಿಂದ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿರುವ ಈ ದಿನಮಾನಗಳಲ್ಲಿ ಮುಂದಿನ ಪೀಳಿಗೆಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸುವ ಅಗತ್ಯವಿದೆ ಎಂದರು.
ಕ್ರೀಡೆಯಲ್ಲಿ ವಿವಿಧ ಜಿಲ್ಲೆಯಿಂದ ಆಗಮಿಸಿದ ಸುಮಾರು 47 ಜೋಡಿ ಎತ್ತುಗಳು ಪಾಲ್ಗೊಂಡಿದ್ದವು. ಕಟ್ಟುಮಸ್ತಾದ ಎತ್ತುಗಳು ಜನರ ಗಮನ ಸೆಳೆದವು.
ಎಲ್ಲ ಹಂತಗಳಲ್ಲಿಯೂ ಅಗ್ರಶ್ರೇಣಿ ಪಡೆದುಕೊಂಡಿದ್ದ ಬೆಳವಟ್ಟಿಯ ಶ್ರೀ ಲಕ್ಷ್ಮೀದೇವಿ ಪ್ರಸನ್ನ ಜೋಡಿ ಎತ್ತು ಪ್ರಥಮ ಸ್ಥಾನ (ಹೀರೊ ಎಚ್ಎಫ್ ಡಿಲಕ್ಸ್ ಬೈಕ್), ಮಾಲಾಪುರ, ಕರಡಿಕೊಪ್ಪದ ದುರ್ಗಾದೇವಿ ಪ್ರಸನ್ನ ಜೋಡಿ ಎತ್ತು ದ್ವಿತೀಯ ಸ್ಥಾನ (₹43 ಸಾವಿರ ನಗದು), ಬೆಳಗಾವಿಯ ಶ್ರೀ ಆಂಜನೇಯ ಪ್ರಸನ್ನ ಜೋಡಿ ಎತ್ತು ತೃತೀಯ ಸ್ಥಾನ (₹33 ಸಾವಿರ ನಗದು) ಪಡೆದವು.
ಹಿರೇಕೆರೂರು: ಪಟ್ಟಣದ ಪಾಂಡುರಂಗ ರಖುಮಾಯಿ ಮಂದಿರದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಹೋಮ- ಹವನ, ಮಹಾಜಪ ಯಜ್ಞ ಹಾಗೂ ಅಖಂಡ ಶಿವನಾಮ ಸ್ಮರಣೆ ಮಾಡಲಾಯಿತು.
ಯಲ್ಲಟ್ಟಿಯ ಆಧ್ಯಾತ್ಮಿಕ ಆಶ್ರಮದ ಲಿಂಗರಾಜ ಮಹಾರಾಜರು, ಸುರೇಶ ಮಹಾರಾಜ ಹಾಗೂ ಚೈತನ್ಯ ಮಹಾರಾಜರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.ಶಿವಾಜಿರಾವ್ ಮಧುರಕರ್, ಪಾಂಡುರಂಗ ಮಧುರಕರ್, ಪ್ರಭಾವತಿ ಮಧುರಕರ್, ರಾಮಚಂದ್ರ ಮಧುರಕರ್, ಚಂದ್ರು ಮಧುರಕರ್, ಪ್ರಶಾಂತ ಹಂಚಿನ, ಮಾರುತಿ ಮಧೂರಕರ, ಗುಡ್ಡದಯ್ಯ ಸೇರಿದಂತೆ ಭಕ್ತರು ಪಾಲ್ಗೊಂಡು ಶಿವನಾಮಸ್ಮರಣೆ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.