- ಗ್ರಾಮೀಣ ಯೋಜನೆಯಡಿ ಸ್ವಚ್ಛತಾ ಹೀ ಸೇವಾ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಧಿಕಾರಿಗಳು ತಮ್ಮ ಕಚೇರಿ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಸೂಚಿಸಿದರು.ಜಿಪಂನ ಮಿನಿ ಸಭಾಂಗಣದಲ್ಲಿ ನಡೆದ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊದಲು ಸರ್ಕಾರಿ ಕಚೇರಿ ಸ್ವಚ್ಛವಾಗಿರಬೇಕು. ಜೊತೆಗೆ ಕಚೇರಿ ಆವರಣ ಹಾಗೂ ತಮ್ಮ ವ್ಯಾಪ್ತಿಗೆ ಬರುವ ಗ್ರಾಮ ಪಂಚಾಯಿತಿ, ಶಾಲೆ, ಆಸ್ಪತ್ರೆ, ದೇವಸ್ಥಾನ. ವಸತಿ ನಿಲಯ ಇವುಗಳ ಸ್ವಚ್ಛತೆ ಮಾಡಬೇಕು. ಕಚೇರಿ ಆವರಣದಲ್ಲಿ ವ್ಯವಸ್ಥಿತವಾಗಿ ಗಿಡಗಳನ್ನು ಬೆಳೆಸುವಂತೆ ತಿಳಿಸಿದರು.ಕಚೇರಿಗಳು ಹಾಗೂ ಆಸ್ಪತ್ರೆಗಳಲ್ಲಿನ ಶೌಚಾಲಯ ಸಮರ್ಪಕವಾಗಿ ನಿರ್ವಹಿಸುವ ಜೊತೆಗೆ ಶಾಲಾ ಕಟ್ಟಡಗಳಿಗೆ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡಲು ತಿಳಿಸಿದ ಅವರು, ಶಾಲಾ ಆವರಣದಲ್ಲಿ ಬೆಳೆದಿರುವ ಗಿಡಕಂಟಿಗಳನ್ನು ತೆರವುಗೊಳಿಸಿ ಕೈತೋಟ ಬೆಳೆಸುವಂತೆ ಸೂಚಿಸಿದರಲ್ಲದೆ, ಆಸ್ಪತ್ರೆ ಹಾಗೂ ಶಾಲಾ ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಚರಂಡಿಗಳನ್ನು ಸ್ವಚ್ಛಗೊಳಿಸಿ ಜೊತೆಗೆ ಕಸದ ರಾಶಿಗಳು ಕಂಡು ಬಂದರೆ ಅವುಗಳನ್ನು ತೆರವುಗೊಳಿಸುವಂತೆ ತಿಳಿಸಿದ ಅವರು, ಶಾಲಾ ಕಾಲೇಜಿನ ಅಕ್ಕಪಕ್ಕ ಚರಂಡಿ ಮತ್ತು ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಿದರು.ಪೌರ ಕಾರ್ಮಿಕರನ್ನು ಆಗಿಂದಾಗ್ಗೆ ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ತಿಳಿಸಿದ ಅವರು ಸ್ವಚ್ಛತೆ ಸಂದರ್ಭ ದಲ್ಲಿ ಅವರಿಗೆ ಕೈಗವಸು, ಶೂಗಳನ್ನು ಕಡ್ಡಾಯವಾಗಿ ನೀಡಬೇಕು. ಅವರ ಸ್ವಚ್ಚತಾ ಕಾರ್ಯಗಳಿಗೆ ಕೃತಜ್ಞತೆ ಸಲ್ಲಿಸಬೇಕು ಅವರ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಲು ವಸತಿ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಬೇಕು. ವಿದ್ಯಾರ್ಥಿ ವೇತನ ಹಾಗೂ 60 ವರ್ಷ ಮೇಲ್ಪಟ್ಟವರಿದ್ದರೆ ಅವರಿಗೆ ಮಾಸಾಶನ ಬರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಿಕ್ಷಕರು ಕಾಲೇಜು ವಿದ್ಯಾರ್ಥಿಗಳಿಂದ ತಮ್ಮ ವ್ಯಾಪ್ತಿಯ ದೇವಸ್ಥಾನಗಳ ಸ್ವಚ್ಛತೆ ಮಾಡಿಸುವಂತೆ ತಿಳಿಸಿದ ಅವರು, ವಾಸಿಸುವ ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ನಗರ ಪ್ರದೇಶಗಳ ಸ್ವಚ್ಛತೆಗೆ ಕಾರಣಕರ್ತರಾದ ಪೌರ ಕಾರ್ಮಿಕರ ಕಾರ್ಯ ತುಂಬಾ ಶ್ಲಾಘನೀಯ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಗೌರವವಿದೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವಚ್ಛತೆಗಾಗಿ ಮೀಸಲಿಟ್ಟಿರುವ ಪೌರ ಕಾರ್ಮಿಕರನ್ನು ಪ್ರತಿಯೊಬ್ಬರೂ ಗುರುತಿಸಿ ಗೌರವಿಸಬೇಕು. ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡು ಆರೋಗ್ಯಯುತ ಜೀವನ ನಡೆಸಬೇಕು ಎಂದರು.ಸ್ವಚ್ಛತೆ ನಮ್ಮ ಮನೆಯಿಂದ ಆರಂಭವಾಗಬೇಕು. ಮನೆ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಕಸ ವಿಲೇವಾರಿ ವಾಹನಕ್ಕೆ ಹಾಕುವ ಮೂಲಕ ಸ್ವಚ್ಛ ಹಾಗೂ ಸುಂದರ ಪರಿಸರ ಕಾಪಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.ಸ್ವಚ್ಛತಾ ಹೀ ಸೇವಾ ಅಭಿಯಾನದ ಬಗ್ಗೆ ತಾಲೂಕು ಮತ್ತು ಗ್ರಾಪಂ ಮಟ್ಟದಲ್ಲಿ ಅರವಿ ಮೂಡಿಸಿ ಗುರುತಿಸಿರುವ ಸ್ಥಳದಲ್ಲಿಯೇ ಕಸವನ್ನು ಹಾಕುವುದಲ್ಲದೆ, ಸಕಾಲದಲ್ಲಿ ಅವುಗಳನ್ನು ತೆರವುಗೊಳಿಸಬೇಕು ಈ ಬಗ್ಗೆ ಅಲ್ಲಿಯ ಜನರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಗೌರವ್ಕುಮಾರ್ ಶೆಟ್ಟಿ, ಜಿಲ್ಲಾ ಯೋಜನಾ ನಿರ್ದೇಶಕ ಗೋಪಾಲ್ ಜಾದವ್ ಉಪಸ್ಥಿತರಿದ್ದರು. 21 ಕೆಸಿಕೆಎಂ 2