ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರತಿಯೊಬ್ಬರು ತಪ್ಪದೆ ವಿಮೆ ಮಾಡಿಸಬೇಕು. ಇದು ಸರ್ಕಾರದ ಮಹತ್ವದ ಯೋಜನೆಯಾಗಿದ್ದು, ಇಲ್ಲಿ ಅತಂತ್ಯ ಕಡಿಮೆ ಹಣದಿಂದ ವಿಮೆ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯಾ ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಯಾದಗಿರಿ, ತಾಲೂಕು ಪಂಚಾಯತ್ ಯಾದಗಿರಿ ವತಿಯಿಂದ ಗ್ರಾಮ ಪಂಚಾಯತ್ ಕಾರ್ಯಾಲಯ ರಾಮಸಮುದ್ರ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಪಿಎಂಜೆಜೆವೈ, ಪಿಎಂಎಸ್ ಬಿವೈ, ಎಪಿವೈ ಮತ್ತು ಪಿಎಂಜೆಡಿವೈ ಅಡಿಯಲ್ಲಿ ವಿಮೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನೀವು ಮಾಡಿಸುವ ವಿಮೆ ಮುಂದೆ ಬಹಳ ಅನುಕೂಲವಾಗಲಿದೆ. ಖಾಸಗಿ ಕಂಪನಿಗಳಲ್ಲಿ ವಿಮೆಗೆ ಹೆಚ್ಚಿಗೆ ಹಣವಿದ್ದರೆ ಈ ಸರ್ಕಾರದ ವಿವಿಧ ಯೋಜನೆಗಳಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ವಿಮೆ ಪಾಲಿಸಿ ಮಾಡಿಕೊಳ್ಳಬಹುದು. ವಾರ್ಷಿಕ 20 ರು. ಇದೆ. ಕಾರಣ ಎಲ್ಲರೂ ತಪ್ಪದೇ ಮಾಡಿಸಿ ಎಂದರು.ಇಂದು ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ, ಇದರಿಂದ ಜನರು ಜಾಗೃತರಾಗಿರಬೇಕು. ಎಲ್ಲರ ಮೊಬೈಲ್ ಗಳಿಗೆ ಓಟಿಪಿ ಕೇಳಿ ಬ್ಯಾಂಕುಗಳ ಹೆಸರಲ್ಲಿ ಮೇಸೆಜ್ ಬರುತ್ತಿವೆ. ಅಂಥವುಗಳನ್ನು ಓಪನ್ ಮಾಡಿ ಅದಕ್ಕೆ ಬೇಕಾದ ಮಾಹಿತಿ ನೀಡಿದರೆ ಬ್ಯಾಂಕಿನ ಖಾತೆಯಲ್ಲಿ ಇರುವ ಎಲ್ಲ ಹಣ ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಭೀಮರಾವ ಪಂಚಾಳ ಮಾತನಾಡಿ, ಕೂಲಿ ಕಾರ್ಮಿಕರಿಗಾಗಿ ಬ್ಯಾಂಕುಗಳಲ್ಲಿ ಸಾಕಷ್ಟು ಸಾಲದ ಸೌಲಭ್ಯವಿದೆ. ಅದನ್ನು ಪಡೆಯಬೇಕೆಂದರು. ಕಾರ್ಯಕ್ರಮದಲ್ಲಿ ರಾಮಸಮುದ್ರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆನಂದಮ್ಮ, ಮಲ್ಲಿಕಾರ್ಜುನ ಜಲ್ಲನೋರ್, ಜಿಲ್ಲಾ ಪಂಚಾಯತಿಯ ಯೋಜನೆ ನಿರ್ದೇಶಕರಾದ ಸಿ.ಬಿ ದೇವರಮನಿ, ಮುಖ್ಯ ಲೆಕ್ಕಾಧಿಕಾರಿಗಳು ವೆಂಕಟೇಶ್ ಚಟ್ನಳ್ಳಿ, ಪ್ರಾದೇಶಿಕ ವ್ಯವಸ್ಥಾಪಕರಾದ ಸಂಜಯ್ಯ ಕುಮಾರ್, ಕೆಜಿಪಿ ಪ್ರಾದೇಶಿಕ ವ್ಯವಸ್ಥಾಪಕರಾದ ಗುರುಪಾದಪ್ಪ ಕಡ್ಡಿ, ಗ್ರಾಮ ಪಂಚಾಯತ್ ಸದಸ್ಯರು, ಕೂಲಿಕಾರ್ಮಿಕರು ಇದ್ದರು.ಸಿಇಓ ಲವೀಶ್ ಒರಡಿಯಾ ಅವರು ವಿಮೆ ಅರ್ಜಿ ವಿತರಣೆ ಮಾಡಿದರು. ಭರ್ತಿ ಮಾಡಿದ ಅರ್ಜಿಗಳನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸ್ವೀಕಾರ ಮಾಡಿದರು.