ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಮರ್ಯಾದೆ ಉಳೀತಿತ್ತು: ಕೃಷಿ ಸಚಿವ ಚಲುವರಾಯಸ್ವಾಮಿ

KannadaprabhaNewsNetwork |  
Published : Dec 25, 2024, 12:46 AM IST
ಚಲುವರಾಯಸ್ವಾಮಿ | Kannada Prabha

ಸಾರಾಂಶ

ಅಶ್ಲೀಲ ಪದ ಬಳಸಿ ನಾನು ಮಾತನಾಡಿಲ್ಲ ಅಂತಿದ್ದಾರೆ. ಯಾರೋ ಇಂತಹ ಪದ ಬಳಕೆ ಮಾಡಿದರು ಎಂದಾಕ್ಷಣ ಅದನ್ನು ರೆಕಾರ್ಡ್ ಮಾಡಿಲ್ಲದಿರಬಹುದು. ಆದರೆ, ಸದನದಲ್ಲಿದ್ದ ಎಲ್ಲಾ ಸದಸ್ಯರಿಗೂ ಮಾತನಾಡಿರುವುದು ಗೊತ್ತಿದೆ. ಆ ರೀತಿ ಮಾತನಾಡಬಾರದಿತ್ತೆಂದು ಅವರ ಪಕ್ಷದವರೇ ನನ್ನೊಂದಿಗೆ ಹೇಳಿದ್ದಾರೆ. ಹಿರಿಯ ನಾಯಕರಾಗಿ ಆ ರೀತಿಯ ಪದ ಬಳಸಿರುವುದು ಮಹಾ ಅಪರಾಧ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಉಪಯೋಗಿಸಿರುವುದಕ್ಕೆ ಕ್ಷಮೆ ಕೇಳಿದ್ದರೆ ಮರ್ಯಾದೆನಾದರೂ ಉಳಿಯುತ್ತಿತ್ತು. ಇನ್ನೂ ಮಾತನಾಡುತ್ತಾ ಸಮರ್ಥನೆಗೆ ನಿಂತಿದ್ದಾರೆ. ಇಂತಹ ಪದ ಪ್ರಯೋಗಗಳು ಯಾರಿಗೂ ಗೌರವ ತರುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಶ್ಲೀಲ ಪದ ಬಳಸಿ ನಾನು ಮಾತನಾಡಿಲ್ಲ ಅಂತಿದ್ದಾರೆ. ಯಾರೋ ಇಂತಹ ಪದ ಬಳಕೆ ಮಾಡಿದರು ಎಂದಾಕ್ಷಣ ಅದನ್ನು ರೆಕಾರ್ಡ್ ಮಾಡಿಲ್ಲದಿರಬಹುದು. ಆದರೆ, ಸದನದಲ್ಲಿದ್ದ ಎಲ್ಲಾ ಸದಸ್ಯರಿಗೂ ಮಾತನಾಡಿರುವುದು ಗೊತ್ತಿದೆ. ಆ ರೀತಿ ಮಾತನಾಡಬಾರದಿತ್ತೆಂದು ಅವರ ಪಕ್ಷದವರೇ ನನ್ನೊಂದಿಗೆ ಹೇಳಿದ್ದಾರೆ. ಹಿರಿಯ ನಾಯಕರಾಗಿ ಆ ರೀತಿಯ ಪದ ಬಳಸಿರುವುದು ಮಹಾ ಅಪರಾಧ ಎಂದರು.

ಇದೊಂದು ಆಕಸ್ಮಿಕ. ಏನಾಯ್ತೋ, ಏಕಾಯ್ತೋ ಮಾತನಾಡಿದ್ದೇನೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದರೆ ಮುಗಿದೇ ಹೋಗಿರೋದು. ಮರ್ಯಾದೆ ಹೋಗೋದು ಸ್ವಲ್ಪ ಕಡಿಮೆ ಆಗುತ್ತಿತ್ತು. ಇನ್ನೂ ಅವರು ಮಾತನಾಡೋದಿಕ್ಕೆ ನಿಂತಿದ್ದಾರೆ. ಆ ರೀತಿ ಚಾಲೆಂಜ್ ಮಾಡೋದಾದ್ರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲೆಸೆದರು.

ಬೆಳಗ್ಗೆ ಎದ್ದರೆ ಪ್ರತಿಭಟನೆ ಮಾಡುವುದು, ಇಲ್ಲದ ಹೇಳಿಕೆ ಕೊಡುತ್ತಾ ವಿಚಾರವನ್ನು ಬೆಳೆಸುತ್ತಿದ್ದಾರೆ. ಒಂದು ಹಂತಕ್ಕೆ ಪ್ರಕರಣಕ್ಕೆ ತಿಲಾಂಜಲಿ ಹಾಡುವ ಕೆಲಸವನ್ನು ಸಿ.ಟಿ.ರವಿಯಾಗಲೀ ಅಥವಾ ಬಿಜೆಪಿ, ಜೆಡಿಎಸ್‌ನವರು ಮಾಡುತ್ತಿಲ್ಲ. ಅವರೇ ಪ್ರಕರಣವನ್ನು ಜೀವಂತವಾಗಿಡುವ ಪ್ರಯತ್ನ ನಡೆಸಿದ್ದಾರೆ. ಸರ್ಕಾರ ಬಂದಾಗಿನಿಂದಲೂ ಇದೇ ಮಾಡುತ್ತಿದ್ದಾರೆ. ಸುಮ್ಮನೆ ರಾಜಕೀಯ ಪ್ರೇರಿತರಾಗಿ ಎಷ್ಟೇ ಮಾತನಾಡಿದ್ರೂ ಪ್ರಯೋಜನ ಇಲ್ಲ ಎಂದರು.

ಸಿ.ಟಿ.ರವಿ ಎನ್‌ಕೌಂಟರ್‌ಗೆ ಪ್ಲಾನ್ ಮಾಡಲಾಗಿತ್ತು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ಎನ್‌ಕೌಂಟರ್‌ಗೂ, ಈ ಪ್ರಕರಣಕ್ಕೂ ಏನು ಸಂಬಂಧ. ಅವರ ಬಳಿ ಅನೇಕ ಏಜೆನ್ಸಿಗಳಿವೆ. ತನಿಖೆ ಮಾಡಿಸಲಿ. ಕಾಂಗ್ರೆಸ್ ವಿರುದ್ಧ ಟೀಕೆ ಮಾಡುವುದಕ್ಕೇ ಜೆಡಿಎಸ್-ಬಿಜೆಪಿ ಇರೋದು. ಅವರು ತಪ್ಪು ಮಾಡಿಕೊಂಡಿದ್ದಾರೆ. ಅದನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಈ ರೀತಿ ಹೇಳಿಕೆಗಳನ್ನು ಕೊಟ್ಟು ವಿಷಯಾಂತರ ಮಾಡಲು ಹೊರಟಿದ್ದಾರೆ. ಕಾನೂನನ್ನು ದುರುಪಯೋಗ ಮಾಡುವ ಕೆಲಸವನ್ನು ನಾವೆಂದಿಗೂ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.

ಕಾಂಗ್ರೆಸ್ ಅಧಿವೇಶನ ನಡೆದ ನೆನಪಿಗಾಗಿ ಬೆಳಗಾವಿಯಲ್ಲಿ ಅಧಿವೇಶನ ಮಾಡುತ್ತಿದ್ದೇವೆ. ರಾಷ್ಟ್ರೀಯ ನಾಯಕರು ಪಾಲೊಳ್ಳಲಿದ್ದಾರೆ. ಅಧಿವೇಶನವನ್ನು ಯಶಸ್ವಿಯಾಗಿ ಮಾಡುತ್ತೇವೆ. ಸರ್ಕಾರದ ದುಡ್ಡಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಜೋಶಿ ಅವರಿಗೆ ಅಕೌಂಟ್ ಕೊಟ್ಟವರು ಯಾರು. ನಮ್ಮ ಪಕ್ಷದ ಹಣದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಕ್ಷ ಸಧೃಡವಾಗಿದೆ ಎಂದರು.

ಸರ್ಕಾರ ಹಾಗೂ ಪಕ್ಷದಲ್ಲಿ ಬದಲಾವಣೆ ವಿಚಾರ ನಮ್ಮ ಮುಂದೆ ಇಲ್ಲ. ಆ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸುಮ್ಮನೆ ಕೆಲವರು ಚರ್ಚೆ ಮಾಡುತ್ತಾರೆ ಅಷ್ಟೇ ಎಂದೇಳಿ ಜಾರಿಕೊಂಡರು.

ನಟ ಶಿವರಾಜ್‌ ಕುಮಾರ್‌ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದು ಗುಣಮುಖರಾಗಿ ಬರಲಿ ಎಂದು ಎಲ್ಲಾ ಕನ್ನಡಿಗರ ಪರವಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರಿಂದ ಇನ್ನೂ ಒಳ್ಳೆಯ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಸಿಗಲಿ ಎಂದು ಪ್ರಾರ್ಥಿಸಿದರು.

ಶಾಸಕ ಪಿ.ರವಿಕುಮಾರ್ ಇತರರಿದ್ದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ