ಪಟಾಕಿ ರಹಿತ ಹಬ್ಬ ಆಚರಿಸಿ,ಪರಿಸರ ರಕ್ಷಿಸಿ: ಗೀತಾ ಹುಡೇದ್

KannadaprabhaNewsNetwork | Published : Nov 10, 2023 1:06 AM

ದೀಪಾವಳಿ ಹಬ್ಬವನ್ನು ದೀಪಗಳನ್ನು ಹಚ್ಚಿ ಕತ್ತಲಿನಿಂದ ಬೆಳಕಿನ ಜ್ಞಾನದೆಡೆಗೆ ಎಲ್ಲರೂ ಹೋಗೋಣ. ಪರಿಸರ ಮತ್ತು ಮನುಷ್ಯನ ಮೇಲೆ ದುಷ್ಪರಿಣಾಮ ಬೀರುವ ಪಟಾಕಿಗಳನ್ನು ತ್ಯಜಿಸೋಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ತಿಳಿಸಿದರು.

ರೋಟರಿ, ರೋಟರಿ ಸಿಲ್ಕ್‌ಸಿಟಿಯಿಂದ ಜಾಗೃತಿ ಅಭಿಯಾನ । ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು, ಪ್ರತಿಜ್ಞಾ ವಿಧಿ ಬೋಧನೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೀಪಾವಳಿ ಹಬ್ಬವನ್ನು ದೀಪಗಳನ್ನು ಹಚ್ಚಿ ಕತ್ತಲಿನಿಂದ ಬೆಳಕಿನ ಜ್ಞಾನದೆಡೆಗೆ ಎಲ್ಲರೂ ಹೋಗೋಣ. ಪರಿಸರ ಮತ್ತು ಮನುಷ್ಯನ ಮೇಲೆ ದುಷ್ಪರಿಣಾಮ ಬೀರುವ ಪಟಾಕಿಗಳನ್ನು ತ್ಯಜಿಸೋಣ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನ ಮುಂಭಾಗದ ರೋಟರಿ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಮತ್ತು ರೋಟರಿ ಜಿಲ್ಲೆ -೩೧೮೧ರ ವಲಯ -೯ರ ರೋಟರಿ ಸಂಸ್ಥೆಗಳು, ಮೈಸೂರು ಸೈನ್ಸ್ ಫೌಂಡೇಷನ್ ಸಹಯೋಗದಲ್ಲಿ ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದಾಗುವ ದುಷ್ಪರಿಣಾಮಗಳು ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೀಪಾವಳಿ ಹಾಗೂ ಇನ್ಯಾವುದೇ ಹಬ್ಬಗಳ ಆಚರಣೆ ನೆಪದಲ್ಲಿ ಪರಿಸರವನ್ನು ಹಾಳುವುದು ಮಾಡುವುದು ಸರಿಯಲ್ಲ.ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಬೆಳಕು ಹಾಗೂ ಹಸಿರು ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ದೀಪಾವಳಿ ಹಬ್ಬದಲ್ಲಿ ಸಿಡಿಸುವ ಪಟಾಕಿಯಿಂದ ಬಹಳಷ್ಟು ದುಷ್ಪರಿಣಾಮಗಳಾಗುತ್ತಿವೆ. ಪರಿಸರದ ಕಾಡುಪ್ರಾಣಿಗಳು, ಸಾಕು ಪ್ರಾಣಿಗಳು ಹಾಗೂ ಪಟಾಕಿ ಹೊಡೆಯುವಾಗ ನಡೆಯುವ ದುರಂತಗಳು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಶಬ್ದದಿಂದ ತೊಂದರೆಯಾಗುತ್ತದೆ. ಅಲ್ಲದೇ, ಪಟಾಕಿ ಸಿಡಿತದಿಂದ ವಾಯುವ್ಯ ಮಾಲಿನ್ಯವಾಗುತ್ತದೆ. ಉಸಿರಾಟಕ್ಕೆ ತೊಂದರೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತದೆ. ಇದನ್ನು ತಪ್ಪಿಸಲು ಎಲ್ಲರೂ ಪಟಾಕಿ ಬದಲಾಗಿ ದೀಪಗಳನ್ನು ಹಚ್ಚಿ ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡೋಣ ಎಂದರು.

ನಗರದ ಜೆಎಸ್‌ಎಸ್ ಬಾಲಕರು, ಬಾಲಕಿಯರು , ಪಬ್ಲಿಕ್ ಹಾಗೂ ಪದವಿ ಪೂರ್ವ ಕಾಲೇಜು, ಕೇಂದ್ರೀಯ ವಿದ್ಯಾಲಯ, ಯೂನಿರ್ವಸ್ ಶಾಲೆ, ವೆಂಕಟಯ್ಯನ ಛತ್ರ ಸರ್ಕಾರಿ ಪ್ರೌಢಶಾಲೆ, ಸೆಂಟ್ ಫ್ರಾನ್ಸಿಸ್ ಶಾಲೆ ಸೇರಿದಂತೆ ಪ್ರಚಾರ ವಾಹನ ತೆರಳಿ ಜಾಗೃತಿ ಮೂಡಿಸುವ ಜೊತೆಗೆ ಸಿಲ್ಕ್‌ಸಿಟಿ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗಿರೀಶ್ ವಿದ್ಯಾರ್ಥಿಗಳಿಗೆ ಪಟಾಕಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಪ್ರತಿಜ್ಞಾವಿಧಿಯನ್ನು ಭೋದಿಸಿದರು.

ಪರಿಸರ ಅಧಿಕಾರಿ ಉಮಾಶಂಕರ್ ಮಾತನಾಡಿ, ನಮ್ಮ ಜಿಲ್ಲೆಯು ಉತ್ತಮ ಪರಿಸರ ಸಂರಕ್ಷಣೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಜಿಲ್ಲೆ ಅರಣ್ಯ ಪ್ರದೇಶವನ್ನು ಹೆಚ್ಚು ಹೊಂದಿರುವುದು . ಈ ಪ್ರದೇಶವನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಲು ನಿಮ್ಮಲ್ಲರ ಸಹಕಾರ ಅತಿ ಮುಖ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ವಲಯದ ಸಹಾಯಕ ಗವರ್ನರ್ ಪ್ರಕಾಶ್, ವಲಯ ಪ್ರತಿನಿಧಿ ಚೈತನ್ಯ ಜಿ. ಹೆಗಡೆ, ರೋಟರಿ ಅಧ್ಯಕ್ಷ ಚಂದ್ರ ಪ್ರಭ ಜೈನ್, ಕಾರ್ಯದರ್ಶಿ ದೀನಾ, ಸಿಲ್ಕ್‌ಸಿಟಿ ಅಧ್ಯಕ್ಷ ವೈ. ಅಕ್ಷಯ್, ಕಾರ್ಯದರ್ಶಿ ಮಾಣಿಕ್ಯ ಚಂದ್ ಜಿ. ರವಿ, ಮಾಜಿ ಅಧ್ಯಕ್ಷ ಜಿ.ಆರ್. ಆಶ್ವಥ್ ನಾರಾಯಣ್, ಆರ್.ಎಂ.ಸ್ವಾಮಿ, ಸುರೇಶ್‌ಕುಮಾರ್, ದೊಡ್ಡರಾಯಪೇಟೆ ಗಿರೀಶ್, ಡಿ.ಪಿ. ವಿಶ್ವಾಸ್, ಎಚ್.ಎಂ. ಆಜಯ್, ಸುಭಾಸ್, ಶ್ರೀನಿವಾಸನ್,ಎಸ್‌ಆರ್‌ಎಸ್ ಶ್ರೀನಿವಾಸ್, ಸದಸ್ಯರಾದ ಕಾಗಲವಾಡಿ ಚಂದ್ರು, ಎಲ್. ನಾಗರಾಜು, ಶ್ರೀಧರ್,ರಾಜು ವರ್ಗೀಸ್, ಎಚ್.ಎಂ. ಗುರುಸ್ವಾಮಿ, ಬಿ. ನಾಗರಾಜು ಮೊದಲಾದವರಿದ್ದರು.

------------------------

9ಸಿಎಚ್‌ಎನ್‌14: ಚಾಮರಾಜನಗರ ಜಿಲ್ಲಾಡಳಿತ ಭವನ ಮುಂಭಾಗದಿಂದ ರೋಟರಿ ಸಂಸ್ಥೆ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರೋಟರಿ ಜಿಲ್ಲೆ -೩೧೮೧ರ ವಲಯ -೯ರ ರೋಟರಿ ಸಂಸ್ಥೆಗಳು, ಮೈಸೂರು ಸೈನ್ಸ್ ಫೌಂಡೇಷನ್ ಸಹಯೋಗದಲ್ಲಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ್ ಚಾಲನೆ ನೀಡಿದರು.