ಸಮಾನತೆಯ ಹರಿಕಾರ ಬಸವಣ್ಣನ ಸ್ಮರಣೆ: ಬೆಂಗಳೂರಿನ ವಿವಿಧೆಡೆ ಬಸವ ಜಯಂತಿ ಆಚರಣೆ

KannadaprabhaNewsNetwork |  
Published : Apr 21, 2026, 04:00 AM IST
ಹೆಡ್ ಕಾನ್ಸ್‌ಟೇಬಲ್ ಮೌಲಾಲಿ ಕುಟುಂಬದಿಂದ ಬಸವ ಜಯಂತಿ ಆಚರಣೆ. | Kannada Prabha

ಸಾರಾಂಶ

ನಗರದ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಂಭ್ರಮ, ಸಡಗರದೊಂದಿಗೆ ಸೋಮವಾರ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ವಿವಿಧೆಡೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಂಭ್ರಮ, ಸಡಗರದೊಂದಿಗೆ ಸೋಮವಾರ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿ ಆಚರಿಸಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಯನಗರ ಘಟಕ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ, ಜಾತಿ ಧರ್ಮ, ಅಸೂಯೆ, ದ್ವೇಷದಿಂದ ಪ್ರಪಂಚದಲ್ಲಿ ಯುದ್ಧ ನಡೆಯುತ್ತಿದ್ದು, ಮನುಷ್ಯರು ಭಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ನಮಗೆ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಬೇಕಾಗಿದೆ ಎಂದರು.

ಬಸವಣ್ಣ, ಅಕ್ಕಮಹಾದೇವಿ, ಶಿವಕುಮಾರ ಸ್ವಾಮಿ ಅವರು ಜಾತಿ, ಧರ್ಮ, ಅಸೂಯೆ ಬಿಟ್ಟು ಮಾನವರಾಗಿ ಬದುಕಬೇಕೆಂದು ನೀಡಿದ ಸಂದೇಶಗಳನ್ನು ವಿಶ್ವವೂ ಪಾಲಿಸಿದಾಗ ಮಾತ್ರ ಮಾನವ ಜನ್ಮಸಾರ್ಥಕ ಎಂದು ಸ್ವಾಮೀಜಿ ತಿಳಿಸಿದರು.

ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಯಾವುದೇ ಸರ್ಕಾರ ಆಗಿದ್ದರೂ ಬಸವಣ್ಣನವರ ಭಾವಚಿತ್ರವನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವ ಮೂಲಕ ಉತ್ತಮ ಕೆಲಸ ಮಾಡಲಾಗಿದೆ ಎಂದರು.

ಬಿಬಿಎಂಪಿ ಮಾಜಿ ಮೇಯರ್‌ ಗಂಗಾಂಬಿಕೆ ಮಾತನಾಡಿ, ಹೆಣ್ಣು ಮಕ್ಕಳಿಗೂ ಸಮಾನಹಕ್ಕು, ಶಿಕ್ಷಣ ನೀಡುವಂತೆ ಹೋರಾಟ ನಡೆಸಿದ್ದರಿಂದ ಎಲ್ಲರಿಗೂ ಸಮಾನ ಹಕ್ಕು ಸಿಕ್ಕಿದೆ. ಜಾತಿ, ಧರ್ಮ ಬದಿಗೊತ್ತಿ ವಚನ ಸಾಹಿತ್ಯದ ಮೂಲಕ ಮಹಾನೀಯರ ತತ್ವ ಆದರ್ಶಗಳ ಮೂಲಕ ಸಮಸಮಾಜ ನಿರ್ಮಾಣದತ್ತ ಸಾಗಿದಾಗ ಮಹನೀಯರ ಉದ್ದೇಶಗಳು ಯಶಸ್ವಿಯಾಗುತ್ತವೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಯನಗರ ಘಟಕ ಹಮ್ಮಿಕೊಂಡಿದ್ದ ಬಸವ ಜಯಂತಿಯನ್ನು ಸಿದ್ದಗಂಗಾ ಮಠದ ಶಿವ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಸಿ.ಕೆ. ರಾಮಮೂರ್ತಿ, ಮಾಜಿ ಮೇಯರ್ ಗಂಗಾಬಿಕೆ ಇದ್ದರು.ಮಹನೀಯರ ಮೂರ್ತಿಗಳ ಮೆರವಣಿಗೆ:

ಬಸವೇಶ್ವರನಗರ ಬಸವ ಬಳಗ, ಕಂಬಿ ಸಿದ್ದರಾಮಣ್ಣ ವಿದ್ಯಾರ್ಥಿ ನಿಲಯದಲ್ಲಿ ಬಸವೇಶ್ವರ ಜಯಂತಿ ಮತ್ತು ಶಿವಕುಮಾರ ಸ್ವಾಮೀಜಿ ಜಯಂತಿ ಆಚರಿಸಲಾಯಿತು.

ಕಂಬಿ ಸಿದ್ದರಾಮಣ್ಣ ವಸತಿ ನಿಲಯದಿಂದ ರಾಜಾಜಿನಗರದ ಮೇಲ್ಸೇತುವೆಯಲ್ಲಿರುವ ಬಸವಣ್ಣನವರ ಪ್ರತಿಮೆವರೆಗೆ ಮಹನೀಯರ ಮೂರ್ತಿಗಳ ಮೆರವಣಿಗೆ ನಡೆಯಿತು. ವೀರಗಾಸೆ, ಕಂಸಾಳೆ ಮತ್ತು ವಿವಿಧ ಕಲಾತಂಡಗಳು ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಸುರೇಶ್‌ಕುಮಾರ್, ಕೆ. ಗೋಪಾಲಯ್ಯ ಮತ್ತಿತರರು ಭಾಗವಹಿಸಿದ್ದರು.

ರಾಜಾಜಿನಗರದಲ್ಲಿ ಬಸವೇಶ್ವರರ ಪ್ರತಿಮೆಗೆ ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಗೋಪಾಲಯ್ಯ ಮಾಲಾರ್ಪಣೆ ಮಾಡಿದರು.ಕೇಂದ್ರ ನಗರ ಪಾಲಿಕೆಯಲ್ಲಿ ಆಚರಣೆ:

ಕೇಂದ್ರ ನಗರ ಪಾಲಿಕೆಯಿಂದ ಬಸವ ಜಯಂತಿ ಆಚರಿಸಲಾಯಿತು. ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಆಯುಕ್ತ ರಾಜೇಂದ್ರ ಚೋಳನ್, ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಕಾಯಕ ತತ್ವವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸಲು ಕರೆ ನೀಡಿದರು.

ಮುಸ್ಲಿಂ ಕುಟುಂಬದಿಂದ ಬಸವ ಜಯಂತಿ:

ಶ್ವಾನದಳದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೌಲಾಲಿ ಅವರು ಆಡುಗೋಡಿ ಪೊಲೀಸ್ ವಸತಿಗೃಹದಲ್ಲಿನ ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಬಸವ ಜಯಂತಿ ಆಚರಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಮೌಲಾಲಿ ಬಸವ ಜಯಂತಿ ಆಚರಿಸುತ್ತಿದ್ದಾರೆ. ಸಮಾನತೆ ಸಂದೇಶ ಸಾರಿದ ಬಸವಣ್ಣ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಹೀಗಾಗಿ, ಇವರ ಜಯಂತಿ ಆಚರಣೆ ನನಗೆ ನಾಡ ಹಬ್ಬದಂತೆ ಎಂದು ಮೌಲಾಲಿ ಹೇಳಿದ್ದಾರೆ.

ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ಆಚರಣೆ:

ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಬಸವ ಜಯಂತಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ ಅವರು ಬಸವಣ್ಣನ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದರೆ, ಅದನ್ನು ಅಳವಡಿಸಕೊಳ್ಳದೇ ಬರೀ ಆಚರಣೆಗೆ ಸೀಮಿತವಾಗಿಸಿದ್ದಾರೆ ಎಂದು ವಿಷಾದಿಸಿದರು.

ಮುಸ್ಲಿಂ ಕುಟುಂಬದಿಂದ ಬಸವ ಜಯಂತಿ

ಶ್ವಾನದಳದಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೌಲಾಲಿ ಅವರು ಆಡುಗೋಡಿ ಪೊಲೀಸ್ ವಸತಿಗೃಹದಲ್ಲಿನ ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಬಸವ ಜಯಂತಿ ಆಚರಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಮೌಲಾಲಿ ಬಸವ ಜಯಂತಿ ಆಚರಿಸುತ್ತಿದ್ದಾರೆ. ಸಮಾನತೆ ಸಂದೇಶ ಸಾರಿದ ಬಸವಣ್ಣ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ. ಹೀಗಾಗಿ, ಇವರ ಜಯಂತಿ ಆಚರಣೆ ನನಗೆ ನಾಡ ಹಬ್ಬದಂತೆ ಎಂದು ಮೌಲಾಲಿ ಹೇಳಿದ್ದಾರೆ.

PREV

Recommended Stories

ಮೇಜರ್‌ ಆರ್ಟೀರಿಯಲ್‌ ರಸ್ತೆ ಮೇ ಅಂತ್ಯಕ್ಕೆ ಮುಕ್ತ?
ಕೈಗೆಟಕುವ ದರದಲ್ಲಿ ವಿದ್ಯುತ್ ಪೂರೈಕೆ : ಜಾರ್ಜ್