‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ’
ಕನ್ನಡಪ್ರಭ ವಾರ್ತೆ ತುಮಕೂರುವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತೂ ಸಾಕಷ್ಟು ನಿಗಾ ವಹಿಸಲಾಗಿದೆ ಎಂದು ವಿದ್ಯಾನಿಧಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್. ಬಿ.ಪ್ರದೀಪ್ ಕುಮಾರ್ ಹೇಳಿದರು.
ವಿದ್ಯಾನಿಧಿ ಕಾಲೇಜು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು.ತುಮಕೂರು ಸಿವಿಲ್ ಕೋರ್ಟ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಾದ ನೂರ್ ಉನ್ನಿಸಾ ಅವರು ಮಾತನಾಡಿ, ಪೋಕ್ಸೋ ಕಾಯ್ದೆಯ ಅನ್ವಯ 18 ವರ್ಷದೊಳಗಿನ ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದರೆ ಅದು ಮಕ್ಕಳ ಮೇಲಿನ ದೌರ್ಜನ್ಯವೆಂದು ಪರಿಗಣಿಸಿ, ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದರು.ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಳ್ಳುವುದು, ಮಕ್ಕಳನ್ನು ತಮ್ಮೊಂದಿಗೆ ಓಡಿ ಹೋಗುವಂತೆ ಪ್ರೇರೇಪಿಸುವುದು, ಮಾನಸಿಕವಾಗಿಯೂ, ದೈಹಿಕವಾಗಿಯೂ ಹಿಂಸೆ ಕೊಡುವುದು ಶಿಕ್ಷಾರ್ಹ ಅಪರಾಧ. ಈ ಕುರಿತ ಅರಿವು ಮಕ್ಕಳಿಗಿರಬೇಕು. ತಮ್ಮ ಮೇಲೆ ಯಾರಾದರೂ ಅನುಚಿತವಾಗಿ ನಡೆದುಕೊಂಡರೆ ಹೆತ್ತವರ ಗಮನಕ್ಕೆ ತರಬೇಕು ಎಂದರು.
ಎಲ್ಲ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಪೋಷಕರ ಸಮ್ಮುಖದಲ್ಲಿ ಮಾಡುವುದು ಒಳಿತು. ಮೊಬೈಲ್ ಯುಗದಲ್ಲಿ ಮಕ್ಕಳು ಬಹಳ ಬೇಗನೇ ಮೋಸಗಾರರ ಬಲೆಗೆ ಬೀಳುತ್ತಾರೆ. ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಿಕೊಂಡು ಅವುಗಳ ಮೂಲಕ ಬೆದರಿಸುವುದು ಇತ್ಯಾದಿಗಳನ್ನು ಮಾಡುವವರ ಬಗ್ಗೆ ಎಚ್ಚರವಿರಬೇಕು. ಒಂದು ವೇಳೆ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು 18ರ ಒಳಗಿನವರು ಆದರೆ, ಅವರನ್ನು ಕಾನೂನಿನೊಂದಿಗೆ ಸಂಘರ್ಷ ಹೊಂದಿದ ಮಗುವೆಂದು ಪರಿಗಣಿಸಲಾಗುತ್ತದೆ. ಅವರಿಗೆ ಸೂಕ್ತ ಆಪ್ತಸಲಹೆಗಳನ್ನು ಕೊಡುವ ಮೂಲಕ ಸರಿದಾರಿಗೆ ತರಲು ಶ್ರಮಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.ಕಾಲೇಜಿನ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.