ಶಬರಿಮಲೆ: 41 ದಿನಗಳ ಕಾಲ ನಡೆಯುವ ಶಬರಿಮಲೆ ಅಯ್ಯಪ್ಪ ವಾರ್ಷಿಕ ತೀರ್ಥಯಾತ್ರೆಗೆ ಶುಕ್ರವಾರ ಅಧಿಕೃತ ಚಾಲನೆ ಸಿಕ್ಕಿದೆ. ಶುಕ್ರವಾರ ಬೆಳಗ್ಗೆ 3 ಘಂಟೆಗೆ ಗಣ್ಯರ ಸಮ್ಮುಖದಲ್ಲಿ ಗರ್ಭಗುಡಿಯನ್ನು ತೆರೆಯಲಾಗಿದ್ದು, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮುಂತಾದ ರಾಜ್ಯಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದು, ಭಾರಿ ಜನಸ್ತೋಮ ಉಂಟಾಯಿತು. ನಂತರ ದೇಗುಲದ ಆವರಣದಲ್ಲಿ ಕೇರಳದ ಧಾರ್ಮಿಕ ದತ್ತಿ ಸಚಿವ ರಾಧಾಕೃಷ್ಣನ್ ಅವರು ಉಚಿತ ಭೋಜನಶಾಲೆ ಉದ್ಘಾಟಿಸಿದರು. ದೇಗುಲದ ಮೇಲ್ಶಾಂತಿಯಾಗಿ (ಮುಖ್ಯ ಅರ್ಚಕ) ಪಿ ಎನ್. ಮಹೇಶ್ ಅವರು ಅಧಿಕಾರ ವಹಿಸಿಕೊಂಡಿದ್ದು, ಇನ್ನು ಮುಂದೆ ಅವರ ನೇತೃತ್ವದಲ್ಲಿ ಸನ್ನಿಧಾನದಲ್ಲಿ ಪೂಜೆ ನಡೆಯಲಿದೆ.