ನವದೆಹಲಿ: ‘ಕಳೆದ 9 ತಿಂಗಳಿನಲ್ಲಿ ಟೀಂ ಇಂಡಿಯಾ ಏರಿಳಿತಗಳನ್ನು ಕಂಡಿದೆ. ಆದರೆ ಯಶಸ್ಸು ಪಡೆಯಲು ಎಲ್ಲರು ಒಗ್ಗಟ್ಟಿನಿಂದ ಹೋರಾಡಿದ್ದಾರೆ, ಕಳೆದ ಮೂರು ಐಸಿಸಿ ಟೂರ್ನಿಗಳಲ್ಲಿ ಆಡಿದ ತಂಡದ ಸದಸ್ಯರು ಗೌರವಕ್ಕೆ ಅರ್ಹರು’ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಈ ಬಗ್ಗೆ ವಿಡಿಯೋವೊಂದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ರೋಹಿತ್ ಐಸಿಸಿ ಟೂರ್ನಿಯ ಬಗ್ಗೆ ಮಾತನಾಡಿದ್ದಾರೆ.
‘ಮೂರು ಐಸಿಸಿ ಟೂರ್ನಿಗಳನ್ನೂ ಗೆದ್ದಿದ್ದರೆ ಅಜೇಯರಾಗಿ ಉಳಿಯುತ್ತಿ ದ್ದೆವು. ಆದರೆ ಅದನ್ನು ಸ್ವೀಕರಿಸುತ್ತೇವೆ. 24 ಪಂದ್ಯಗಳಲ್ಲಿ 23ರಲ್ಲಿ ಗೆದ್ದಿದ್ದೇವೆ. 3 ಐಸಿಸಿ ಟೂರ್ನಿಗಳಲ್ಲಿ ಆಡಿದ ಭಾರತ ತಂಡದ ಸದಸ್ಯರು ಗೌರವಕ್ಕೆ ಅರ್ಹರು,. ಹೊರಗಡೆಯಿಂದ ಇದು ಸರಳವಾಗಿ ಕಾಣುತ್ತದೆ. ಆದರೆ ತಂಡ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ನಮಗೂ ಕಠಿಣ ಸಮಯಗಳಿದ್ದವು. ಆದರೆ ಇದು ಸಂಭ್ರಮಿಸಬೇಕಾದ ಸಮಯ’ ಎಂದು ಹೇಳಿದ್ದಾರೆ.
ಪಾಕ್ ವಿರುದ್ಧ ಏಕದಿನ: ಕಿವೀಸ್ಗೆ 73 ರನ್ ಜಯ
ನೇಪಿಯರ್: ಮಾರ್ಕ್ ಚಾಪ್ಮನ್(132) ಅಮೋಘ ಶತಕ ಸಿಡಿಸಿದ್ದರ ಜೊತೆಗೆ ಡ್ಯಾರಿಲ್ ಮಿಚೆಲ್ (76)ರ ಜೊತೆ 199 ರನ್ ಜೊತೆಯಾಟದಲ್ಲಿ ಭಾಗಿಯಾದ ಪರಿಯಾಣ, ಪಾಕಿಸ್ತಾನ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್ಗೆ 344 ರನ್ ಕಲೆಹಾಕಿದ ನ್ಯೂಜಿಲೆಂಡ್ 73 ರನ್ಗಳ ಗೆಲುವು ಸಾಧಿಸಿತು. ಪಾಕಿಸ್ತಾನದಲ್ಲಿ ಜನಿಸಿ ನ್ಯೂಜಿಲೆಂಡ್ ಪರ ಆಡಿದ ಮೊದಲಿಗ ಎನಿಸಿದ ಮುಹಮ್ಮದ್ ಅಬ್ಬಾಸ್ 24 ಎಸೆತದಲ್ಲಿ 50 ರನ್ ಸಿಡಿಸಿ, ಏಕದಿನದಲ್ಲಿ ಪಾದಾರ್ಪಣಾ ಪಂದ್ಯದಲ್ಲಿ ಅತಿವೇಗದ ಅರ್ಧಶತಕದ ದಾಖಲೆ ಬರೆದರು. ಬಾಬರ್ ಆಜಂ 78 ರನ್ ಗಳಿಸಿ ಪಾಕಿಸ್ತಾನಕ್ಕೆ ನೆರವಾದರೂ, ಅವರು ಔಟಾದ ಬಳಿಕ 22 ರನ್ಗೆ 7 ವಿಕೆಟ್ ಕಳೆದುಕೊಂಡ ತಂಡ 44.1 ಓವರಲ್ಲಿ 271 ರನ್ಗೆ ಆಲೌಟ್ ಆಯಿತು. 3 ಪಂದ್ಯಗಳ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಪಡೆದಿದೆ.