ನವದೆಹಲಿ: ಭಾರತ ಕಿರಿಯರ ಹಾಕಿ ತಂಡದ ಕೋಚ್ ಹುದ್ದೆ ಒಪ್ಪಿಕೊಳ್ಳಲು ತಮಗೆ ರಾಹುಲ್ ದ್ರಾವಿಡ್ ಸ್ಫೂರ್ತಿ ಎಂದು ಭಾರತದ ಮಾಜಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಹೇಳಿಕೊಂಡಿದ್ದಾರೆ. ಒಲಿಂಪಿಕ್ಸ್ ಬಳಿಕ ನಿವೃತ್ತಿ ಪಡೆದ ಶ್ರೀಜೇಶ್ರನ್ನು ಕಿರಿಯರ ಹಾಕಿ ತಂಡದ ಕೋಚ್ ಆಗಿ ನೇಮಿಸುವುದಾಗಿ ಹಾಕಿ ಇಂಡಿಯಾ ಘೋಷಿಸಿತ್ತು. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶ್ರೀಜೇಶ್ ತಮ್ಮ ಮುಂದಿರುವ ಗುರಿ ಬಗ್ಗೆ ವಿವರಿಸಿದ್ದಾರೆ. ‘ದ್ರಾವಿಡ್ ಭಾರತ ಹಿರಿಯರ ತಂಡದ ಕೋಚ್ ಆಗುವ ಮೊದಲು ಅಂಡರ್-19 ತಂಡದೊಂದಿಗೆ ಕೆಲಸ ಮಾಡಿದ್ದರು. ಅಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಪಳಗಿದ ಅನೇಕ ಆಟಗಾರರನ್ನು ಹಿರಿಯರ ತಂಡಕ್ಕೆ ತಂದರು. ಅದೇ ರೀತಿ ನಾನು ಸಹ ಮೊದಲು ಕಿರಿಯರ ತಂಡದಲ್ಲಿ ಕೆಲಸ ಮಾಡಿ, ಮುಂದಿನ ಪೀಳಿಗೆಯನ್ನು ಸಿದ್ಧಗೊಳಿಸಲು ಇಚ್ಛಿಸುತ್ತೇನೆ’ ಎಂದಿದ್ದಾರೆ.