ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಹೋಬಳಿ ವ್ಯಾಪ್ತಿಯ ಹಲವೆಡೆ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜಾ, ಕೈಂಕಾರ್ಯಗಳು ಶ್ರದ್ಧಾ ಭಕ್ತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಶುಕ್ರವಾರ ರಾತ್ರಿ ನಡೆದವು.ಕೊಡಗರಹಳ್ಳಿಯ ಬೈತೂರಪ್ಪ ಪೊವ್ಚದಿ ಬಸವೇಶ್ವರ ದೇವಾಲಯದಲ್ಲಿ ಶ್ರೀ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ನಡೆಸಲಾದ ಶಿವರಾತ್ರಿ ಹಬ್ಬದ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಎಲ್ಲ ಧರ್ಮಿಯರು ಭಾಗವಹಿಸಿ ಸಾಮರಸ್ಯ ಮೆರೆದು ಸಹೋದರತೆಯನ್ನು ಸಾರಿದರು.
ಕೊಡಗರಹಳ್ಳಿ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಸಂಜೆ 6 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೂ ಸುದೀರ್ಘವಾದ ಭಜನಾ ಕಾರ್ಯಕ್ರಮಗಳು ನಡೆದವು. ನಂತರ ಬೈತೂರಪ್ಪ, ಪೊವ್ಚದಿ ದೇವರಿಗೆ ವಿಶೇಷ ಆರಾಧನೆ ಪೂಜೆ, ಅಲಂಕಾರ ಪೂಜೆ, ನೈವೇದ್ಯ ಪೂಜೆಗಳು ನಡೆದವು. ಇದಾದ ನಂತರ ದೇವರಿಗೆ ವಿಶೇಷ ಪೂಜೆ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿತು. ನಂತರ ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ನಂತರ ನಡೆದ ಸ್ಥಳೀಯ ಮಕ್ಕಳ, ಭಜನಾ ಮಂಡಳಿಯ ಪುರುಷರ, ಮಹಿಳೆಯರ ನೃತ್ಯರೂಪಕ, ನೆರೆದಿದ್ದವರ ಮನಸೂರೆಗೊಂಡಿತು. ಗೀತ ಗಾಯನಗಳು ಸಾರ್ವಜನಿಕರನ್ನು ಮನಸೂರೆಗೊಳಿಸಿತು.
ಗಣಪತಿಯ ಕಥಾ ಸಾರಂಶವನ್ನು ನೃತ್ಯದ ಮೂಲಕ ಪುಟಾಣಿ ಮಗು ನೆರವೇರಿಸಿದ್ದು ಜನ ಚಪ್ಪಾಳೆ ಗಿಟ್ಟಿಸಿತು. ಕೊನೆಯಲ್ಲಿ ಸ್ಥಳೀಯ ಭಜನಾ ಮಂಡಳಿಯ ಸದಸ್ಯರು ಮಾಡಿದ ‘ಧರ್ಮ ದೈವ ಶ್ರೀ ಭದ್ತಕಾಳಿ’ ನಾಟಕ ಮನಸೂರೆಗೊಂಡಿತು.ಸಮಿತಿಯ ವತಿಯಿಂದ ನಾಟಕದ ನಿರ್ದೇಶನವನ್ನು ಮಾಡಿದ ವಿಶಾಲ್ ಸುವರ್ಣ ಮತ್ತು ಅದಕ್ಕೆ ಹಿನ್ನಲೆ ಸ್ವರ ಸಂಯೋಜನೆ ಮಾಡಿದ ತನುಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೆದಕಲ್ ಗ್ರಾಮದ ಏಳನೇ ಮೈಲು ಮಹಾದೇವ ಈಶ್ವರ ದೇವಾಲಯಲ್ಲಿ ಶುಕ್ರವಾರ ಸಂಜೆಯಿಂದ ಮಹಾಸಂಕಲ್ಪ, ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ, ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ ನಡೆಯಿತು.ನಂತರ ಮಹಾದೇವ ಈಶ್ವರ ದೇವರಿಗೆ ದೇವಾಲಯದ ಪ್ರಧಾನ ಅರ್ಚಕ ಅವಿನಾಶ್ ಆರಾಧ್ಯ ಅವರ ನೇತೃತ್ವದಲ್ಲಿ ರುದ್ರಾಭಿಷೇಕ ನಡೆದ ನಂತರ ವಿವಿಧ ಹೂವುಗಳಿಂದ ಅಲಂಕಾರ ಪೂಜೆ ನಡೆಯಿತು. ರಾತ್ರಿ ಬಿಲ್ವರ್ಚನೆ, ಕೊನೆಯಲ್ಲಿ ದೇವಾಲಯದಲ್ಲಿ ಭಕ್ತರ ಹರಕೆಯ ಭಾಗವಾಗಿ ದೀಪರಾಧನೆ ನಡೆಯಿತು.
ಶಕ್ತಿಯ ಪ್ರತೀಕವಾದ ಮಹಾದೇವ ಈಶ್ವರನಿಗೆ ಸುತ್ತಮುತ್ತಲಿನ ಮತ್ತು ದೂರದೂರುಗಳಿಂದ ಆಗಮಿಸಿದ್ದ ನೂರಾರು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಮಾಡಿಕೊಂಡರು.ತಡರಾತ್ರಿ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಕಂಬಿಬಾಣೆ ಮ್ಯಾಗಡೂರ್ ವಿಶ್ವನಾಥ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ 7 ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ್ದವು. ಮಧ್ಯಾಹ್ನ ವಿಶೇಷ ಪೂಜಾ ಕಾರ್ಯಗಳು ನಡೆದು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದ್ದವು.ಮಹಾಶಿವರಾತ್ರಿಯ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಮನಿಷ್ ಪೂಜಾರಿ ತಂಡದವರಿಂದ ವಿಶೇಷ ಪೂಜಾ ಕೈಕರ್ಯಗಳು ನೆರವೇರಿದ್ದವು.
ಸಂಜೆ ದೇವಾಲಯದ ಭವ್ಯ ವೇದಿಕೆಯಲ್ಲಿ ದೇವಾಲಯ ಸಮಿತಿ ವತಿಯಿಂದ ಆಯೋಜಿತಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಭಕ್ತಾದಿಗಳ ಮನತಣ್ಣಿಸಿದ್ದವು.