ಸಾರಾಂಶ
ಕೆ.ಆರ್.ಪೇಟೆ : ಜಮೀನಿನಲ್ಲಿ ಗಾಂಜಾ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, 50 ಸಾವಿರ ರು. ಮೌಲ್ಯದ 17 ಕೆಜಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಕಾಶಿ ಮುರುಕನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಬೋರಲಿಂಗೇಗೌಡ ಬಂಧಿತರು. ಬೋರಲಿಂಗೇಗೌಡ ತನ್ನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಮೇರೆಗೆ ತಾಲೂಕು ಕಂದಾಯ ಅಧಿಕಾರಿಗಳು ಜೊತೆಗೂಡಿ ನಮ್ಮ ತಂಡ ದಾಳಿಗೆ 17 ಕೆ.ಜಿ. ತೂಕದ 50 ಸಾವಿರ ರು. ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿ ಕೆ.ಆರ್.ಪೇಟೆ ಅಬಕಾರಿ ಇನ್ಸ್ ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಬೋರಲಿಂಗೇಗೌಡರನ್ನು ಬಂಧಿಸಿದ್ದೇವೆ ಎಂದು ಮಂಡ್ಯ ಅಬಕಾರಿ ಉಪ ಆಯುಕ್ತ ಕಚೇರಿ ಉಪನಿರೀಕ್ಷಕ ನಾಗಭೂಷಣ್ ತಿಳಿಸಿದರು.
ಈ ವೇಳೆ ಬೂಕನಕೆರೆ ಹೋಬಳಿ ರಾಜಶ್ವ ನಿರಕ್ಷಕಿ ಚಂದ್ರಕಲಾ, ಅಬಕಾರಿ ಹೆಡ್ ಕಾನ್ಸ್ ಟೇಬಲ್ ಅನಿಲ್ ಕುಮಾರ್, ದಿನೇಶ್, ಎಂ.ಎಸ್., ಪೇದೆಗಳಾದ ಗಂಗಾಧರ್ ಸಿ.ಯು, ಚಂದ್ರಶೇಖರ, ನಾಗಪ್ಪ, ಸಂತೋಷ್ ಕುಮಾರ್, ಜಮೀರ್ ಸೇರಿದಂತೆ ಇತರರಿದ್ದರು.