ಸಾರಾಂಶ
ಐತಿಹಾಸಿಕ ಕೆರೆತೊಣ್ಣೂರಿನ ಕೆರೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಕಾರಿನ ಗ್ಲಾಸ್ನ್ನು ದುಷ್ಕರ್ಮಿಗಳು ಹೊಡೆದು ಪುಡಿಪುಡಿ ಮಾಡಿರುವ ಘಟನೆ ನಡೆದಿದೆ.
ಪಾಂಡವಪುರ : ಐತಿಹಾಸಿಕ ಕೆರೆತೊಣ್ಣೂರಿನ ಕೆರೆ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರ ಕಾರಿನ ಗ್ಲಾಸ್ನ್ನು ದುಷ್ಕರ್ಮಿಗಳು ಹೊಡೆದು ಪುಡಿಪುಡಿ ಮಾಡಿರುವ ಘಟನೆ ನಡೆದಿದೆ.
ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ದುಷ್ಕರ್ಮಿಗಳು, ಕಿಡಿಗೇಡಿಗಳ ಹಾವಳಿ ಹೆಚ್ಚಾಗುತ್ತಿದೆ. ಕೆರೆಯ ವೀಕ್ಷಣೆ ಮಾಡಲು ದೂರದ ಊರುಗಳಿಂದ ಬರುವ ಪ್ರವಾಸಿಗರು, ಪ್ರೇಮಿಗಳು, ಯುವ ಜೋಡಿಗಳಿಗೆ ಬೆದರಿಕೆ ಹಾಕುವುದು, ಅವರ ಕಾರುಗಳ ಗ್ಲಾಸ್ಗಳನ್ನು ಹೊಡೆದು ಹಾಕುವಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ರಕ್ಷಣೆ ಇಲ್ಲದಂತಾಗಿದೆ.
ಅದೇ ರೀತಿ ಬುಧವಾರ ಪಟ್ಟಣದ ನಿವಾಸಿ ಬಿ.ಎಸ್.ಜಯರಾಮು ಎಂಬುವವರು ಸ್ನೇಹಿತರೊಂದಿಗೆ ತೊಣ್ಣೂರು ಕೆರೆಯ ಹಿಂಭಾಗ ಇರುವಂತಹ ಪ್ರದೇಶವನ್ನು ವೀಕ್ಷಣೆ ಮಾಡಲೆಂದು ಕಾರನ್ನು ನಿಲ್ಲಿಸಿ ಹೋಗಿ ಬರುವಷ್ಟರಲ್ಲಿ ದುಷ್ಕರ್ಮಿಗಳು ಕಾರಿನ ಹಿಂಬದಿಯ ಗ್ಲಾಸ್ ಹೊಡೆದು ಹಾಕಿ ಪರಾರಿಯಾಗಿದ್ದಾರೆ.
ಬಂದು ನೋಡಿದಾಗ ಪ್ರವಾಸಿಗರಿಗೆ ಆತಂಕ ಹೆಚ್ಚಾಗಿದೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಗಸ್ತು ಇಲ್ಲ:
ತೊಣ್ಣೂರುಕೆರೆ ಪ್ರಸಿದ್ಧ ಪ್ರವಾಸಿ ತಾಣ. ಕೆರೆಯ ಸೌಂದರ್ಯ ವೀಕ್ಷಣೆ ಮಾಡಲು ಜಿಲ್ಲೆ, ಹೊರ ಜಿಲ್ಲೆ ಸೇರಿದಂತೆ ನಾನಾ ಭಾಗಗಳಿಂದ ನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಜತೆಗೆ ಕೆರೆಯ ಹಿನ್ನೀರಿನ ಪ್ರದೇಶದಲ್ಲಿ ಬೀಚ್ ಮಾದರಿ ಮರುಳು ಶೇಖರಣೆ ಆಗಿರುವುದರಿಂದ ಕುಟುಂಬ ಸಮೇತ ಬರುವಂತಹ ಪ್ರವಾಸಿಗರ ಹೆಚ್ಚಾಗಿ ಈಜಾಡಲು ಅಲ್ಲಿಗೆ ಹೋಗುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ.
ಪ್ರವಾಸಿಗೆ ಬೆದರಿಸುವುದು, ಕಾರುಗಳ ಗ್ಲಾಸ್ಗಳನ್ನು ಹೊಡೆದು ಹಾಕಿ ದಾಂದಲೆ ನಡೆಸುವ ಪುಂಡರು, ದುಷ್ಕರ್ಮಿಗಳ ಗುಂಪು ಹೆಚ್ಚಾಗಿದೆ. ಇದಕ್ಕೆ ಕಠಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಲ್ಲಿ ನಡೆಯುವ ಘಟನೆಗಳ ಬಗ್ಗೆ ಪೊಲೀಸರಿಗೆ ಪ್ರವಾಸಿಗರು, ಸ್ಥಳೀಯರು ಮಾಹಿತಿ ನೀಡಿದರು ಸಹ ಪೊಲೀಸರು ಯಾವುದೇ ಕ್ರಮವಹಿಸುತ್ತಿಲ್ಲ.
ಜತೆಗೆ ಸ್ಥಳೀಯ ಪೊಲೀಸರು ಇಲ್ಲಿಗೆ ಗಸ್ತು ಬರುವುದನ್ನೇ ನಿಲ್ಲಿಸಿರುವುದರಿಂದಲೇ ಇಲ್ಲಿನ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿದೆ ಎಂದು ಸ್ಥಳೀಯರು, ಪ್ರವಾಸಿಗರು ಆರೋಪಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎನ್ನುವುದು ಒತ್ತಾಯಿಸಿದ್ದಾರೆ..