ಜುಲೈ 2 ಗೋಲ್ಡನ್‌ಸ್ಟಾರ್ ಗಣೇಶ್‌ ಜನ್ಮದಿನ. ಆ ಖುಷಿಯಲ್ಲಿ ಅವರ ನಟನೆಯ ಎರಡೆರಡು ಸಿನಿಮಾಗಳ ಬಿಡುಗಡೆ ದಿನಾಂಕ ರಿವೀಲ್‌ ಆಗಿದೆ. ಧನಂಜಯ ಬಿ. ನಿರ್ದೇಶನದ ಪಿನಾಕಾ ಸಿನಿಮಾ ಅಕ್ಟೋಬರ್‌ 2ರಂದು ತೆರೆಗೆ ಬಂದರೆ, ಅಕ್ಟೋಬರ್‌ 16ರಂದು ಶ್ರೀನಿವಾಸ್‌ ರಾಜು ನಿರ್ದೇಶನದ ‘ಬೃಂದಾವಿಹಾರಿ’ ರಿಲೀಸ್‌ ಆಗಲಿದೆ. ಈ ಎರಡೂ ಸಿನಿಮಾಗಳ ನಡುವೆ ಕೇವಲ 14 ದಿನಗಳ ಅಂತರವಷ್ಟೇ ಇದೆ.

ಸ್ಟಾರ್‌ ನಟನೊಬ್ಬನ ಸಿನಿಮಾ ಇಷ್ಟು ಕಡಿಮೆ ಅಂತರದಲ್ಲಿ ಬಿಡುಗಡೆ ಆಗುತ್ತಿರುವುದು ಬಹಳ ಅಪರೂಪ ಎನ್ನಲಾಗಿದೆ. ಆದರೆ ಎರಡು ದೊಡ್ಡ ಸಿನಿಮಾಗಳ ನಡುವೆ ಒಂದು ತಿಂಗಳಾದರೂ ಅಂತರ ಇರಬೇಕಿತ್ತು ಎಂಬ ಮಾತೂ ಕೇಳಿಬರುತ್ತಿದೆ.

‘ಪಿನಾಕ’ ಚಿತ್ರ ಸಸ್ಪೆನ್ಸ್‌ ಥ್ರಿಲ್ಲರ್‌ ಆ್ಯಕ್ಷನ್‌ ಸಿನಿಮಾವಾಗಿದ್ದು ‘ಕ್ಷುದ್ರ ಮತ್ತು ರುದ್ರ ಶಕ್ತಿಗಳ ಕಾಳಗ’ ಹೈಲೈಟ್‌. ಪೀಪಲ್‌ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಳಿಕ ಗಣೇಶ್‌ ಹಾಗೂ ಶ್ರೀನಿವಾಸ್‌ರಾಜು ಕಾಂಬಿನೇಶನ್‌ನಲ್ಲಿ ಬರುತ್ತಿರುವ ‘ಬೃಂದಾವಿಹಾರಿ’ ರೊಮ್ಯಾಂಟಿಕ್‌ ಡ್ರಾಮಾ. ಸಮೃದ್ಧಿ ವಿ. ಮಂಜುನಾಥ್‌ ನಿರ್ಮಾಣವಿದೆ.


ಇನ್ನೊಂದೆಡೆ ಗಣೇಶ್‌ ತನ್ನ ಜನ್ಮದಿನವನ್ನು ತಿರುಪತಿ ತಿಮ್ಮಪ್ಪನ ಸಾನ್ನಿಧ್ಯದಲ್ಲಿ ಆಚರಿಸಿದ್ದಾರೆ.

 ಪ್ರೇಕ್ಷಕರಲ್ಲಿ ಸಿನಿಮಾ ನೋಡುವ ಕಾತರ ಕಡಿಮೆಯಾಗುತ್ತಿದೆ. ತಿಂಗಳಿಗೊಂದಾದರೂ ಪ್ರೇಕ್ಷಕರನ್ನು ಸೆಳೆಯುವಂಥಾ ಕನ್ನಡ ಸಿನಿಮಾ ಬಂದರೆ ಇಂಡಸ್ಟ್ರಿ ಬೆಳೆಯುತ್ತದೆ. ಈಗಾಗಲೇ ಒಪ್ಪಿಕೊಂಡ ಸಿನಿಮಾ ಬಿಡುಗಡೆ ಬಳಿಕ ಹೊಸ ಸಿನಿಮಾ ಕೆಲಸ ಶುರುಮಾಡುತ್ತೇನೆ.

- ಗೋಲ್ಡನ್‌ಸ್ಟಾರ್ ಗಣೇಶ್‌