ಜಮ್ಮು: ಕಳೆದ ವರ್ಷ ನಡೆದ ಪಹಲ್ಗಾಂ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮುವಿನ ವಿಶೇಷ ಎನ್‌ಐಎ ನ್ಯಾಯಾಲಯವು ಉಗ್ರ ಸಂಘಟನೆ ಲಷ್ಕರ್‌ ಮುಖ್ಯಸ್ಥ ಹಫೀಜ್‌ ಸಯೀದ್‌ಗೆ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಹಫೀಜ್‌ ವಿರುದ್ಧ ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆಸಿತ್ತು. ಇದರ ಬೆನ್ನಲ್ಲೇ ನ್ಯಾಯಾಧೀಶರು ವಾರಂಟ್‌ ಜಾರಿ ಮಾಡಿದ್ದಾರೆ.

‘ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಭಯೋತ್ಪಾದಕ ಸಯೀದ್‌, ಪಹಲ್ಗಾಮ್‌ ದಾಳಿಯ ಆರೋಪಿ. ಬಂಧನದಿಂದ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿದ್ದಾನೆ’ ಎಂದು ಎನ್‌ಐಎ ನ್ಯಾಯಾಲಯಕ್ಕೆ ತಿಳಿಸಿತ್ತು. ಈ ವಿಷಯದಲ್ಲಿ ಮುಂದಿನ ಕ್ರಮಗಳನ್ನು ಆರಂಭಿಸಲು ಮತ್ತು ಯಾವುದೇ ಕ್ರಮ ಕೈಗೊಳ್ಳಲು ಜಾಮೀನು ರಹಿತ ವಾರಂಟ್‌ ಹೊರಡಿಸುವಂತೆ ಸಂಸ್ಥೆ ಕೋರಿತ್ತು. ಹಾಗಾಗಿ ನ್ಯಾಯಾಧೀಶರು ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿದ್ದಾರೆ.

==

ಪಿಒಕೆ ಪ್ರತಿಭಟನಾಕಾರರ

ಮೇಲೆ ಪಾಕಿಸ್ತಾನ ಸೇನೆ


ಗುಂಡು: 6 ನಾಗರಿಕರು ಬಲಿ

ನವದೆಹಲಿ: ಪಾಕಿಸ್ತಾನ ಸರ್ಕಾರದ ದೌರ್ಜನ್ಯವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಪಿಒಕೆ ನಿವಾಸಿಗಳ ಮೇಲೆ ಪಾಕ್‌ ಸರ್ಕಾರ ಗುಂಡಿನ ದಾಳಿ ನಡೆಸಿದ್ದು, 6 ಜನ ಮೃತಪಟ್ಟ ಘಟನೆ ರಾವಲ್ಕೋಟ್‌ನಲ್ಲಿ ನಡೆದಿದೆ.ಇದನ್ನು ಭಾರತವು, ‘ಇಸ್ಲಾಮಾಬಾದ್‌ನ ಬಲವಂತದ ಆಕ್ರಮಣಕ್ಕೆ ಒಳಪಟ್ಟಿರುವ ಪ್ರದೇಶಗಳಲ್ಲಿ ದಶಕಗಳಿಂದ ನಡೆಸಲಾಗುತ್ತಿರುವ ವ್ಯವಸ್ಥಿತ ಶೋಷಣೆ ಮತ್ತು ಆಡಳಿತಾತ್ಮಕ ದಬ್ಬಾಳಿಕೆಯ ನೇರ ಪರಿಣಾಮ’ ಎಂದಿದೆ. ಜತೆಗೆ ಪಾಕಿಸ್ತಾನವನ್ನೇ ಇದಕ್ಕೆ ಹೊಣೆಗಾರನಾಗಿಸುವಂತೆ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬೇಡಿಕೆ ಇಟ್ಟಿದೆ.

ಪಾಕಿಸ್ತಾನವು ತಮ್ಮ ಪ್ರತಿ ತೋರುತ್ತಿರುವ ಮಲತಾಯಿ ಧೋರಣೆ, ದಬ್ಬಾಳಿಕೆ, ರಾಜಕೀಯ ಹಸ್ತಕ್ಷೇಪದ ವಿರುದ್ಧ ಕಳೆದೊಂದು ತಿಂಗಳಿನಿಂದ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಜೆಎಎಸಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದನ್ನು ಹತ್ತಿಕ್ಕಲು ಪಾಕ್‌ ಸೇನೆ ಬಲಪ್ರಯೋಗಿಸುತ್ತಿದ್ದು, ಸುಮಾರು 400 ಪ್ರಾಣಹಾನಿಗಳಾಗಿರುವುದಾಗಿ ವರದಿಯಾಗಿದೆ.

==

‘ಬಲೂಚಿಸ್ತಾನ್‌ ಸ್ವತಂತ್ರ’ ಎಂಬ ಪತ್ರ ವೈರಲ್‌

ಶೇ.85ರಷ್ಟು ಪಾಕ್‌ ಭೂಮಿ ಬಲೂಚಿಗಳಿಗೆ?

ರಾಷ್ಟ್ರ ಗೀತೆ, ಧ್ವಜ, ಕರೆನ್ಸಿ ಕೂಡ ಅಳವಡಿಕೆ

ಪೇಶಾವರ: ಪಾಕಿಸ್ತಾನದಿಂದ ಬೇರ್ಪಟ್ಟು ಬಲೂಚಿಸ್ತಾನ ಎಂಬ ಪ್ರತ್ಯೇಕ ರಾಷ್ಟ್ರ ರಚನೆಗಾಗಿ ಹೋರಾಟಗಳು ನಡೆಯುತ್ತಿರುವ ನಡುವೆ, ‘ಬಲೂಚಿಸ್ತಾನ್‌ ರಣರಾಜ್ಯ’ ಹೆಸರಿನಲ್ಲಿ ಪತ್ರವೊಂದು ವೈರಲ್‌ ಆಗುತ್ತಿದೆ. ಇದರಲ್ಲಿ ಪಾಕ್‌ನ ನೈಋತ್ಯ ಭಾಗವು ಸ್ವತಂತ್ರವಾಗಿದ್ದು, ಇದು ಪಾಕ್‌ನ ಶೇ.85ರಷ್ಟು ಭಾಗವನ್ನು ನಿಯಂತ್ರಿಸಲಿದೆ ಎಂದು ಹೇಳಲಾಗಿದೆ.

ಈ ಪತ್ರದಲ್ಲಿ ಬಲೂಚಿಸ್ತಾನವು ರಾಷ್ಟ್ರ ಧ್ವಜ, ಗೀತೆ, ಕರೆನ್ಸಿ, ಸ್ವತಂತ್ರ ಆಡಳಿತ ವ್ಯವಸ್ಥೆಯನ್ನೂ ಅಳವಡಿಸಿಕೊಂಡಿರುವುದಾಗಿ ತಿಳಿಸಲಾಗಿದೆ. ಇದರ ಸತ್ಯಾಸತ್ಯತೆ ತಿಳಿದಿಲ್ಲವಾದರೂ ಕೂಡಲೇ ಎಚ್ಚೆತ್ತುಕೊಂಡಿರುವ ಪಾಕ್‌ ಸರ್ಕಾರ, ತನ್ನ ಅರೆಸೇನಾ ಪಡೆ ಮತ್ತು ಕಾನೂನು ಜಾರಿ ಸಂಸ್ಥೆ ಅಧಿಕಾರಿಗಳನ್ನು ನೈಋತ್ಯ ಭಾಗದತ್ತ ರವಾನಿಸಿದೆ.