ನವದೆಹಲಿ: ಯುದ್ಧಪೀಡಿತ ಇಸ್ರೇಲ್‌ಗೆ ತೆರಳಲು ಸಜ್ಜಾಗಿರುವ ಭಾರತೀಯ ಕಾರ್ಮಿಕರ ಉತ್ಸುಕತೆಯು ಭಾರತದಲ್ಲಿ ವ್ಯಾಪಕವಾಗಿ ಹರಡಿರುವ ಗ್ರಾಮೀಣ ನಿರುದ್ಯೋಗ ಪ್ರಮಾಣ ಮತ್ತು ಅತ್ಯಲ್ಪ ವೇತನವನ್ನು ಪ್ರತಿಬಿಂಬಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಭಾರತ ಸರ್ಕಾರವು ಇಸ್ರೇಲ್‌ನಲ್ಲಿ ಕಟ್ಟಡ ಕಾರ್ಮಿಕರ ವಲಯಕ್ಕೆ 30 ಸಾವಿರ ಮಂದಿಯನ್ನು ಕಳಿಸಲು ಒಡಂಬಡಿಕೆ ಮಾಡಿಕೊಂಡಿತ್ತು. ಇದಕ್ಕೆ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದರು. 

ಆಕರ್ಷಕ ಸಂಬಂಧ ಆಫರ್‌ ಅನ್ನೂ ಇಸ್ರೇಲ್‌ ನೀಡಿತ್ತು.ಶನಿವಾರ ಈ ಬಗ್ಗೆ ಟ್ವೀಟ್‌ ಮಾಡಿರುವ ಖರ್ಗೆ, ‘2014ರದಲ್ಲಿ 220 ರು. ಇದ್ದ ಗ್ರಾಮೀಣ ಪ್ರದೇಶದ ನರೇಗಾ ದಿನಗೂಲಿಯು 2020ರಲ್ಲಿ 212ರು.ಗೆ ಇಳಿದಿದೆ. 


ಅಲ್ಲದೆ ಕೃಷಿ ವಲಯದಲ್ಲಿ ಶೇ.0.6ರಷ್ಟು ವೇತನ ಇಳಿಕೆಯಾಗಿದೆ ಮತ್ತು ಕೃಷಿಯೇತರ ವಲಯದಲ್ಲಿ ಶೇ. 1.4ರಷ್ಟು ವೇತನ ಇಳಿಕೆಯಾಗಿ ಗ್ರಾಮೀಣ ಬಡವರ ಜೀವನ ಬಿದಿಗೆ ಬಂದಿದೆ. 

ಈ ಹಿನ್ನೆಲೆಯಲ್ಲಿ ಯುದ್ಧಪೀಡಿತ ಇಸ್ರೇಲ್‌ನಲ್ಲಿ ಸಿಗುವ ಆಕರ್ಷಕ ಸಂಬಳಕ್ಕಾಗಿ ಕೆಲಸ ಮಾಡಲು ಭಾರತೀಯರು ಉತ್ಸುಕತೆ ತೋರುತ್ತಿದ್ದಾರೆ’ ಎಂದು ತಿಳಿಸಿದರು.