ಅಯೋಧ್ಯೆ: ರಾಮಮಂದಿರ ಹುಂಡಿ ಕಳವು ಪ್ರಕರಣ ತೀವ್ರ ಸಂಚಲನ ಸೃಷ್ಟಿಸಿರುವ ನಡುವೆಯೇ, ಕಾಣಿಕೆ ಹಣ ಲೆಕ್ಕ ಹಾಕುವ ಸಿಬ್ಬಂದಿಗೆ ಜೇಬುರಹಿತ ಬಟ್ಟೆ ಧರಿಸುವುದು ಸೇರಿದಂತೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇತ್ತ ನಿಯಮ ಬಿಗಿಗೊಳ್ಳುತ್ತಿದ್ದಂತೆ, ಅರ್ಧಕ್ಕೂಹೆಚ್ಚಿನ ಎಣಿಕೆ ಸಿಬ್ಬಂದಿ (ಸುಮಾರು 23 ಸಿಬ್ಬಂದಿ) ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಅಕ್ರಮಗಳನ್ನು ತಡೆಗಟ್ಟುವ ಉದ್ದೇಶ
ದೇಗುಲದಲ್ಲಿ ಸಂಭಾವ್ಯ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಟ್ರಸ್ಟ್ ಹಲವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದರ ಭಾಗವಾಗಿ ಕಾಣಿಕೆ ಎಣಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಈ ಮೊದಲು ದೇಗುಲದ ಸ್ವಚ್ಛತಾ ಕಾರ್ಮಿಕರನ್ನೂ ಎಣಿಕೆ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತಿತ್ತು. ಇದೀಗ ಅವರನ್ನು ಅವರ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಜೇಬು ಇಲ್ಲದ ಬಟ್ಟೆಯನ್ನು ಮಾತ್ರ ಧರಿಸುವುದು ಹಾಗೂ ಪೊಲೀಸರಿಂದ ಪರಿಶೀಲಿಸಲ್ಪಟ್ಟ ನಡವಳಿಕೆ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ.
23 ಮಂದಿ ರಾಜೀನಾಮೆ:
ಟ್ರಸ್ಟ್ನಿಂದ ಬಿಗಿ ನಿಯಮಗಳು ಜಾರಿಯಾಗುತ್ತಿದ್ದಂತೆ ಕಾಣಿಕೆ ಎಣಿಕೆ ಜವಾಬ್ದಾರಿ ಹೊತ್ತಿದ್ದ 23 ಸಿಬ್ಬಂದಿ ರಾಜೀನಾಮೆ ನೀಡಿದ್ದಾರೆ. ಅಕ್ರಮ ಬೆಳಕಿಗೆ ಬಂದ ನಂತರ ಕೆಲಸದ ಒತ್ತಡ ತಾಳಲಾಗುತ್ತಿಲ್ಲ ಎಂದು ಅವರು ಕಾರಣ ನಿಡಿದ್ದಾರೆ. ಟ್ರಸ್ಟ್ ಈಗ ಕೂಲಂಕಷ ಪರಿಶೀಲನೆ ಬಳಿಕ ಹೊಸ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಸಿದ್ಧತೆಯಲ್ಲಿದೆ.
