ಸಾರಾಂಶ
ನವದೆಹಲಿ: ಪತ್ನಿ ಹತ್ಯೆ ಪ್ರಕರಣದಲ್ಲಿ ತನಗೆ ವಿಧಿಸಿರುವ ಆಜೀವ ಜೈಲು ಶಿಕ್ಷೆ ತೀರ್ಪು ಮರುಪರಿಶೀಲಿಸುವಂತೆ ಕೋರಿ ಸ್ವಾಮಿ ಶ್ರದ್ಧಾನಂದ (84) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೀಗಾಗಿ ಆತ ಸಾಯುವವರೆಗೂ ಜೈಲು ಶಿಕ್ಷೆ ಅನುಭವಿಸುವುದು ಅನಿವಾರ್ಯವಾಗಿದೆ.
ಶ್ರದ್ಧಾನಂದ ಮೈಸೂರಿನ ದಿವಾನರಾಗಿದ್ದ ದಿ.ಸರ್ ಮಿರ್ಜಾ ಇಸ್ಲಾಯಿಲ್ರ ಮೊಮ್ಮಗಳಾದ ಶಾಖರೇ ಖಲೀಲಿಯನ್ನು 1986ರಲ್ಲಿ ವರಿಸಿದ್ದ. 1991ರಲ್ಲಿ ಖಲೀಲಿ ನಿಗೂಢವಾಗಿ ನಾಪತ್ತೆಯಾಗಿದ್ದರು. ತನಿಖೆ ವೇಳೆ ಸ್ವತಃ ಶ್ರದ್ಧಾನಂದನೇ ಪತ್ನಿಯನ್ನು ಜೀವಂತವಾಗಿ ಹೂತುಹಾಕಿ ಹತ್ಯೆ ಮಾಡಿದ್ದು ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ಆತನಿಗೆ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿತ್ತು. ಬಳಿಕ ಹೈಕೋರ್ಟ್ ಕೂಡಾ ಅದನ್ನು ಎತ್ತಿಹಿಡಿದಿತ್ತು. ಬಳಿಕ ಪ್ರಕರಣ ಸುಪ್ರೀಂ ಮೆಟ್ಟಿಲೇರಿ ಅಲ್ಲಿ ಗಲ್ಲು ಶಿಕ್ಷೆ ಬದಲಿಗೆ ಆಜೀವ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿದ್ದ ಶ್ರದ್ಧಾನಂದ ತಾನು 30 ವರ್ಷದಿಂದ ಯಾವುದೆ ಪರೋಲ್ ಇಲ್ಲದೇ ಶಿಕ್ಷೆ ಅನುಭವಿಸಿ ಮಾನಸಿಕ ಯಾತನೆ ಅನುಭವಿಸಿದ್ದೇನೆ. ಹೀಗಾಗಿ ತನ್ನನ್ನೂ ರಾಜೀವ್ ಹಂತಕರ ರೀತಿಯಲ್ಲಿ ಬಿಡುಗಡೆ ಮಾಡಬೇಕು ಎಂದು ಕೋರಿದ್ದ. ಆದರೆ ಆ ಅರ್ಜಿ ವಿಚಾರಣೆಗೆ ನ್ಯಾಯಾಲಯ ನಿರಾಕರಿಸಿತು.