ಏರ್‌ ಇಂಡಿಯಾ ವಿಮಾನದ ಮುರಿದ ಚೇರಲ್ಲಿ 1.5 ತಾಸು ಕೇಂದ್ರ ಕೃಷಿ ಸಚಿವ ಶಿವರಾಜ್‌ ಪ್ರಯಾಣ!

| N/A | Published : Feb 23 2025, 12:30 AM IST / Updated: Feb 23 2025, 05:44 AM IST

ಸಾರಾಂಶ

ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಕೇಂದ್ರ ಕೃಷಿ ಸಚಿವ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮುರಿದ ಸೀಟನ್ನು ನೀಡಲಾದ ಘಟನೆ ನಡೆದಿದೆ. ಈ ಮುರಿದ ಆಸನದಲ್ಲೇ ಅವರು ಭೋಪಾಲ್‌ನಿಂದ ದಿಲ್ಲಿಗೆ 1.5 ತಾಸು ಪ್ರಯಾಣ ಮಾಡಿದ್ದಾರೆ.  

 ನವದೆಹಲಿ: ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಕೇಂದ್ರ ಕೃಷಿ ಸಚಿವ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಮುರಿದ ಸೀಟನ್ನು ನೀಡಲಾದ ಘಟನೆ ನಡೆದಿದೆ. ಈ ಮುರಿದ ಆಸನದಲ್ಲೇ ಅವರು ಭೋಪಾಲ್‌ನಿಂದ ದಿಲ್ಲಿಗೆ 1.5 ತಾಸು ಪ್ರಯಾಣ ಮಾಡಿದ್ದಾರೆ. ಇದರ ಬೆನ್ನಲ್ಲೇ ಅವರು ಏರ್‌ ಇಂಡಿಯಾ ವಿರುದ್ಧ ಗರಂ ಆಗಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತ ಏರ್‌ ಇಂಡಿಯಾ ಕ್ಷಮೆ ಯಾಚಿಸಿದೆ. ಇನ್ನೊಂದೆಡೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ ಹಾಗೂ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರು ಏರ್‌ ಇಂಡಿಯಾ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ಆಗಿದ್ದೇನು?:ದಿಲ್ಲಿಯಲ್ಲಿ ಶನಿವಾರ ನಿಗದಿಯಾಗಿದ್ದ ಕೃಷಿ ಮೇಳ ಉದ್ಘಾಟನೆಗಾಗಿ ಮಧ್ಯಪ್ರದೇಶದ ಭೋಪಾಲ್‌ನಿಂದ ನವದೆಹಲಿಗೆ ಪ್ರಯಾಣಿಸಲು ಏರ್‌ ಇಂಡಿಯಾದ ಎಐ436 ವಿಮಾನದಲ್ಲಿ ಹೊರಟಿದ್ದ ಕೇಂದ್ರ ಕೃಷಿ ಸಚಿವ ಚೌಹಾಣ್‌ ಅವರು ಕಾಯ್ದಿರಿಸಿದ್ದ ಆಸನವು ಮುರಿದು ಅಲ್ಲಾಡುತ್ತಿತ್ತು.

ಇದರಿಂದ ತಮಗಾದ ಅನಾನುಕೂಲದ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಸೀಟ್‌ ಸರಿ ಇರದ ಬಗ್ಗೆ ವಿಮಾನ ಪರಿಚಾರಕರಿಗೆ ತಿಳಿಸಿದೆ. ಆಗ ಅವರು ಈ ಸೀಟು ಸರಿಯಿಲ್ಲ. ಯಾರಿಗೂ ನೀಡಬೇಡಿ ಎಂದು ಮೊದಲೇ ಬುಕ್ಕಿಂಗ್‌ ಸಿಬ್ಬಂದಿಗೆ ಹೇಳಿದ್ದೆವು ಎಂದರು. ಜೊತೆಗೆ, ವಿಮಾನದಲ್ಲಿ ಇನ್ನೂ ಅನೇಕ ದೋಷಯುಕ್ತ ಆಸನಗಳು ಇರುವುದಾಗಿ ಹೇಳಿದರು’ ಎಂದಿದ್ದಾರೆ.

‘ಬಳಿಕ ಸಹ ಪ್ರಯಾಣಿಕರು ತಮ್ಮ ಆಸನ ನೀಡಲು ಮುಂದಾದರು. ಆದರೆ ಅವರಿಗೆ ತೊಂದರೆ ಕೊಡಬಾರದೆಂದು, ನನ್ನ ಮುರಿದ ಆಸನದಲ್ಲಿ ಕುಳಿತೇ ಒಂದೂವರೆ ಗಂಟೆ ಪ್ರಯಾಣಿಸಿದೆ’ ಎಂದು ಚೌಹಾಣ್‌ ಹೇಳಿದ್ದಾರೆ.

‘ಟಾಟಾ ಸಮೂಹ ಏರ್‌ ಇಂಡಿಯಾದ ನಿರ್ವಹಣೆಯನ್ನು ವಹಿಸಿಕೊಂಡ ಮೇಲೆ ಅದರ ಸೇವೆ ಸುಧಾರಿಸಬಹುದು ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ಪ್ರಯಾಣಿಕರು ಪೂರ್ತಿ ಹಣ ಪಾವತಿಸುತ್ತಾರೆ ಎಂದ ಮೇಲೆ ಅವರಿಗೆ ಸರಿಯಿಲ್ಲದ ಸೀಟುಗಳನ್ನು ಏಕೆ ಕೊಡಬೇಕು?’ ಎಂದಿದ್ದಾರೆ.

ಏರ್‌ ಇಂಡಿಯಾ ಕ್ಷಮೆ:ಸಚಿವರು ತಮಗಾದ ಅನಾನುಕೂಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕ್ಷಮೆ ಯಾಚಿಸಿರುವ ಏರ್‌ ಇಂಡಿಯಾ ಸಂಸ್ಥೆ, ‘ಮುಂದೆ ಇಂತಹ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತೇವೆ’ ಎಂಬ ಭರವಸೆ ನೀಡಿದೆ.