ಸಾರಾಂಶ
ಸೆರೆಯಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಅವರ ಬೆಂಬಲಿಗರು ಭಾನುವಾರದಿಂದ ಆರಂಭಿಸಿರುವ ಪ್ರತಿಭಟನೆ ಸೋಮವಾರ ಹಿಂಸಾತ್ಮಕ ರೂಪ ಪಡೆದಿದೆ.
ಇಸ್ಲಾಮಾಬಾದ್: ಸೆರೆಯಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗೆ ಆಗ್ರಹಿಸಿ ಅವರ ಬೆಂಬಲಿಗರು ಭಾನುವಾರದಿಂದ ಆರಂಭಿಸಿರುವ ಪ್ರತಿಭಟನೆ ಸೋಮವಾರ ಹಿಂಸಾತ್ಮಕ ರೂಪ ಪಡೆದಿದೆ. ಪ್ರತಿಭಟನಾಕಾರರ ದಾಳಿಗೆ 6 ಯೋಧರು ಬಲಿಯಾಗಿದ್ದು, ನೂರಾರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಮ್ರಾನ್ನ ತೆಹ್ರೀಕ್ ಎ ಇನ್ಸಾಪ್ ಪಕ್ಷದ ಸಾವಿರಾರು ಕಾರ್ಯಕರ್ತರು ಸರ್ಕಾರದ ನಿಷೇಧಾಜ್ಞೆ ಉಲ್ಲಂಘಿಸಿ ರಾಜಧಾನಿ ಇಸ್ಲಾಮಾಬಾದ್ಗೆ ನುಗ್ಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿದೆ.
ಈ ನಡುವೆ ಯೋಧರ ಹತ್ಯೆ ಹಿನ್ನೆಲೆಯಲ್ಲಿ ಇಮ್ರಾನ್ ಮತ್ತು ಅವರ ಪಕ್ಷದ ಹಲವು ನಾಯಕರ ವಿರುದ್ಧ ಪೊಲೀಸರು ಭಯೋತ್ಪಾದನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಇಮ್ರಾನ್ ವಿರುದ್ಧ 20ಕ್ಕೂ ಹೆಚ್ಚು ಕೇಸು ದಾಖಲಾಗಿದೆ.ಈ ನಡುವೆ ಹಿಂಸಾತ್ಮಕ ಪ್ರತಿಭಟನೆ ಖಂಡಿಸಿರುವ ಪ್ರಧಾನಿ ಶೆಹಬಾಜ್ ಶರೀಫ್, ‘ಶಾಂತಿಯುತ ಪ್ರತಿಭಟನೆ ಹೆಸರಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸುವುದು ಖಂಡನಾರ್ಹ. ಅಶಾಂತಿ ಸೃಷ್ಟಿಸುತ್ತಿರುವವರನ್ನು ಗುರುತಿಸಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಆದೇಶಿಸಿದ್ದಾರೆ.