- ತಿಂಡಿಯ ಆಮಿಷ ತೋರಿಸಿ ಅಪಹರಿಸಿದ್ದ
- ದನದ ಕೊಟ್ಟಿಗೆಯಲ್ಲಿ ಅತ್ಯಾಚಾರವೆಸಗಿದ್ದ- ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದ ಹೇಯ ಕೃತ್ಯ
- ಮೇ 1ಕ್ಕೆ ಘಟನೆ । ಜೂ.25ಕ್ಕೆ ಆರೋಪ ಸಾಬೀತುಪಿಟಿಐ ಪುಣೆ3 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣದಲ್ಲಿ 65 ವರ್ಷದ ವೃದ್ಧಗೆ ಪುಣೆಯ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಘಟನೆ ನಡೆದು 2 ತಿಂಗಳಲ್ಲೇ ಅಪರಾಧಿಗೆ ಶಿಕ್ಷೆ ವಿಧಿಸುವ ಮೂಲಕ ಕೋರ್ಟ್ ಇತಿಹಾಸ ನಿರ್ಮಿಸಿದೆ.ಕಳೆದ ಮೇ 1 ರಂದು ಮಹಾರಾಷ್ಟ್ರದ ಪುಣೆಯ ನಸ್ರಾಪುರ ಗ್ರಾಮದಲ್ಲಿ ಅಜ್ಜಿ ಮನೆಗೆ ಹೋಗುತ್ತಿದ್ದ 3 ವರ್ಷದ ಹೆಣ್ಣು ಮಗುವನ್ನು ಭೀಮರಾವ್ ಕಾಂಬ್ಳೆ ಎನ್ನುವ 65 ವರ್ಷದ ವ್ಯಕ್ತಿ ತಿಂಡಿಯ ಆಮಿಷವೊಡ್ಡಿ ದನದ ಕೊಟ್ಟಿಗೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಅಲ್ಲಿ ಪೈಶಾಚಿಕತೆ ಮೆರೆದಿದ್ದ. ಸಿಕ್ಕಿ ಹಾಕಿಕೊಳ್ಳಬಾರದು ಎಂದು ಆಕೆಯ ಮೇಲೆ ಹಲ್ಲೆಗೈದು, ಎದೆಗೆ ಒದ್ದು ಬಾಯಿ ಮುಚ್ಚಿಸಿ ಕೊಲೆಗೈದಿದ್ದ.ಮಗಳು ಕಾಣದಿದ್ದಕ್ಕೆ ಪೋಷಕರು ಹುಡುಕಾಟ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಇದು ರಾಜ್ಯವ್ಯಾಪಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಘಟನೆ ನಡೆದು 16 ದಿನದೊಳಗೆ ತನಿಖೆ ನಡೆಸಿ ಕಾಂಬ್ಳೆ ವಿರುದ್ಧ 1200 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದರು.
ಶಿಕ್ಷೆ ಇಳಿಕೆಗೆ ನಕಾರ:ಆ ಬಳಿಕ ಪುಣೆ ವಿಶೇಷ ನ್ಯಾಯಾಲಯ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ಘಟನೆ ನಡೆದು 60 ದಿನದಲ್ಲಿ ತೀರ್ಪು ನೀಡಿದೆ. ಅಲ್ಲದೇ ಆತನ ವಯಸ್ಸನ್ನು ಆಧರಿಸಿ ಶಿಕ್ಷೆಗೆ ಇಳಿಕೆಗೆ ನಿರಾಕರಿಸಿದೆ. ‘ಆರೋಪಿಯು ಈ ಹಿಂದೆ 2 ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದರೂ ಪಶ್ಚಾತ್ತಾಪವಿಲ್ಲದೇ ಈ ಹೇಯ ಕೃತ್ಯ ನಡೆಸಿದ್ದಾನೆ. ಹಾಗಾಗಿ ಶಿಕ್ಷೆ ಮಾರ್ಪಾಡು ಸಾಧ್ಯವಿಲ್ಲ’ ಎಂದಿದೆ.
ಈ ತೀರ್ಪನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಎಸ್ಪಿ ಸಂಸದೆ ಸುಪ್ರಿಯಾ ಸುಳೆ ಸೇರಿ ಹಲವರು ಸ್ವಾಗತಿಸಿದ್ದು, ತ್ವರಿತ ನ್ಯಾಯದಾನಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದಿದ್ದಾರೆ.