ಗ್ಯಾಸ್‌ನಿಂದ ವಿದ್ಯುತ್‌ ತಯಾರಿ ಘಟಕ ನಾಡಿದ್ದು ಲೋಕಾರ್ಪಣೆ

| Published : Sep 22 2024, 01:45 AM IST / Updated: Sep 22 2024, 01:46 AM IST

ಗ್ಯಾಸ್‌ನಿಂದ ವಿದ್ಯುತ್‌ ತಯಾರಿ ಘಟಕ ನಾಡಿದ್ದು ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲೇ ಮೊದಲ ಬಾರಿಗೆ ಸ್ಥಾಪಿಸಿರುವ ಗ್ಯಾಸ್‌ ಹಾಗೂ ಸ್ಟೀಮ್‌ನಿಂದ (ಹಬೆ) ವಿದ್ಯುತ್‌ ಉತ್ಪಾದಿಸುವ 370 ಮೆಗಾ ವ್ಯಾಟ್‌ ಸಾಮರ್ಥ್ಯದ ‘ಕಂಬೈನ್ಡ್‌ ಸೈಕಲ್‌ ವಿದ್ಯುತ್‌ ಉತ್ಪಾದನೆ ಘಟಕ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.24 ರಂದು ಲೋಕಾರ್ಪಣೆ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ವಿದ್ಯುತ್‌ ನಿಗಮದ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಸ್ಥಾಪಿಸಿರುವ ಗ್ಯಾಸ್‌ ಹಾಗೂ ಸ್ಟೀಮ್‌ನಿಂದ (ಹಬೆ) ವಿದ್ಯುತ್‌ ಉತ್ಪಾದಿಸುವ 370 ಮೆಗಾ ವ್ಯಾಟ್‌ ಸಾಮರ್ಥ್ಯದ ‘ಕಂಬೈನ್ಡ್‌ ಸೈಕಲ್‌ ವಿದ್ಯುತ್‌ ಉತ್ಪಾದನೆ ಘಟಕ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.24 ರಂದು ಲೋಕಾರ್ಪಣೆ ಮಾಡಲಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಯಲಹಂಕದಲ್ಲಿ ₹2,500 ಕೋಟಿ ವೆಚ್ಚದಲ್ಲಿ 370 ಮೆ.ವ್ಯಾಟ್‌ ಸಾಮರ್ಥ್ಯದ ‘ಯಲಹಂಕ ಸಂಯೋಜಿತ ಆವರ್ತ ವಿದ್ಯುತ್‌ ಸ್ಥಾವರ’ (ಕಂಬೈನ್ಡ್‌ ಸೈಕಲ್‌ ಪವರ್‌ ಪ್ಲಾಂಟ್‌) ಸ್ಥಾಪಿಸಿದ್ದೇವೆ. ಗ್ಯಾಸ್ ಟರ್ಬೈನ್ ಮೂಲಕ 237 ಮೆ.ವ್ಯಾ. ಮತ್ತು ಸ್ಟೀಮ್ ಟರ್ಬೈನ್ ಮೂಲಕ 133 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗಲಿದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ 2014ರ ಜು.28ರಂದು ವಿದ್ಯುತ್ ಸ್ಥಾವರ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ 2016ರಲ್ಲಿ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಘಟಕದ ಕಾರ್ಯಾಚರಣೆಗೆ ಇದ್ದ ಅಡೆತಡೆಗಳನ್ನು ನಿವಾರಿಸಲಾಗಿದ್ದು, ಕಳೆದ ಆಗಸ್ಟ್ 8ರಂದು ಪೂರ್ಣ ಲೋಡ್ 370 ಮೆ. ವ್ಯಾ. (20 ಗಂಟೆಗಳ) ನಿರಂತರ ಸಂಯುಕ್ತ ಆವರ್ತ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಿಳಿಸಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ನೂತನ ಘಟಕದಿಂದ ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೆಚ್ಚಳದ ಜತೆಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ.‌ ಸುಸ್ಥಿರ ಇಂಧನ ಭವಿಷ್ಯದ ಕಡೆಗೆ ಇದು ಪ್ರಮುಖ ಮೈಲಿಗಲ್ಲಾಗಲಿದೆ ಎಂದರು.

ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕೆಪಿಸಿಎಲ್ ಮಾನವ ಸಂಪನ್ಮೂಲ ನಿರ್ದೇಶಕ ಸಿ‌.ನಾಗರಾಜು, ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ‌ ನಿರ್ದೇಶಕ ಎಸ್.ಕೃಷ್ಣಮೂರ್ತಿ ಹಾಜರಿದ್ದರು.