ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕಳೆದ 719 ದಿನಗಳಿಂದ ತಾಲೂಕು ಬೇಡಿಕೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಯಾವುದೇ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈಗಲಾದರೂ ಸರ್ಕಾರ ತಕ್ಷಣ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು. ಇಲ್ಲದಿದ್ದರೆ ಪ್ರಸ್ತುತ ಲೋಕಸಭೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಹೇಳಿದರು.ಬುಧವಾರ ಹೋರಾಟ ವೇದಿಕೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮಹಾಲಿಂಗಪುರ ಹಾಗೂ ಅದರ ಸುತ್ತಮುತ್ತಲಿನ 14 ಹಳ್ಳಿಗಳ ಜನತೆ ಲೋಕಸಭೆ ಚುನಾವಣೆಯ ಮತದಾನ ಬಹಿಷ್ಕಾರ ಮಾಡುವ ಅತ್ಯಂತ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಏ.14ಕ್ಕೆ ನಮ್ಮ ಹೋರಾಟ ಎರಡು ವರ್ಷ ಪೂರೈಸುತ್ತಿದೆ. ನಮ್ಮದು ರಾಜ್ಯದಲ್ಲಿ ಅತೀ ನಾಯಯುತ ಬೇಡಿಕೆ ಆಗಿದೆ. ಹೋರಾಟಗಾರರ ತಾಳ್ಮೆ ಪರೀಕ್ಷಿಸಿವುದು ಸರಿಯಲ್ಲ. ರಾಜ್ಯದ ಇತಿಹಾಸದಲ್ಲಿ ಇಷ್ಟು ನ್ಯಾಯಯುತ ಬೇಡಿಕೆ ಬೇರೆ ಯಾವುದು ಇರಲಿಕ್ಕಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಹಾಲಿ ಸಿಎಂ ಸಿದ್ದರಾಮಯ್ಯನವರಿಗೆ ಹಲವು ಬಾರಿ ನಿಯೋಗ ತೆಗೆದುಕೊಂಡು ಹೋಗಿ ಮನವಿ ಸಲ್ಲಿಸಿದರು ಪ್ರಯೋಜನವಾಗಲಿಲ್ಲ. ಬೊಮ್ಮಾಯಿ ಅವರು ವಿಧಾನಸಭೆ ಚುನಾವಣೆ ಅಧಿಸೂಚನೆ ಘೋಷಣೆ ಆಗುವುದರೊಳಗೆ ತಾಲೂಕು ಕೇಂದ್ರ ಘೋಷಣೆ ಮಾಡಿ ನಿಮಗೆ ಸಿಹಿ ಸುದ್ದಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಅವರು ಘೋಷಣೆ ಮಾಡಲೇ ಇಲ್ಲ. ಹಾಲಿ ಸಿಎಂ ಸಿದ್ದರಾಮಯ್ಯನವರಿಗೆ ಅಧಿವೇಶನದ ವೇಳೆ ಮನವಿ ಕೊಡಲಾಯಿತು. ಅವರು ಕೂಡಾ ಭರವಸೆ ಆಶ್ವಾಸನೆ ಕೊಟ್ಟರೆ, ಹೊರತು ಅವರು ತಾಲೂಕು ಘೋಷಣೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇಂತಹ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಕಡೆಗಣಿಸುತ್ತಿರುವುದು ನಾಚಿಕೇಗೆಡಿನ ಸಂಗತಿ. ಈ ಭಾಗದ ಎರಡು ಲಕ್ಷಕ್ಕೂ ಅಧಿಕ ಜನರ ಬೇಡಿಕೆ ಒಂದೇ ಮಹಾಲಿಂಗಪುರ್ ತಾಲೂಕು ಆಗಬೇಕು ಎಂಬುದು. ಆದರೆ, ಸರ್ಕಾರಗಳು ಸುಳ್ಳು ಭರವಸೆಗಳನ್ನು ಕೊಟ್ಟು ಸತಾಯಿಸುತ್ತಿರುವುದು ಹೋರಾಟಗಾರರನ್ನು ಕೆರಳಿಸಿದೆ. ಆದ್ದರಿಂದ ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕಾರ ಹಾಕಲು 14 ಹಳ್ಳಿಯ ಹಾಗೂ ಮಹಾಲಿಂಗಪುರದ ಜನ ಸಭೆ ಸೇರಿ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.ಈ ವೇಳೆ 719 ನೇ ದಿನದ ಹೋರಾಟ ವೇದಿಕೆ ಮೇಲೆ ವೀರೇಶ ಆಸಂಗಿ, ದುಂಡಪ್ಪ ಇಟ್ನಾಳ, ಶ್ರೀಮಂತ ಗೌಠಡಿ ಮಹಾಲಿಂಗಪ್ಪ ಅವರಾದಿ, ಭೀಮಶಿ ನಾಯಕ, ಹಣಮಂತ ವಗ್ಗರ, ಗೋಪಾಲ ನಾವಿ, ಯಾಸಿನ್ ಜವಳಿ ರಫಿಕ್ ಮಾಲಾದರ, ಸಿದ್ದು ಶಿರೋಳ, ಹಣಮಂತ ಭಜಂತ್ರಿ, ಸತ್ಯಪ್ಪ ಬ್ಯಾಳಿ ಸೇರಿ ಹಲವರು ಇದ್ದರು.