ಶಿರಸಂಗಿ ಲಿಂಗರಾಜರ ಜೀವನ ಎಲ್ಲರಿಗೂ ಆದರ್ಶ

| Published : Jan 11 2024, 01:31 AM IST

ಸಾರಾಂಶ

ಲಿಂಗರಾಜ ದೇಸಾಯಿ ಅವರು ಸಮಾಜಮುಖಿ ಕೆಲಸಗಳಿಗಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದ್ದಾರೆ.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಯಾರಲ್ಲಿ ತ್ಯಾಗ ಭಾವವಿರುವುದೋ ಅವರು ಜಗತ್ತಿನಲ್ಲಿ ಅಮರರಾಗಿ ಇರಲು ಸಾಧ್ಯ. ನಾವು ಗಳಿಸಿದ ಸಂಪತ್ತು ನಮ್ಮ ವಂಶಜರಿಗೆ ಆಗುತ್ತದೆ. ಅದೇ ಸಂಪತ್ತು ಸಮಾಜಕ್ಕೆ ಆದರೆ ಅದು ಅಮರವಾಗಿರುತ್ತದೆ. ಈ ಸಾಲಿನಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಅಮರರಾಗಿದ್ದಾರೆ ಎಂದು ಕವಲಗಿ ಮಠದ ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಬುಧವಾರ ನಡೆದ ಶಿರಸಂಗಿ ಲಿಂಗರಾಜ ದೇಸಾಯಿ ಅವರ 163ನೇ ಜಯಂತಿ ಮತ್ತು ಶಿರಸಂಗಿ ಲಿಂಗರಾಜ ವೃತ್ತ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ತ್ಯಾಗವೀರ, ಜ್ಞಾನ ದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜಮುಖಿ ಕೆಲಸಗಳಿಗಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದ್ದಾರೆ. ಶಿರಸಂಗಿ ಲಿಂಗರಾಜ ದೇಸಾಯಿ ಅವರು ಅಂದಿನ ಕಾಲದಲ್ಲಿ ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಶ್ರಮಿಸಿದ್ದಾರೆ. ಜನಸೇವೆಗೆ ಹೆಸರಾದ ಅವರು, ತಮ್ಮ ತನು, ಮನ, ಧನದಿಂದ ಸಮಾಜ ಸೇವೆ ಮಾಡಿದ್ದಾರೆ. ಅವರ ಜೀವನ ನಮಗೆ ಆದರ್ಶ ಆಗಿದೆ ಎಂದು ಹೇಳಿದರು.1904ರಲ್ಲಿ ಹಾನಗಲ್ಲ ಕುಮಾರಸ್ವಾಮಿ ಅವರೊಂದಿಗೆ ಸೇರಿ ವೀರಶೈವ ಪಂಗಡಗಳು ಒಂದಾಗಬೇಕೆಂದು ವೀರಶೈವ ಮಹಾಸಭಾ ಸ್ಥಾಪನೆ ಆಗುವುದರಲ್ಲಿ ಪಾತ್ರವಹಿಸಿದರು ಎಂದರು. ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಎ.ಎಂ. ಪಾಟೀಲ ಮಾತನಾಡಿದರು. ಸಾನ್ನಿಧ್ಯ ನಾಗರದಿನ್ನಿಯ ಮಲ್ಲಿಕಾರ್ಜುನ ಶಿವಯೋಗಿಗಳು ವಹಿಸಿದ್ದರು. ಉಕ್ಕಲಿ ಗ್ರಾಮದ ಮುಖಂಡ ಎಂ.ಎಸ್. ಪಾಟೀಲ, ಬಸಪ್ಪ ಹಣಮಶೆಟ್ಟಿ, ಸುಭಾಸ ಕಲ್ಯಾಣಿ, ನಾನಾಸಾಬ ಸಿಂದಗಿ, ಬಾಳು ಮಸಳಿ, ಪ್ರಕಾಶ ಪಾಟೀಲ, ರಾಜು ಸಂಕಣ್ಣವರ, ಸಂತುಗೌಡ ಇಂಡಿ, ರಾಜೇಸಾಬ ಕರೋಶಿ, ರಾಹುಲ ಕಲಗೊಂಡ, ಮುದುಕು ಸಿಂದಗಿ, ಧರು ಸುಸಲಾದಿ, ಮುತ್ತಪ್ಪ ನಂದಿ ಇತರರು ಇದ್ದರು. ಪ್ರವೀಣ ಕಾಮಗೊಂಡ ನಿರೂಪಿಸಿದರು. ಮಹೇಶಗೌಡ ಪಾಟೀಲ ವಂದಿಸಿದರು.