ಸಾರಾಂಶ
ಭದ್ರಾವತಿ:
ದ್ವಿಚಕ್ರ ವಾಹನ ಕಳವು ಪ್ರಕರಣವೊಂದನ್ನು ಬೇಧಿಸಿದ ನಗರದ ನ್ಯೂಟೌನ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ಕಳವು ಮಾಡಲಾಗಿದ್ದ 10 ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿರುವ ಘಟನೆ ನಡೆದಿದೆ.ಜೂ.4ರಂದು ಅಂತರಗಂಗೆ ನಿವಾಸಿ ಎಸ್.ಷಣ್ಮುಖಪ್ಪ(60) ಎಂಬುವರು ತಮ್ಮ ಬಜಾಜ್ ಸಿ.ಟಿ-100 ದ್ವಿಚಕ್ರ ವಾಹನ ನಗರದ ಬಿಳಕಿ ಕ್ರಾಸ್ ಹತ್ತಿರ ರೇಣುಕಾಂಬಾ ರೆಸ್ಟೋರೆಂಟ್ ಎದುರುಗಡೆ ನಿಲ್ಲಿಸಿಕ್ಕೆ ಹೋಗಿದ್ದರು, ಪುನಃ ಕೆಲಸ ಮುಗುಸಿ ಬಂದಾಗ ವಾಹನ ಕಳ್ಳತನ ಮಾಡಲಾಗಿತ್ತು. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ಪತ್ತೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಮತ್ತು ಎ.ಜಿ.ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಧೀಕ್ಷಕ ಕೆ.ಆರ್.ನಾಗರಾಜು ಅವರ ಮೇಲ್ವಿಚಾರಣೆ ಹಾಗೂ ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ನೇತೃತ್ವದಲ್ಲಿ ಠಾಣಾ ಉಪ ನಿರೀಕ್ಷಕ ಟಿ.ರಮೇಶ ಮತ್ತು ಸಹಾಯಕ ಠಾಣಾ ಉಪನಿರೀಕ್ಷಕ ಟಿ.ಪಿ.ಮಂಜಪ್ಪ ಹಾಗೂ ಸಿಬ್ಬಂದಿ ನವೀನ, ಪ್ರಸನ್ನ ಮತ್ತು ಬಿ.ಎಂ.ರಘು ಅವರನ್ನು ಒಳಗೊಂಡಂತೆ ತನಿಖಾತಂಡ ರಚಿಸಲಾಗಿತ್ತು.ಈ ತನಿಖಾ ತಂಡವು ನ.28ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಕೋಟೆ ಅಗ್ರಹಾರ ವೃತ್ತ ಸುಗ್ಗಿಹಳ್ಳಿ ಹತ್ತಿರದ ನಿವಾಸಿ ಎಲೆಕ್ಟ್ರಿಷಿಯನ್ ಎಂ.ಬಿ.ನವೀನ ಕುಮಾರ್(32) ಹಾಗೂ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದ ಬಸ್ನಿಲ್ದಾಣ ಎದುರಿನ ಗುಜರಿ ವ್ಯಾಪಾರಿ ಉಮ್ಮರ್ ಬೇಗ್(26)ಅವರನ್ನು ಬಂಧಿಸಲಾಗಿದೆ.ಈ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ನವೀನ ಎಂಬಾತನು ನಗರ ವ್ಯಾಪ್ತಿಯಲ್ಲಿ ಒಟ್ಟು 10 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ಅದರಲ್ಲಿ 7 ದ್ವಿಚಕ್ರ ವಾಹನಗಳನ್ನು ಗುಜುರಿ ವ್ಯಾಪಾರಿ ಉಮ್ಮರ್ ಬೇಗ್ಗೆ ಮಾರಾಟ ಮಾಡಿರುವುದು ತಿಳಿದು ಬಂದಿದೆ. ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ 6, ಹಳೇನಗರ ಪೊಲೀಸ್ ಠಾಣೆಯಲ್ಲಿ 3 ಮತ್ತು ಹೊಸಮನೆ ಪೊಲೀಸ್ ಠಾಣೆಯಲ್ಲಿನ 1 ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿ ಒಟ್ಟು10 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, ಅಂದಾಜು ₹55 ಸಾವಿರ ಮೌಲ್ಯದ ಒಟ್ಟು 3 ದ್ವಿಚಕ್ರ ವಾಹನ ಮತ್ತು 7 ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಮಾರಾಟ ಮಾಡಿ ಗಳಿಸಿದ್ದ 2,10,000 ರು.ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ₹60 ಸಾವಿರ ಮೌಲ್ಯದ ಪಲ್ಸರ್ ಬೈಕ್ ಸೇರಿ ಒಟ್ಟು ₹3,25,000 ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ. ತನಿಖಾ ತಂಡದ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.