ಹುಬ್ಬಳ್ಳಿ:ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಹಕ್ಕೊತ್ತಾಯದೊಂದಿಗೆ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಇಲ್ಲಿನ ಅಂಬೇಡ್ಕರ್ ಸರ್ಕಲ್ನಿಂದ ಪ್ರಾರಂಭವಾದ ರ್ಯಾಲಿಯು ತಹಸೀಲ್ದಾರ್ ಕಚೇರಿ ವರೆಗೂ ನಡೆಯಿತು. ಈ ವೇಳೆ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು-ಕಾರ್ಯಕರ್ತರ ನಡುವೆ ಚಕಮಕಿ ನಡೆಯಿತು.
ಕಾರ್ಯಕರ್ತರು ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಿ ಎಂಬ ಘೋಷಣೆವುಳ್ಳ ಭಿತ್ತಿಪತ್ರ ಹಿಡಿದು ಸಾಗಿದರು. ಪ್ರಸಾದ ಅಬ್ಬಯ್ಯ ಅವರ ಅಭಿಮಾನಿಯೊಬ್ಬರು ದೀಡ್ ನಮಸ್ಕಾರ ಹಾಕಿದ್ದು ಗಮನ ಸೆಳೆಯಿತು. ಅಬ್ಬಯ್ಯ ಸತತವಾಗಿ ಮೂರು ಬಾರಿ ಗೆದ್ದು ಶಾಸಕರಾಗಿದ್ದಾರೆ. ಸ್ಲಂ ಬೋರ್ಡ್ ಅಧ್ಯಕ್ಷರಾಗಿ, ಲೀಡ್ಕರ್ ಅಧ್ಯಕ್ಷರಾಗಿ ಅತ್ಯುತ್ತಮ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಆದಕಾರಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.ಕಿತ್ತೂರು ಕರ್ನಾಟಕದ ಮೂಲ ಪಂಚಮ ಪರಿಶಿಷ್ಟ ಜಾತಿ ಸಮುದಾಯಕ್ಕೆ 32 ವರ್ಷಗಳಿಂದ ಸಚಿವ ಸಂಪುಟದಲ್ಲಿ ಯಾವುದೇ ಆದ್ಯತೆ ನೀಡಲಾಗಿಲ್ಲ. ಈ ಭಾಗದ ಯುವ ನಾಯಕತ್ವವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಧಾರವಾಡ ಜಿಲ್ಲೆಯಲ್ಲಿ ಲಿಂಗಾಯತ, ಮರಾಠ ಮತ್ತು ಕುರುಬ ಸಮುದಾಯಗಳ ಶಾಸಕರಿಗೆ ಈಗಾಗಲೇ ಸಚಿವ ಸ್ಥಾನ ನೀಡಲಾಗಿದೆ, ಆದರೆ, ಈ ವರೆಗೆ ಮೂಲ ಪರಿಶಿಷ್ಟ ಜಾತಿ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಆದಕಾರಣ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಬ್ಬಯ್ಯ ಅವರನ್ನು ಸಚಿವರನ್ನಾಗಿಸಬೇಕು ಎಂದು ಆಗ್ರಹಿಸಿದರು,.
ಪ್ರತಿಭಟನೆಯಲ್ಲಿ ಎಸ್ಸಿ-ಎಸ್ಟಿ ವಕೀಲರು, ನೌಕರರು, ನಿವೃತ್ತ ನೌಕರರ ಸಂಘ, ಸಮತಾ ಸೇನೆ, ಕರ್ನಾಟಕ ರಕ್ಷಣಾ ಸೇನೆ, ಸಂವಿಧಾನ ರಕ್ಷಣಾ ಸಮಿತಿ, ಅಂಜುಮನ್ ಸಂಸ್ಥೆ, ಜಿಲ್ಲಾ ಲಿಂಗಾಯತ ಸಮಾಜ, ರೈತ ಸಂಘ, ಆಟೋ ಚಾಲಕರ ಸಂಘ, ಮತ್ತು ವಿವಿಧ ದಲಿತ ಸಂಘಟನೆಗಳ ಮಹಾಮಂಡಲ ಸಂಘಟನೆಗಳು ಬೆಂಬಲ ಸೂಚಿಸಿದ್ದವು.ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅಲ್ತಾಫ ಹಳ್ಳೂರ, ಅನಿಲಕುಮಾರ ಪಾಟೀಲ, ಮುಖಂಡರಾದ ರಾಜಾ ದೇಸಾಯಿ, ಇಮ್ರಾನ್ ಯಲಿಗಾರ, ಮೋಹನ ಅಸುಂಡಿ, ಗುರುನಾಥ ಉಳ್ಳಿಕಾಶಿ, ಪ್ರಫುಲಚಂದ್ರ ರಾಯನಗೌಡ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಸದಾನಂದ ಡಂಗನವರ, ಅಲ್ತಾಫ್ ಕಿತ್ತೂರ, ಶಿವಾನಂದ ಮುತ್ತಣ್ಣವರ, ಗಣೇಶ ಟಗರಗುಂಟೆ, ಶ್ರೀನಿವಾಸ ಬೆಳದಡಿ, ಪ್ರೇಮನಾಥ ಚಿಕ್ಕತುಂಬಳ ಸೇರಿದಂತೆ ಸಾವಿರಾರು ಜನರು ಇದ್ದರು.
ಪಿನಾಯಲ್ ಸೇವನೆಗೆ ಯತ್ನ:
ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನೆ ವೇಳೆ ಶಾಸಕರ ಅಭಿಮಾನಿಗಳಾದ ರಾಹುಲ್ ಬೆಳದಡಿ ಮತ್ತು ಅರ್ಜುನ ಕತ್ರಿಮಲ್ ಪಿನಾಯಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಪಿನಾಯಲ್ ಕುಡಿಯಲು ಯತ್ನಿಸಿದ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಕಾರ್ಯಕರ್ತರು ಅವರನ್ನು ತಡೆದರು. ಅಲ್ಲದೇ, ಅಸ್ವಸ್ಥಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದರು.