23ರಂದು ಕಾಪು ಮಾರಿಗುಡಿಗೆ ಉಡುಪಿಯಿಂದ ಹೊರೆಕಾಣಿಕೆ: ಯಶ್ಪಾಲ್‌

| Published : Feb 19 2025, 12:48 AM IST

ಸಾರಾಂಶ

ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮರ್ಪಣಾ ಪೂರ್ವಭಾವಿ ಸಭೆ ನಡೆಯಿತು. ಅನ್ನಸಂತರ್ಪಣೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಪಟ್ಟಿಯಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಬ್ರ್ಯಾಂಡ್​ ಸಾಮಗ್ರಿಗಳನ್ನು ಭಕ್ತರು ಒದಗಿಸಬೇಕು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಕಾಪು ಮಾರಿಗುಡಿಯ ಬ್ರಹ್ಮಕಲಶೋತ್ಸವಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗಳಿಂದಲೂ ಹೊರೆಕಾಣಿಕೆ ಸಮರ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನ್ನಸಂತರ್ಪಣೆ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಪಟ್ಟಿಯಲ್ಲಿ ಉಲ್ಲೇಖಿಸಿದ ನಿರ್ದಿಷ್ಟ ಬ್ರ್ಯಾಂಡ್​ ಸಾಮಗ್ರಿಗಳನ್ನು ಭಕ್ತರು ಒದಗಿಸಬೇಕು ಎಂದು ಶಾಸಕ ಯಶ್ಪಾಲ್​ ಸುವರ್ಣ ಹೇಳಿದರು.ಮಂಗಳವಾರ ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವ ಹೊರೆಕಾಣಿಕೆ ಸಮರ್ಪಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇವಸ್ಥಾನಗಳಲ್ಲಿ ನಡೆಯುವ ಅನ್ನದಾನದಿಂದ ಕ್ಷೇತ್ರದ ಸಾನ್ನಿಧ್ಯ ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಕಾಪು ಮಾರಿಗುಡಿ ಬ್ರಹ್ಮಕಲಶೋತ್ಸವದಲ್ಲಿ 3 ರಿಂದ 4 ಲಕ್ಷ ಜನರಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಕ್ಷೇತ್ರಕ್ಕೆ ಫೆ.23ರಂದು ಉತ್ತರವಾಹಿನಿ (ಉಡುಪಿ ಜಿಲ್ಲೆ) ಹಸಿರುವಾಣಿ ಹೊರೆಕಾಣಿಕೆ ಆಯೋಜಿಸಲಾಗಿದೆ. ಹೊರೆಕಾಣಿಕೆ ಮೆರವಣಿಗೆಯ ಸಂದರ್ಭದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಭಜನಾ ತಂಡಗಳು ನೋಂದಣಿ ಮಾಡಬೇಕು ಎಂದರು.ಹೊರೆಕಾಣಿಕೆ ಸಮಿತಿ ಅಧ್ಯಕ್ಷ ದೇವಿಪ್ರಸಾದ್​ ಶೆಟ್ಟಿ ಮಾತನಾಡಿ, ಫೆ.22ರಂದು 3 ಗಂಟೆಗೆ ದಕ್ಷಿಣ ವಾಹಿನಿ (ದ.ಕ. ಜಿಲ್ಲೆ) ಹೊರೆಕಾಣಿಕೆ ಮೆರವಣಿಗೆ ಕೊಪ್ಪಲಂಗಡಿಯಿಂದ ಕ್ಷೇತ್ರದ ವರೆಗೆ ನಡೆಯಲಿದೆ. ಫೆ.23ಕ್ಕೆ 3 ಗಂಟೆಗೆ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಹಸಿರುಹೊರೆಕಾಣಿಕೆ ಪಾಂಗಾಳದಿಂದ ಹೊರಟು ಕ್ಷೇತ್ರದವರೆಗೆ ಮೆರವಣಿಗೆಯಲ್ಲಿ ಸಾಗಲಿದೆ ಎಂದು ತಿಳಿಸಿದರು.ಸಭೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್​ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯ ರಮೇಶ್​ ಕಾಂಚನ್​, ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೊಟ್ಯಾನ್​, ಜಿಪಂ ಮಾಜಿ ಅಧ್ಯಕ್ಷ ದಿನಕರ ಬಾಬು, ಪ್ರಮುಖರಾದ ವೀಣಾ ಶೆಟ್ಟಿ, ಅರುಣ್​ ಶೆಟ್ಟಿ ಪಾದೂರು, ಕೃಷ್ಣಮೂರ್ತಿ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.