ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಯೋಗ ಒಕ್ಕೂಟವು ತನ್ನ 24ನೇ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ಅಂಗವಾಗಿ ಅರಮನೆ ಉತ್ತರ ದ್ವಾರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರದಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು.ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ. ದೇವರಾಜು ಪ್ರಾಸ್ತಾವಿಕ ಭಾಷಣ ಮಾಡಿ, ಒಕ್ಕೂಟವು 2001 ರಲ್ಲಿ ಪ್ರಾರಂಭವಾಗಿದ್ದು, ಅನೇಕ ಯೋಗ ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿವರ್ಷ ರಥಸಪ್ತಮಿ ಅಂಗವಾಗಿ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ 108 ಸೂರ್ಯ ನಮಸ್ಕಾರಗಳು ಹಾಗೂ ಸೂರ್ಯಯಜ್ಞ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಈವರೆಗೆ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆ, ಯೋಗ ಚಿತ್ರಕಲಾ ಸ್ಪರ್ಧೆ,ಜನಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಸರ್ಕಾರಿ ಆಯುರ್ವೇದ ಹಾಗೂ ಜೆಎಸ್ಎಸ್ ಆಯುರ್ವೇದ ಕಾಲೇಜಿನ ಸಹಯೋಗದಲ್ಲಿ ಆರೋಗ್ಯ ಸಪ್ತಾಹ, ಯೋಗ ಕಾರ್ಯಾಗಾರ ನಡೆಸಲಾಗುತ್ತಿದೆ.ಮೈಸೂರು ಯೋಗ ಸಂಸ್ಥೆಗಳ ಜೊತೆಗೂಡಿ ಪ್ರತಿ ವರ್ಷ ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಬ್ರಹ್ಮಕುಮಾರಿ ಈಶ್ವರಿಯ ವಿವಿ ಜೊತೆ ಸೇರಿ ಡಿ.21 ರಂದು ವಿಶ್ವ ಧ್ಯಾನ ದಿನಾಚರಣೆ ನಡೆಸಲಾಗುತ್ತಿದೆ ಎಂದರು.
ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಎ,ಎಸ್. ಚಂದ್ರಶೇಖರ್ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ಮುಖ್ಯ ಅತಿಥಿಯಾಗಿದ್ದರು. ಒಕ್ಕೂಟದ ಗೌರವಾಧ್ಯಕ್ಷ ಟಿ. ಜಲೇಂದ್ರಕುಮಾರ್, ಕಾರ್ಯಾಧ್ಯಕ್ಷರಾದ ಡಾ.ಬಿ.ಪಿ. ಮೂರ್ತಿ, ಶಾಂತರಾಮ್, ಎಂ.ಎಸ್. ಶಿವಪ್ರಕಾಶ್, ಉಪಾಧ್ಯಕ್ಷರಾದ ಎಂ.ಎಸ್. ರಮೇಶ್ಕುಮಾರ್, ಆಶಾ ದೇವಿ, ಪ್ರಧಾನ ಕಾರ್ಯದರ್ಶಿ ಯೋಗ ಕುಮಾರ್, ಖಜಾಂಚಿ ನರಸಿಂಹ, ರಾಜಶೇಖರ್, ಶುಭಲಕ್ಷ್ಮಿ, ಎಸ್,. ಪುರುಷೋತ್ತಮ್, ಶಿಲ್ಪಾ ಪ್ರಶಾಂತ್, ಕೆ. ಚಂದ್ರು, ಕುಮುದಾ, ಮಣಿಕಂಠನ್, ಎಂ.ಡಿ. ರಾಜಶೇಖರಮೂರ್ತಿ ಮೊದಲಾದವರು ಇದ್ದರು.ಇದೇ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಕೆ. ರಘುರಾಂ, ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ವಿ. ವೆಂಕಟೇಶಯ್ಯ, ಸ್ವಾಸ್ಥ್ಯ ಮತ್ತು ಆಹಾರ ತಜ್ಞೆ ನಂದಿನಿ ಮೂರ್ತಿ
ಅವರನ್ನು ಸನ್ಮಾನಿಸಲಾಯಿತು.ಹಿರಿಯ ಸಮಾಜ ಸೇವಕ ಕೆ. ರಘುರಾಂ ಅವರು ಮಾತನಾಡಿ, ಮೈಸೂರಿನಲ್ಲಿ ಯೋಗ ಬೆಳವಣಿಗೆಗೆ ಯದುವಂಶದ ಕೊಡುಗೆ ಅಪಾರ. ಅದೇ ರೀತಿ ಹಲವಾರು ಸಾಧಕರು ಯೋಗವನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಲು ಕಾರಣರಾಗಿದ್ದಾರೆ ಎಂದರು.
ಮೈಸೂರಿನ ವಿವಿಧ ಯೋಗ ಕೇಂದ್ರಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ವಿದೇಶಿಯರು ಸೇರಿದಂತೆ ಹಲವಾರು ಯೋಗಬಂಧುಗಳು ಭಾಗವಹಿಸಿ, ಅತ್ಯಂತ ಶಿಸ್ತುಬದ್ಧವಾಗಿ ನಾಲ್ಕು ಭಾಗಗಳಲ್ಲಿ 108 ಸೂರ್ಯನಮಸ್ಕಾರಗಳನ್ನು ಸಲ್ಲಿಸಿದರು. ಸೂರ್ಯಯಜ್ಞ ನೆರವೇರಿಸಿದ ಒಕ್ಕೂಟದ ಪದಾಧಿಕಾರಿಗಳು ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.-----------