ಸಾರಾಂಶ
- 11597 ರೈತರ ಬ್ಯಾಂಕ್ ಖಾತೆ ದಾಖಲಾತಿಗಳಲ್ಲಿ ವ್ಯತ್ಯಾಸಗಳಿದ್ದು, ಸರಿಪರಿಸಬೇಕಿದೆ: ಡಿಸಿ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವಾಗಿ ಎರಡನೇ ಕಂತಿನಲ್ಲಿ ಜಿಲ್ಲೆಯ 69575 ರೈತರಿಗೆ ₹44.35 ಕೋಟಿ ಇನ್ಫುಟ್ ಸಬ್ಸಿಡಿ ಬಿಡುಗಡೆ ಮಾಡಿದ್ದು, ದಾಖಲಾತಿ ಹೊಂದಾಣಿಕೆಯಾಗದ 11597 ರೈತರಿಗೆ ಪರಿಹಾರ ಬಿಡುಗಡೆ ಮಾಡಲು ಬ್ಯಾಂಕ್ ಖಾತೆ ದಾಖಲಾತಿಗಳನ್ನು ಸರಿಪಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬ್ಯಾಂಕರ್ಸ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊದಲ ಕಂತಿನಲ್ಲಿ ತಲಾ ₹2 ಸಾವಿರದಂತೆ 82928 ರೈತರಿಗೆ ಹಾಗೂ ಎರಡನೇ ಹಂತದಲ್ಲಿ 69575 ರೈತರಿಗೆ ಒಟ್ಟು ₹60.23 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಇನ್ನೂ 11597 ರೈತರಿಗೆ ಇನ್ಫುಟ್ ಸಬ್ಸಿಡಿ ಬಿಡುಗಡೆ ಮಾಡಬೇಕಾಗಿದೆ. ಇವರ ಖಾತೆಯ ವಿವರಗಳು ಸರಿಯಾಗಿರದ ಕಾರಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಇದರಲ್ಲಿ 5575 ರೈತರ ಖಾತೆಗಳಿಗೆ ಆಧಾರ್ ಜೋಡಣೆ ಆಗಿಲ್ಲ. ಐಎಫ್ಎಸ್ಸಿ ಕೋಡ್ ತಪ್ಪಾಗಿರುವ 3696, ಫ್ರೂಟ್ಸ್ ಮತ್ತು ಆಧಾರ್ಗೆ ಮಿಸ್ ಮ್ಯಾಚ್ ಆಗಿರುವ 1684, ಆಧಾರ್ ಜೋಡಣೆಯಾಗದ 244 ಸೇರಿದಂತೆ ವಿಫಲ ಪಾವತಿ ಸೇರಿದಂತೆ ಇತರೆ ಕಾರಣದಿಂದ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದರು.ಎಲ್ಲ ತಾಲೂಕುಗಳಲ್ಲಿ ಬೆಳೆ ನಷ್ಟ ಪರಿಹಾರ ಬಗ್ಗೆ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 1374 ಕರೆಗಳನ್ನು ಸ್ವೀಕರಿಸಲಾಗಿದೆ. ಬ್ಯಾಂಕ್ಗಳಲ್ಲಿ ಪ್ರತ್ಯೇಕವಾಗಿ ಸಹಾಯ ಮೇಜು ಸ್ಥಾಪನೆ ಮಾಡುವ ಮೂಲಕ ಆಧಾರ್ ಸೀಡಿಂಗ್ ಮಾಡುವುದು ಮತ್ತು ಆಧಾರ್ನಂತೆ ಬ್ಯಾಂಕ್ ಖಾತೆ ತಿದ್ದುಪಡಿ ಮಾಡುವ ಮೂಲಕ ಆದಷ್ಟು ಬೇಗ ರೈತರ ಖಾತೆಗಳಿಗೆ ಪರಿಹಾರ ಜಮಾ ಮಾಡಲು ದಾಖಲೆಗಳನ್ನು ಸರಿಪಡಿಸುವ ಕೆಲಸ ಎಲ್ಲ ಬ್ಯಾಂಕ್ಗಳಿಂದ ಆಗಬೇಕಾಗಿದೆ ಎಂದರು.
ಸಾಲಕ್ಕೆ ಪರಿಹಾರ ಜಮಾ ಮಾಡುವಂತಿಲ್ಲ:ರೈತರು ಬೆಳೆನಷ್ಟ ಅನುಭವಿಸಿದ್ದು, ಅವರಿಗೆ ಇನ್ಫುಟ್ ಸಬ್ಸಿಡಿ, ಬೆಳೆ ವಿಮಾ ಪರಿಹಾರ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ. ಇದನ್ನು ರೈತರು ಪಡೆದ ಸಾಲಕ್ಕೆ ತೀರುವಳಿ ಮಾಡಬಾರದು. ರೈತರು ಇವರಾರು ಬಿಎಂಡಬ್ಯ್ಲೂ ಕಾರ್ ಇಟ್ಟುಕೊಂಡಿಲ್ಲ. ಅವರಿಗೆ ಸಿಗುವ ಹತ್ತಾರು ಸಾವಿರದಲ್ಲಿ ಬೀಜ, ಗೊಬ್ಬರಕ್ಕೆ ಉಪಯೋಗ ಮಾಡಿಕೊಳ್ಳುವರು. ಆದ್ದರಿಂದ ಯಾವುದೇ ಬ್ಯಾಂಕ್ನವರು ಬೆಳೆ ಪರಿಹಾರ, ಉದ್ಯೋಗ ಖಾತ್ರಿ ಹಣವನ್ನು ಬಾಕಿ ಸಾಲಕ್ಕೆ ಮುರಿದುಕೊಳ್ಳಬಾರದು ಎಂದು ತಾಕೀತು ಮಾಡಿದರು. ಒಂದುವೇಳೆ ಈ ಸಂಬಂಧ ಹಣ ಪಡೆಯುವಂಥ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ವರದಿ ಮಾಡಲಾಗುತ್ತದೆ ಎಂದೂ ಎಚ್ಚರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಲೀಡ್ ಮ್ಯಾನೇಜರ್ ಪ್ರಕಾಶ್, ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.- - -
ಬಾಕ್ಸ್ ಸಾಲಕ್ಕೆ ಮಾಸಾಶನ ಚುಕ್ತಾ ಬೇಡಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ವಿಶೇಷಚೇತನರಿಗೆ ಬರುವ ಮಾಸಾಶನದ ಹಣವನ್ನು ಅವರ ಸಾಲಕ್ಕೆ ಚುಕ್ತಾ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳಿವೆ. ಸರ್ಕಾರ ವಿಕಲಚೇತನರ ಜೀವನಮಟ್ಟ ಸುಧಾರಣೆ ಮಾಡಲು ಮಾಸಾಶನ ನೀಡಲಾಗುತ್ತಿದೆ. ಈ ರೀತಿ ಆಗದಂತೆ ಸೂಕ್ತ ನಿರ್ದೇಶನ ನೀಡಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.- - -
-14ಕೆಡಿವಿಜಿ42ಃ:ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಬ್ಯಾಂಕರ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.